ದೇಶವೇ ಲಾಕ್ಡೌನ್ ಆಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವಾಗ ಬಿಜೆಪಿ ಶಾಸಕರೊಬ್ಬರು ತಮ್ಮ ಹುಟ್ಟುಹಬ್ಬವನ್ನು ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಆ ಮೂಲಕ ತಮ್ಮದೇ ಪಕ್ಷದಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಮಾತುಗಳನ್ನು ಉಲ್ಲಂಘಿಸಿದ್ದು, ಜನರಿಂದ ವ್ಯಾಪಕ ಟೀಕೆಕ್ಕೊಳಗಾಗಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಇಡಗೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಜೆಪಿಯ ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲ ಜಯರಾಂ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮಸಲಾ ಜಯರಾಂ ತುರುವೇಕೆರೆ ಶಾಸಕರು. ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಇಡಗೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಲ್ಲದೇ, ಹುಟ್ಟುಹಬ್ಬಕ್ಕೆ ಬಿರಿಯಾನಿ ಮಾಡಿಸಿದ್ದು, ಶಾಸಕರೇ ಊಟ ಬಡಿಸುವ ವಿಡಿಯೋಗಳು ಹರಿದಾಡುತ್ತಿವೆ. ಪೊಲೀಸರೂ ಸಹ ಊಟ ಮಾಡಿದ್ದಾರೆ. ಲಾಕ್ಡೌನ್ ಆದಾಗಿನಿಂದ ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಬೀದಿಗೆ ಬಂದಾಗ ಮನಬಂದಂತೆ ಲಾಠಿ ಬೀಸಿದ ಅದೇ ಪೊಲೀಸರು ನಿನ್ನೆ ಶಾಸಕನ ಹುಟ್ಟುಹಬ್ಬದಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತಾವೂ ಭಾಗವಹಿಸಿ, ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಲೂ ಅವಕಾಶ ಕೊಟ್ಟಿದ್ದೇಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಮಸಾಲ ಜಯರಾಂ ತಮ್ಮ ಹುಟ್ಟುಹಬ್ಬವನ್ನು ಜನಸಂದಣಿಯ ನಡುವೆ ಆಚರಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ಮಾಡಿಕೊಂಡ ಮನವಿಯನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆ. ಲಾಕ್ಡೌನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅತ್ತ ಪ್ರಧಾನಿಗಳು ಅವಲತ್ತುಕೊಳ್ಳುತ್ತಿದ್ದರೆ ಇತ್ತ ಅವರದೇ ಪಕ್ಷದ ಶಾಸಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ದೇಶದಲ್ಲಿ ಕೊರೊನಾ ಮೂರನೇ ಹಂತಕ್ಕೆ ತಲುಪುತ್ತಿದೆ ಎಂದು ಪ್ರಧಾನಿ ಮತ್ತು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿರುವ ನಡುವೆಯೇ ಜನವಾಬ್ದಾರಿಯುತ ಸ್ಥಾನದಲ್ಲಿರುವ ಮತ್ತು ಜನರಿಗೆ ಬುದ್ದಿವಾದ ಹೇಳಬೇಕಾಗಿರುವ ಶಾಸಕರೇ ಈ ರೀತಿ ಜನಜಂಗುಳಿಯ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ಪೋಸ್ಟ್ಕಾರ್ಡ್ ಹರಡಿದ ಸುಳ್ಳು: ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧಿ ಕಂಡುಹಿಡಿದದ್ದು ಯಾರು?