ಡಿಪ್ಲೊಮಾ ಕೃಷಿ ಮುಗಿಸಿದ ವಿದ್ಯಾರ್ಥಿಗಳನ್ನು ಕೃಷಿ ಇಲಾಖೆಯ ರೈತಮಿತ್ರ (ಕೃಷಿ ಸಹಾಯಕ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಡಿಪ್ಲೊಮಾ ಕೃಷಿ ಪದವೀಧರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ ಡಿಪ್ಲೊಮಾ ಕೃಷಿ ಪದವೀಧರರು, ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದರು.
ರಾಜ್ಯದ ಕೃಷಿ ಮತ್ತು ತೋಟಗಾರಿಕೆ ವಿವಿಗಳಲ್ಲಿ 2011ರಿಂದ ಡಿಪ್ಲೊಮಾ ಕೃಷಿ ಪ್ರಾರಂಭವಾಗಿ ಇಲ್ಲಿಯವರೆಗೆ ಸರಿಸುಮಾರು 5,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ನಿರುದ್ಯೋಗಿಳಾಗಿರುತ್ತಾರೆ. ಕೃಷಿಗೆ ಸಂಬಂಧಿಸಿದಂತೆ 35ಕ್ಕಿಂತ ಹೆಚ್ಚು ವಿಷಯಗಳಲ್ಲಿ ಪ್ರಾಯೋಗಿಕವಾಗಿ ವಿಶೇಷ ಜ್ಞಾನ ಪಡೆದಿದ್ದರೂ ಯಾವುದೇ ಉದ್ಯೋಗ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೃಷಿ ಸಚಿವರಿಗೆ ಅನೇಕ ಸಲ ಮನವಿ ಮಾಡಿದಾಗ ನಿಮ್ಮ ಬೇಡಿಕೆ ನ್ಯಾಯೋಚಿತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಕೋವಿಡ್ ಬಿಕ್ಕಟ್ಟಿನ ಕಾರಣ ನೀಡಿ ಇದುವರೆಗೂ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.
“ಆದಷ್ಟು ಬೇಗ ನೇಮಕಾತಿ ಮಾಡುವ ಭರವಸೆಯನ್ನು ಕೃಷಿ ಸಚಿವರು ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ನೇಮಕಾತಿಗೆ ಚಾಲನೆ ದೊರೆತಿಲ್ಲ. ಆದ ಕಾರಣ ಕೃಷಿ ಸಚಿವರು ನಮ್ಮ ಮನವಿಯನ್ನು ಪರಿಗಣಿಸಿ ಕೃಷಿ ಇಲಾಖೆಯಲ್ಲಿ ರೈತಮಿತ್ರ (ಕೃಷಿ ಸಹಾಯಕ) ಹುದ್ದೆಗಳಿಗೆ ಡಿಪ್ಲೊಮಾ ಕೃಷಿ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೃಷಿ ಡಿಪ್ಲೊಮಾ ಪದವೀಧರ ಮಂಜುನಾಥ್ ಮುದ್ದೆ, “ನೇಮಕಾತಿ ಮಾಡುತ್ತೇನೆ, ಪದವೀಧರರ ಸೇವೆಯನ್ನು ರೈತರಿಗೆ ಕೊಡಿಸುತ್ತೇನೆ, ಇಲಾಖೆಯನ್ನು ಬಲಪಡಿಸುತ್ತೇನೆ ಎಂದು ಮಾಧ್ಯಮಗಳ ಮುಖಾಂತರ ಸಚಿವರು ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ನೇಮಕಾತಿ ಮಾತ್ರ ನಡೆದಿಲ್ಲ. ನಮ್ಮ ವಯೋಮಿತಿ ಮೀರುತ್ತಿದೆ. ರೈತರಿಗೆ ಸಮರ್ಪಕವಾಗಿ ಕೃಷಿ ಮಾಹಿತಿಗಳನ್ನು ದೊರೆಕಿಸಲು, ಇಲಾಖೆಯನ್ನು ಬಲಪಡಿಸಲು ಹಾಗೂ ಕೃಷಿ ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಪಡಿಸಲು ತಕ್ಷಣವೇ ನೇಮಕಾತಿಗೆ ಆದೇಶ ಹೊರಡಿಸಬೇಕು” ಎಂದು ಒತ್ತಾಯಿಸಿದರು.