ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಸಾರ್ವಜನಿಕ ಸಭೆಗೆ ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಹಿರಿಯ ಟಿಎಂಸಿ ನಾಯಕ ಮತ್ತು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಭೌಮಿಕ್ ಈ ಕುರಿತು ಮಾದ್ಯಮದ ಜೊತೆ ಮಾತನಾಡಿದ್ದು, ಸುವೇಂದು ಅಧಿಕಾರಿಯ ಸಭೆಯ ವೆಚ್ಚವನ್ನು ಪಾವತಿಸಲು ನಿರಾಕರಿಸಿದ್ದರಿಂದ ವ್ಯಾಪಾರಿಯನ್ನು ಸ್ಥಳೀಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಥಳಿಸಿದ್ದಾರೆ ಎಂದು ಹೇಳಿದ್ದಾರೆ.
ಟಿಎಂಸಿಯ ಭೌಮಿಕ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಬಿಜೆಪಿಯ ಮುಖವಾಡ ಕಳಚಿದೆ. ಪಕ್ಷದ ರ್ಯಾಲಿಗೆ ಹಣ ವಸೂಲಿ ಮಾಡಲು ಜನಸಾಮಾನ್ಯರ ಮೇಲೆ ದೌರ್ಜನ್ಯ ಎಸಗುವ ಬಿಜೆಪಿಯ ನೈಜತೆ ಬಯಲಾಗಿದೆ. ಸ್ಥಳೀಯ ಸಣ್ಣ ವ್ಯಾಪಾರಿಗಳಿಗೆ ಬಿಜೆಪಿ ಕಾರ್ಯಕರ್ತರು ಚಿತ್ರಹಿಂಸೆ ನೀಡುತ್ತಿದ್ದಾರೆ. ಹಲ್ಲೆಗೊಳಗಾದ ವ್ಯಾಪಾರಿಯ ಸ್ಥಿತಿಯು ಗಂಭೀರವಾಗಿದೆ. ಈ ಬಗ್ಗೆ ಸುವೇಂದು ಅಧಿಕಾರಿ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, ನಾದಿಯಾದಲ್ಲಿ ವ್ಯಾಪಾರಿಯೊಬ್ಬ ಬಿಜೆಪಿಯ ರ್ಯಾಲಿಗೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಆತನನ್ನು ಬಿಜೆಪಿಯ ಮಂಡಲ್ ಸಮಿತಿ ಅಧ್ಯಕ್ಷ ಹಾಗೂ ಆತನ ಸಹೋದರ ಇಬ್ಬರೂ ಸೇರಿ ಥಳಿಸಿದ್ದಾರೆ. ಬಿಜೆಪಿಯ ನೈಜ ಬಣ್ಣ ಬಯಲಾಗಿದೆ ಎಂದು ಹೇಳಿದೆ.
ಈ ಆರೋಪವನ್ನು ನಿರಾಕರಿಸಿರುವ ಬಿಜೆಪಿಯ ರಾಜ್ಯ ವಕ್ತಾರ ಸೌಮಿಕ್ ಭಟ್ಟಾಚಾರ್ಯ, ಟಿಎಂಸಿಯ ಆರೋಪವನ್ನು ಒಪ್ಪುವುದಿಲ್ಲ. ಬಿಜೆಪಿಯು ಎಂದಿಗೂ ಪುಂಡಾಟಿಕೆಯಾಗಲಿ, ಅನ್ಯಾಯದ ಸುಲಿಗೆಯಾಗಲಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: Social darvinismಗೆ ನಾವು ಅವಕಾಶ ಕೊಡಬಾರದು: ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚನೆ