ಧರ್ಮವೆಂಬುದು ತಮ್ಮ ನ್ಯೂನತೆಗಳನ್ನು ಮರೆಮಾಚುವ ಆಯುಧದಂತೆ ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕಿಡಿಕಾರಿದ್ದಾರೆ.
ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಅವರು, ”ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಉರಿಯುತ್ತಿರುವ ಜ್ವಾಲೆಯಲ್ಲಿ ತಾವು ಬೆಚ್ಚಗಿರಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯು ಏಕತೆಯ ಪ್ರಜ್ಞೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.
”ಮಣಿಪುರದಲ್ಲಿ ಹೊತ್ತಿಕೊಂಡ ಮತೀಯ ಬೆಂಕಿಯು ರಾಜ್ಯವನ್ನು ಸುಟ್ಟುಹಾಕಿತು. ಹರಿಯಾಣದಲ್ಲಿ ಧಾರ್ಮಿಕ ಮತಾಂಧತೆಯ ಬೆಂಕಿ ಅಮಾಯಕರ ಜೀವ ಮತ್ತು ಆಸ್ತಿಯನ್ನು ಬಲಿಪಡೆಯಿತು” ಎಂದು ಕಿಡಿಕಾರಿದ್ದಾರೆ.
”2024ರ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರಬೇಕು ಎಂಬುದಕ್ಕಿಂತ, ಯಾರು ಅಧಿಕಾರಕ್ಕೆ ಬರಬಾರದು ಎಂಬುದು ಮುಖ್ಯವಾಗಿದೆ” ಎಂದು ಸ್ಟಾಲಿನ್ ಹೇಳಿದರು.
ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ: ಉದಯನಿಧಿ ಸ್ಟಾಲಿನ್
”ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ. ಈ ರೋಗಿಗಳ ವಿರುದ್ಧ ಹೋರಾಡಿದರೆ ಸಾಲದು ಅದನ್ನು ಬುಡಸಮೇತ ಹೇಗೆ ನಿರ್ಮೂಲನೆ ಮಾಡಬೇಕೋ ಹಾಗೆಯೇ ಸನಾತನ ಧರ್ಮವನ್ನು ಕೂಡ ನಿರ್ಮೂಲನೆ ಮಾಡಬೇಕು” ಎಂದು ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದರು.
”ಸನಾತನ ಧರ್ಮವನ್ನು ಅನುಸರಿಸುವ ಜನರ ನರಮೇಧಕ್ಕೆ ನಾನು ಎಂದಿಗೂ ಕರೆ ನೀಡಿಲ್ಲ . ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ. ಸನಾತನ ಧರ್ಮವನ್ನು ಕಿತ್ತುಹಾಕುವುದು ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯುತ್ತದೆ” ಎಂದಿದ್ದರು.
”ನಾನು ಮಾತನಾಡುವ ಪ್ರತಿಯೊಂದು ಮಾತಿಗೂ ದೃಢವಾಗಿ ನಿಲ್ಲುತ್ತೇನೆ. ಸನಾತನ ಧರ್ಮದಿಂದ ಬಳಲುತ್ತಿರುವ ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವವರ ಪರವಾಗಿ ಮಾತನಾಡಿದ್ದೇನೆ” ಎಂದು ಉದಯನಿಧಿ ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾದಂತೆ ನಿರ್ಮೂಲನೆ ಮಾಡಬೇಕು: ಉದಯನಿಧಿ ಸ್ಟಾಲಿನ್