40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಲೀಂ ಅಹಮ್ಮದ್, ”ಬಿಜೆಪಿಯವರ ಡಿಎನ್ಎ ಆಪರೇಶನ್ ಕಮಲ. ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುವವರು ನಿದ್ದೆಯಲ್ಲಿ ಮಾತಾಡುತ್ತಿರಬಹುದು. ಅವರಿಗೆ ವಾಸ್ತವ ಸ್ಥಿತಿ ಗೊತ್ತಿಲ್ಲ” ಎಂದರು.
”ಈ ಹಿಂದೆ ನಮ್ಮ ಶಾಸಕರನ್ನು ಬಾಂಬೆಗೆ ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದರು. ಮಧ್ಯಪ್ರದೇಶದಲ್ಲಿ ಆಪರೇಶನ್ ಮಾಡಿದ್ದಾರೆ. ಬಿಎಲ್ ಸಂತೋಷ್ ಅವರು ಕನಸು ಕಾಣುತ್ತಿದ್ದಾರೆ. ಸಂತೋಷ್ ನಿದ್ದೆಯಲ್ಲಿ ಮಾತಾಡುತ್ತಿರಬಹುದು. ಬಿಜೆಪಿ ಶಾಸಕರು ನಮ್ಮ ಪಕ್ಷಕ್ಕೆ ಬರುವುದು ಜಗಜ್ಜಾಹೀರಾಗಿದೆ. ಸಂತೋಷ್ ಅವರಿಗೆ ವಾಸ್ತವ ಸ್ಥಿತಿ ಗೊತ್ತಿಲ್ಲ. ಅವರ ಹೇಳಿಕೆಗೆ ನಗಬೇಕೋ ಏನೋ ಮಾಡಬೇಕೋ ಗೊತ್ತಿಲ್ಲ” ಎಂದು ಹೇಳಿದ್ದಾರೆ.
”ಕಳೆದ ಬಾರಿ ಚುನಾವಣೆಯಲ್ಲಿ ಜನ ಬಿಜೆಪಿಗೆ ಉತ್ತರ ಕೊಟ್ಟಿದ್ದಾರೆ. ಮೋದಿ ಸುಳ್ಳು ಹೇಳುತ್ತಾ ಒಂಬತ್ತು ವರ್ಷ ಕಳೆದಿದ್ದಾರೆ. ನಾವು 100 ದಿನದಲ್ಲಿ ನುಡಿದಂತೆ ನಡೆದಿದ್ದೇವೆ. ಯಾವ ಘನಕಾರ್ಯ ಮಾಡೀದ್ದೀರಿ ಅಂತಾ ಜನ ನಿಮಗೆ ಉತ್ತರ ಕೊಡಬೇಕು? ನಾವು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೆತ್ತಲೆ ಮಾಡುತ್ತೇವೆ” ಎಂದರು.
”ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜೀನಾಮೆ ಕೊಡಿಸಿದ ಕಣ್ಣೀರ ಕಥೆಗೆ ಉತ್ತರ ಕೊಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಆಪರೇಶನ್ ಹಸ್ತದ ಅವಶ್ತಕತೆ ಇಲ್ಲ. ನಮಗೆ ಅದರ ಅನಿವಾರ್ಯತೆ ಇಲ್ಲ. ಕಾಂಗ್ರೆಸ್ ಒಪ್ಪಿ ಕೆಲವರು ಬರುತ್ತಿದ್ದಾರೆ” ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
ಇದನ್ನೂ ಓದಿ: ಆಪರೇಷನ್ ಕಮಲ ಆರಂಭವಾಗುತ್ತದೆ, ಬೇಕಿದ್ದರೆ ಕಾದು ನೋಡಿ: ಪ್ರಿಯಾಂಕ್ ಖರ್ಗೆಗೆ ಈಶ್ವರಪ್ಪ ತಿರುಗೇಟು