ಅಕ್ಟೋಬರ್ ನಲ್ಲಿ ನಡೆಯಲಿರುವ ಬಿಹಾರ ಚುನಾವಣಾ ಪ್ರಚಾರಕ್ಕೆ ಬಿಜೆಪಿಯು ಸುಶಾಂತ್ ಸಿಂಗ್ ರಜಪೂತ್ ಸಾವನ್ನು ಬಿಡದೇ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯು ತನ್ನ ಕರಪತ್ರಗಳಲ್ಲಿ ಸುಶಾಂತ್ ಫೋಟೊ ಜೊತೆಗೆ “#JusticeForSushanth” ಎಂದು ಬರೆದಿರುವ ಪೋಸ್ಟರ್, ಸ್ಟಿಕ್ಕರ್ಗಳನ್ನು ಬಿಡುಗಡೆ ಮಾಡಿದೆ.
ಜುಲೈ 14 ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನಲ್ಲಿರುವ ತನ್ನ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದನ್ನು ಮುಂಬೈ ಪೊಲೀಸರು ಆತ್ಮಹತ್ಯೆ ಎಂದು ಕರೆದಿದ್ದರು. ಈ ಸಾವಿನ ಸುತ್ತ ಅನುಮಾನಗಳು ಮೂಡಿದ್ದರಿಂದ, ಬಿಹಾರ ಪೊಲೀಸರ ಪೂರ್ಣಪ್ರಮಾಣದ ಎಫ್.ಐ.ಆರ್ ವರದಿಯ ಆಧಾರದ ಮೇಲೆ ನ್ಯಾಯಾಲಯವು ಈ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿಬಿಐ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನು ವಿಚಾರಣೆ ನಡೆಸುತ್ತಿದೆ. ಇತ್ತೀಚೆಗೆ ಈ ಸಾವಿಗೂ ಡ್ರಗ್ಸ್ ಗೂ ನಂಟಿದೆ ಎಂಬ ಸಂಶಯ ವ್ಯಕ್ತವಾಗಿದೆ.
ಈ ವಿಷಯವನ್ನು ರಾಜಕೀಯ ಬಂಡವಾಳ ಮಾಡಿಕೊಂಡಿರುವ ಬಿಜೆಪಿ, ಬಿಹಾರದ ಚುನಾವಣಾ ಪ್ರಚಾರಕ್ಕಾಗಿ ಬಿಡುಗಡೆ ಮಾಡಿರುವ ಸ್ಟಿಕ್ಕರ್ಗಳಲ್ಲಿ, “ಸುಶಾಂತ್ ಗೆ ನ್ಯಾಯ ದೊರಕಲಿ, ನಾ ಭೂಲೆ ಹೈ, ನಾ ಭೂಲ್ನೆ ದೇಂಗೆ (ನಾವು ಮರೆತಿಲ್ಲ, ಯಾರನ್ನೂ ಮರೆಯಲು ಬಿಡುವುದಿಲ್ಲ)” ಎಂದು ಬರೆದಿರುವ ಸುಮಾರು 25,000 ಸ್ಟಿಕ್ಕರ್ಗಳನ್ನು ಮತ್ತು 30,000 ಮಾಸ್ಕ್ ಗಳನ್ನು ಮುದ್ರಿಸಿ, ಜುಲೈ ತಿಂಗಳಿನಿಂದಲೇ ಹಲವು ಕಡೆ ವಿತರಿಸುತ್ತಿದೆ.
ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿ ಕೈಮುಗಿದು ಕ್ಷಮೆಯಾಚಿಸಲಿ: ಶಿವಸೇನೆ ಮುಖಂಡನ ಆಗ್ರಹ
ನಟನ ಸಾವನ್ನು ಮತಗಳಿಗಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ನಿಲುವನ್ನು ಖಂಡಿಸಿ ಆಲ್ ಇಂಡಿಯಾ ಪ್ರೊಫೆಷನಲ್ ಕಾಂಗ್ರೆಸ್ ಸೌತ್ ಮುಂಬೈ ನಿನ್ನೆ ಟ್ವೀಟ್ ಮಾಡಿದೆ.
After BJP loses Bihar elections poster will read “BJP ki sab se badi bhool, #SushantSinghRajput ki aatma peh pehka mitti aur dhool”! Disgusting! Spinning a conspiracy just to get votes! No respect for the departed! @AIPCMaha @GauravPandhi @sumedhbgaikwad pic.twitter.com/nuyRjOK0tF
— AIPC SOUTH MUMBAI (@aipcsouthmumbai) September 6, 2020
“ನಟನ ಸಾವು ನಮಗೆ ರಾಜಕೀಯ ವಿಷಯವಲ್ಲ, ಭಾವನಾತ್ಮಕ ವಿಷಯ. ಅದಾಗ್ಯೂ ಇದನ್ನು ರಾಜಕೀಯಗೊಳಿಸುತ್ತಿರುವುದು ಕೇವಲ ಕಾಕತಾಳೀಯವಷ್ಟೆ” ಎಂದು ರಾಜ್ಯ ಬಿಜೆಪಿ ಘಟಕದ ಕಲೆ ಮತ್ತು ಸಂಸ್ಕೃತಿ ವಿಭಾಗದ ವರುಣ್ ಕುಮಾರ್ ಸಿಂಗ್ ಹೇಳಿದ್ದಾರೆ ಎಂಬುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಜೊತೆಗೆ ಈಗಾಗಲೇ ಬಿಜೆಪಿ ನಿರ್ಮಿಸಿರುವ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನ ಮತ್ತು ಸಾಧನೆಯ ಕುರಿತಂತೆ ಎರಡು ಕಂತುಗಳ ವಿಡಿಯೋಗಳು ಶೀಘ್ರದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಲಿದೆ ಎಂದು ವರುಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಿಜೆಪಿಯು, ಪಾಟ್ನಾದ ರಾಜೀವ್ ನಗರದ ಚೌಕವೊಂದಕ್ಕೆ ಸುಶಾಂತ್ ಸಿಂಗ್ ರಜಪೂತ್ ಹೆಸರಿಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದೆ.
ಈ ಪೋಸ್ಟರ್ ಮತ್ತು ಸ್ಟಿಕ್ಕರ್ ಸಂಬಂಧಿತ ಚರ್ಚೆಗಳು ಬಿಜೆಪಿ ಮತ್ತು ಬಿಜೆಪಿಯೇತರ ಪಕ್ಷಗಳ ನಡುವೆ ವಾದ-ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್ ವಕ್ತಾರ ಮೃಂಜಯ್ ತಿವಾರಿ, “ಯಾರೊಬ್ಬರ ಮೃತದೇಹವನ್ನು, ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು” ಎಂದಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ಸಿಬಿಐ