ಬಿಹಾರದಲ್ಲಿ ಎನ್ಡಿಎ ಜೊತೆ ಮೈತ್ರಿ ಮುರಿದುಕೊಂಡು ಮಹಾಘಟಬಂಧನ್ ಮೈತ್ರಿ ಮೂಲಕ ಸಿಎಂ ಆಗಿದ್ದ ನಿತೀಶ್ ಕುಮಾರ್ರವರು ಇಂದು ತಮ್ಮ ಸರ್ಕಾರದ ಬಹುಮತ ಸಾಬೀತು ಮಾಡಿದ್ದಾರೆ.
ಇಂದು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿತ್ತು. ಬೆಳಿಗ್ಗೆ ಬಿಜೆಪಿಯ ಸ್ಪಿಕರ್ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ ನೀಡಿದ್ದರು. ಹಾಗಾಗಿ ಕಲಾಪವನ್ನು ಮಧ್ಯಾಹ್ನಕ್ಕೆ ಮೂಂದೂಡಲಾಗಿತ್ತು. ನಂತರ ಉಪ ಸ್ಪೀಕರ್ ಮಹೇಶ್ವರ್ ಅಜಾರಿಯವರು ಅಧಿವೇಶನವನ್ನು ಮುನ್ನಡೆಸಿದರು.
ಮಧ್ಯಾಹ್ನದ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸ ಸದನದಿಂದ ಹೊರನಡೆದರು. ಆ ಸಂದರ್ಭದಲ್ಲಿ ಸಿಎಂ ನಿತೀಶ್ ಕುಮಾರ್ರವರು ವಿಶ್ವಾಸಮತ ಯಾಚನೆ ಮಾಡಿದರು. ಸದನದ ಬಹುತೇಕ ಸದಸ್ಯರು ಬೆಂಬಲ ಸೂಚಿಸಿದ್ದರಿಂದ ನಿತೀಶ್ ವಿಶ್ವಾಸಮತ ಗೆದ್ದಿದ್ದಾರೆ.
ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿಯೇ ಇಂದು ಬೆಳಿಗ್ಗೆ ಆರ್ಜೆಡಿಯ ರಾಜ್ಯಸಭಾ ಸಂಸದ ಅಹ್ಮದ್ ಅಶ್ಫಾಕ್ ಕರೀಂ ಮತ್ತು ಬಿಹಾರದ ವಿಧಾನ ಪರಿಷತ್ ಸದಸ್ಯ ಸುನೀಲ್ ಸಿಂಗ್ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯುಪಿಎ-1 ರ ಕಾಲದಲ್ಲಿ ಲಾಲೂ ಪ್ರಸಾದ್ ಯಾದವ್ರವರು ರೈಲ್ವೆ ಸಚಿವರಾಗಿದ್ದಾಗ ಉದ್ಯೋಗ ನೀಡುವುದಕ್ಕಾಗಿ ಭೂಮಿ ಲಂಚ ಪಡೆದ ಹಗರಣದ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ಬಿಹಾರದಲ್ಲಿ ಇಂದು ವಿಶ್ವಾಸಮತ ಯಾಚನೆ ಬೆನ್ನಲ್ಲೆ RJD ಹಿರಿಯ ನಾಯಕರ ಮನೆ ಮೇಲೆ CBI ದಾಳಿ