ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಳವಾಗುತ್ತಿದ್ದಂತೆ ವಿದ್ಯಾರ್ಥಿಗಳು ಖಿನ್ನತೆ, ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂಬುವುದನ್ನು ಪತ್ತೆ ಹಚ್ಚಲು ವಾರ್ಡನ್ಗಳು, ಮೆಸ್ ಕೆಲಸಗಾರರು ಮತ್ತು ಆಹಾರ ಪೂರೈಕೆದಾರರನ್ನು ನಿಯೋಜಿಸಲಾಗುತ್ತಿದೆ.
ಕೋಟಾದ ಎಎಸ್ಪಿ ಚಂದ್ರಶೀಲ್ ಠಾಕೂರ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ನಾವು ‘ದರ್ವಾಜೆ ಪೇ ದಸ್ತಕ್’ ಎಂಬ ಅಭಿಯಾನವನ್ನು ಆರಂಭಿಸಿದ್ದೇವೆ. ಅಭಿಯಾನದ ಭಾಗವಾಗಿ ರಾತ್ರಿ 11 ಗಂಟೆಯ ಸುಮಾರಿಗೆ ವಿದ್ಯಾರ್ಥಿಗಳ ಕೊಠಡಿಯ ಬಾಗಿಲು ಬಡಿಯುವುದನ್ನು ರೂಢಿ ಮಾಡಿಕೊಳ್ಳುವಂತೆ ವಾರ್ಡನ್, ಪಿಜಿ, ಮೆಸ್ ಕೆಲಸಗಾರರಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಮೆಸ್ನಲ್ಲಿ ಆಹಾರ ಸೇವನೆಗೆ ಗೈರಾಗುವವರು ಮತ್ತು ತಟ್ಟೆಯಲ್ಲಿ ಊಟ ಬಿಡುತ್ತಿರುವವರ ಮೇಲೆ ಕಣ್ಣಿಡುವಂತೆ ಪೊಲೀಸರು, ಹಾಸ್ಟೆಲ್ಗಳ ವಾರ್ಡನ್ಗಳು ಮತ್ತು ಮೆಸ್ ಕೆಲಸಗಾರರಿಗೆ ತಿಳಿಸಿದ್ದಾರೆ. ಇಂಥ ಲಕ್ಷಣಗಳು ಕಂಡು ಬಂದ ಕೂಡಲೇ ತಿಳಿಸುವಂತೆ ಹೇಳಿದ್ದಾರೆ.
2023ರಲ್ಲಿ ರಾಜಸ್ಥಾನದ ಕೋಟಾದಲ್ಲಿ 22 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ ಆ.27ರಂದು ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ರಾಜಸ್ಥಾನದ ಕೋಟಾದಲ್ಲಿ ಜೆಇಇ, ನೀಟ್, ಯುಪಿಎಸ್ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ವಾರ್ಷಿಕ 2.5 ಲಕ್ಷ ವಿದ್ಯಾರ್ಥಿಗಳು ಕೋಟಕ್ಕೆ ಬಂದು ತರಬೇತಿ ಕೇಂದ್ರಗಳಿಗೆ ದಾಖಲಾಗುತ್ತಾರೆ. ಕಳೆದ ಕೆಲ ವರ್ಷಗಳಲ್ಲಿ ವಿದ್ಯಾರ್ಥಿಗಳು ಇದೇ ಪ್ರದೇಶಗಳಲ್ಲಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಇದನ್ನು ಓದಿ; 370ನೇ ವಿಧಿ ರದ್ದತಿ ವಿರುದ್ಧ ವಾದಿಸಿದ ಉಪನ್ಯಾಸಕರ ಅಮಾನತು ರದ್ದು