ಪೂರ್ತಿ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ ಜನರು ತೀರ್ಮಾನಿಸಬೇಕು. ಅನರ್ಹತೆ ಮಾಡಿದ್ದು ಪಕ್ಷಾಂತರ ಮಾಡಿದ್ದಕ್ಕೆ, ಆದರೆ ಅದನ್ನು ಕೋರ್ಟು ಒಪ್ಪುತ್ತಿಲ್ಲ. ಆದರೂ ಅವರು ಚುನಾವಣೆಗೆ ನಿಂತರೂ ಸಹ ಜನರು ಅವರನ್ನು ಸೋಲಿಸುತ್ತಾರೆ. ಇದಕ್ಕೆ ಗುಜರಾತ್ ಮತ್ತು ಮಹಾರಾಷ್ಟ್ರದ ಚುನಾವಣೆ ನಮಗೆ ತೋರಿಸಿದೆ. ಅಲ್ಲಿ ಪಕ್ಷಾಂತರ ಮಾಡಿದ ಬಹಳಷ್ಟು ಜನ ಸೋತಿದ್ದರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಈ 15 ಅನರ್ಹ ಎಂಎಲ್ಎಗಳನ್ನು ಸಹ ಸೋಲಿಸುತ್ತೇವೆ ಎಂಬ ವಿಶ್ವಾಸವಿದೆ. ನಾನು ಸೋಲಿಸುತ್ತೇನೆ ಎಂದಲ್ಲ ಬದಲಿಗೆ ಮತದಾರರು ಸೋಲಿಸುತ್ತಾರೆ ಎಂದಿದ್ದಾರೆ.
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡಿ ಈ ತೀರ್ಪು ನಮ್ಮ ಪಾಲಿಗೆ ಗೆಲುವಾಗಿದೆ. ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡಿ ಇಂದು ಸಂಜೆ ಕೋರ್ ಕಮಿಟಿ ಸಭೆ ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತು ಜೆಪಿ ನಡ್ಡಾರವರೊಂದಿಗೆ ಮಾತನಾಡಿ ಕೋರ್ ಕಮಿಟಿ ಸಭೆ ಬೆಂಗಳೂರಿನಲ್ಲಿಯೇ ನಡೆದರೆ ಒಳ್ಳೆಯದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಎಲ್ಲಾ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಸಂಜೆಯ ಕೋರ್ ಕಮಿಟಿ ಸಭೆಯಲ್ಲಿ ಔಪಚಾರಿಕ ಪ್ರಸ್ತಾಪ ಮಾಡುತ್ತಾರಾದರೂ ಕೂಡ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಶುಕ್ರವಾರ ಅನರ್ಹ ಶಾಸಕರೆಲ್ಲರೂ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರುವ ಮಾತುಕತೆ ನಡೆಯುತ್ತಿದೆ.