ಜೂನ್ 9 ಬುಧವಾರ ಕಾಂಗ್ರೆಸ್ ನ ಹಿರಿಯ ನಾಯಕ ಜಿತಿನ್ ಪ್ರಸಾದ್ ಕೇಂದ್ರ ಮಂತ್ರಿ ಪಿಯುಶ್ ಗೋಯಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಜಿತಿನ್ ಪ್ರಸಾದ್ ಬಿಜೆಪಿ ಸೇರ್ಪಡೆ ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆಯೆಂದು ಅನೇಕರು ಚರ್ಚಿಸುತ್ತಿದ್ದಾರೆ. ಒಂದು ಕಾಲದಲ್ಲಿ ರಾಹುಲ್ ಗಾಂಧಿಯ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮತ್ತು ಕೇಂದ್ರದಲ್ಲಿ ಎರಡು ಅವಧಿಗೆ ಮಂತ್ರಿಯಾಗಿದ್ದ ಜಿತಿನ್ ಪ್ರಸಾದ್ ಬಿಜೆಪಿಯತ್ತ ಮುಖ ಮಾಡಿದ್ದು ಯಾಕೆ ? ಜಿತಿನ್ ಪ್ರಸಾದ್ ಸೇರ್ಪಡೆಯ ಹಿಂದಿನ ಬಿಜೆಪಿಯ ರಾಜಕೀಯ ಲೆಕ್ಕಾಚಾರವೇನು?
ಜಿತಿನ್ ಪ್ರಸಾದ್ ಕಾಂಗ್ರೆಸ್ ತೊರೆಯಲು ಮುಂದಾಗಿದ್ದು ಯಾಕೆ ?
ಕಾಂಗ್ರೆಸ್ ನ ಹಿರಿಯ ನಾಯಕ ಜಿತಿನ್ ಪ್ರಸಾದ್ ಕಳೆದ ವರ್ಷ “ಪಕ್ಷದ ನಾಯಕತ್ವದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕು. ನೆಹರು-ಗಾಂಧಿ ಪರಿವಾರದವರನ್ನು ಹೊರತುಪಡಿಸಿ ಇತರರು ಕಾಂಗ್ರೆಸ್ ನ ಅಧ್ಯಕ್ಷರಾಗಬೇಕು. ಸೋನಿಯಾ-ರಾಹುಲ್ ಆಪ್ತ ವಲಯವನ್ನು ಹೊರತುಪಡಿಸಿ ಇತರರಿಗೂ ಅಧಿಕಾರ ನೀಡಬೇಕೆಂದು” ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಜಿತಿನ್ ಪ್ರಸಾದ್ ಜೊತೆಗೆ ಕಪಿಲ್ ಸಿಬಲ್, ಶಶಿ ತರೂರ್ ಸೇರಿ ಉಳಿದ 22 ನಾಯಕರೂ ಸಹ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. G-23 ಎಂದು ಕರೆಯಲಾಗುವ ಈ ನಾಯಕರ ಗುಂಪನ್ನು ಕಾಂಗ್ರೆಸ್ ಹೈಕಮಾಂಡ್ ಕ್ರಮೇಣ ಕಡೆಗಣನೆ ಮಾಡುತ್ತಲೇ ಬಂದಿದೆ. ನಡುವೆ ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆ ಉಸ್ತುವಾರಿಯನ್ನು ಜಿತಿನ್ ಪ್ರಸಾದ್ ಅವರಿಗೆ ನೀಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಸಹ ಗೆಲುವು ಸಾಧಿಸಿಲ್ಲ. ಇದೆಲ್ಲ ಬೆಳವಣಿಗೆಯಿಂದ ಜಿತಿನ್ ಪ್ರಸಾದ್ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪಾಗಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರೇಣುಕಾದೇವಿ ಶರ್ಮ ವಿರುದ್ಧ ಸೋತ ನಂತರ ಜಿತಿನ್ ಪ್ರಸಾದ್ ಮತ್ತೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿಲ್ಲ. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿತಿನ್ ಪ್ರಸಾದ್ ಬಿಜೆಪಿಯಿಂದ ತಮ್ಮ ರಾಜಕೀಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ
ಇದನ್ನೂ ಓದಿ : ನಮ್ಮ ವಿವಾಹಕ್ಕೆ ಕಾನೂನಿನ ಮಾನ್ಯತೆಯಿಲ್ಲ ಹಾಗಾಗಿ ವಿಚ್ಛೇದನದ ಪ್ರಶ್ನೆಯಿಲ್ಲ- ಟಿಎಂಸಿ ಸಂಸದೆ ನುಸ್ರತ್
ಜಿತಿನ್ ಪ್ರಸಾದ್ ಸೇರ್ಪಡೆಯ ಹಿಂದಿನ ಬಿಜೆಪಿ ರಾಜಕೀಯ ಲೆಕ್ಕಾಚಾರವೇನು ?
ಜಿತಿನ್ ಪ್ರಸಾದ್ ಮೂಲತಃ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರಾಜಕೀಯ ನಾಯಕ. ಉತ್ತರ ಪ್ರದೇಶದಲ್ಲಿ ಸರಿ ಸುಮಾರು 10% ಮತದಾರರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 90 ರ ದಶಕದಿಂದಲೂ ಬ್ರಾಹ್ಮಣ ಸಮುದಾಯ ಬಿಜೆಪಿಯ ಬೆನ್ನಿಗೆ ನಿಂತಿದೆ. ಆದರೆ 2011 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ರಜಪೂತ ಸಮುದಾಯಕ್ಕೆ ಸೇರಿದ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದು ಬ್ರಾಹ್ಮಣ ಸುಮುದಾಯಕ್ಕೆ ಸರಿ ಬಂದಿರಲಿಲ್ಲ. ಅದರ ನಡುವೆ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯ ಹತ್ಯೆ ಕೂಡ ಬ್ರಾಹ್ಮಣ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಳ್ಳುವಂತೆ ಮಾಡಿತ್ತು. ಜೊತೆಗೆ ಯೋಗಿ ಆದಿತ್ಯನಾಥ್ ಮತ್ತು ರಾಜ್ಯದ ಇತರ ಬಿಜೆಪಿ ನಾಯಕರ ನಡುವಿನ ಸಂಬಂಧ ಹಳಸಿದೆ ಎಂದು ಹೇಳಲಾಗುತ್ತಿದೆ. ಪಕ್ಷದಿಂದ ದೂರ ಸರಿಯುತ್ತಿರುವ ಬಿಜೆಪಿಯ ಬ್ರಾಹ್ಮಣ ವೋಟ್ ಬ್ಯಾಂಕ್ ಅನ್ನು ಹಿಡಿದಿಡಲು ಜಿತಿನ್ ಪ್ರಸಾದ್ ಸೇರ್ಪಡೆ ಬಿಜೆಪಿಗೆ ಬಲ ತುಂಬಲಿದೆ ಎನ್ನಲಾಗಿದೆ.
ರೀಟಾ ಬಹುಗುಣ ಜೋಶಿಯವರನ್ನು ಬಿಜೆಪಿ ಹಿಂದೆ ಬ್ರಾಹ್ಮಣ ಸಮುದಾಯದ ನಾಯಕಿಯನ್ನಾಗಿ ಬಿಂಬಿಸಿತ್ತು. ಆದರೆ ರಿಟಾ ಬಹುಗುಣ ಜೋಶಿಯವರಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಿರಲಿಲ್ಲ. ಅವರು ಉತ್ತರ ಪ್ರದೇಶದಲ್ಲಿ ಹೆಚ್ಚು ಜನಪ್ರಿಯರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಜಿತಿನ್ ಪ್ರಸಾದ್ ಸೇರ್ಪಡೆ ಉತ್ತರ ಪ್ರದೇಶ ಬಿಜೆಪಿಗೆ ಬ್ರಾಹ್ಮಣ ಮತಬ್ಯಾಂಕ್ ಅನ್ನು ಸೆಳೆಯಲು ಒಂದಷ್ಟು ಬಲ ತುಂಬಲಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ದಿನೇ ದಿನೇ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಮತ್ತೊಂದೆಡೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯವತಿಯ BSP ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮತ್ತು ಕೆಲವು ಸಮುದಾಯಗಳಲ್ಲಿತಮ್ಮ ಪ್ರಭಾವವನ್ನು ಹೊಂದಿವೆ. 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಬಿಜಿಪಿ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಿದೆ. ಕೋವಿಡ್ ನಿರ್ವಹಣೆಯಲ್ಲಿ ಯೋಗಿ ಆದಿತ್ನಾಥ್ ಸರ್ಕಾರದ ವೈಫಲ್ಯ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡುವ ಸಾದ್ಯತೆಯನ್ನು ಅರಿತ ಬಿಜೆಪಿ ಈಗ ಬೇರೆ ಬೇರೆ ಸಮುದಾಯಗಳ ನಾಯಕತ್ವವನ್ನು ಬಲಪಡಿಸಲು ಮುಂದಾಗಿದೆ. ಆ ಪ್ರಯತ್ನವಾಗಿ ಇಂದು ಜಿತಿನ್ ಪ್ರಸಾದ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದೆ. ಜಿತಿನ್ ಪ್ರಸಾದ್ ಸೇರ್ಪಡೆ ಬಿಜೆಪಿಗೆ ಎಷ್ಟು ನೆರವಾಗಲಿದೆ ಎಂದು ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ನಂತರವಷ್ಟೇ ತಿಳಿಯಬಹುದು.
ಇದನ್ನೂ ಓದಿ : ಮಾನ್ಸೂನ್ ಮಳೆಯ ಆರ್ಭಟಕ್ಕೆ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತ