ವೃದ್ದನೋರ್ವನನ್ನು ಸ್ಕೂಟರ್ನಲ್ಲಿ ಎಳೆದೊಯ್ದ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಸಿಲುಕಿದ್ದರೂ ಕಾರು ನಿಲ್ಲಿಸದೇ ಹಾಗೇ ಕಿ.ಮೀ ವರೆಗೂ ಚಲಿಸಿಕೊಂಡು ಹೋಗಿರುವ ಅಮಾನವೀಯ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ಕಾರಿನ ನಡುವೆ ಸಣ್ಣ ಅಪಘಾತ ಸಂಭವಿಸಿತು. ಪ್ರಿಯಾಂಕಾ ಎಂಬುವವರು ಟಾಟಾ ನಿಕ್ಸಾನ್ ಕಾರು ಚಲಾಯಿಸುತ್ತಿದ್ದರು. ದರ್ಶನ್ ಎಂಬುವವರು ಮಾರುತಿ ಸ್ವಿಫ್ಟ್ ಕಾರ್ ಅನ್ನು ಚಲಾಯಿಸುತ್ತಿದ್ದರು.
ಅಪಘಾತ ನಡೆದಾಗ ಪ್ರಿಯಾಂಕಾ ಅವರು ದರ್ಶನ್ಗೆ ಮಧ್ಯದ ಬೆರಳು ತೋರಿಸಿದ್ದರಂತೆ ಅದಕ್ಕೆ ಕೋಪಗೊಂಡು ಅವರ ಕಾರು ಅಡ್ಡಗಟ್ಟಿ ವಾಗ್ವಾದಕ್ಕೆ ಇಳಿದಿದ್ದಾರೆ. ದರ್ಶನ್ ಅವರು ಕಾರಿನ ಬಾನೆಟ್ ಮೇಲೆ ಹತ್ತಿಕುಳಿತಿದ್ದಾರೆ. ಆದರೂ ಪ್ರಿಯಾಂಕಾ ಅವರು ಕಾರನ್ನು ಚಲಾಯಿಸಿಕೊಂಡು ಒಂದು ಕಿಮೀ ವರೆಗೂ ಸಾಗಿದ್ದಾರೆ.
ಇದನ್ನೂ ಓದಿ: 71 ವರ್ಷದ ವೃದ್ಧನನ್ನು ಕಿ.ಮೀ.ಗಟ್ಟಲೇ ಎಳೆದೊಯ್ದ ಸ್ಕೂಟಿ ಸವಾರ
ಆ ಬಳಿಕ ದರ್ಶನ್ ಕಡೆಯ ಹುಡುಗರು ಬಂದು ಪ್ರಿಯಾಂಕಾ ಅವರ ಕಾರು ಅಡ್ಡಗಟ್ಟಿ, ಗಾಜು ಪುಡಿಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಿಯಾಂಕಾ ಅವರ ಪತಿಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಮಹಿಳಾ ಚಾಲಕಿ ಪ್ರಿಯಾಂಕಾ ಮತ್ತು ಕಾರಿನ ಬಾನೆಟ್ ಮೇಲೆ ಸಿಲುಕಿದ ದರ್ಶನ್ ಎನ್ನುವ ವ್ಯಕ್ತಿ ಇಬ್ಬರನ್ನೂ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ.
ದರ್ಶನ್ ಹಾಗೂ ಆತನ ಸ್ನೇಹಿತರ ಮೇಲೆ ಲೈಂಗಿಕ ದೌರ್ಜನ್ಯ 354, 506 ಸೇರಿ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇದೀಗ ದರ್ಶನ್ ಹಾಗೂ ಆತನ ಸ್ನೇಹಿತರಾದ ಸುಜಯ್, ಯಶವಂತ್ ಹಾಗೂ ವಿನಯ್ ಎನ್ನುವವರನ್ನು ಬಂಧಿಸಲಾಗಿದೆ.
ಪ್ರಿಯಾಂಕಾ, ಪ್ರಮೋದ್ ಹಾಗೂ ನಿತೀಶ್ ಮೇಲೆಯೂ 307 ಕೊಲೆ ಯತ್ನ 506 ಸೇರಿ ಎಫ್ಐಆರ್ ದಾಖಲಾಗಿದ್ದು, ಅವರನ್ನೂ ಬಂಧನ ಮಾಡಲಾಗಿದೆ.