ಮಹಿಷ ದಸರಾ ವಿರೋಧಿಸಿ ಬಿಜೆಪಿಯಿಂದ ಚಲೋ ಚಾಮುಂಡಿಬೆಟ್ಟ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ”ಒಂದು ಗುಂಪು ಅ. 13ರಂದು ಮಹಿಷ ದಸರಾ ನಡೆಸುತ್ತಿದೆ. ಏಕೆ ಆಚರಿಸಲಾಗುತ್ತಿದೆ ಎಂಬ ಸಮರ್ಥನೆಯನ್ನು ನೀಡಿದೆ. ಹೀಗಿರುವಾಗ, ವಿರೋಧ ಮಾಡುವುದೇಕೆ? ಬಿಜೆಪಿಯ ಸಂಸದ ಪ್ರತಾಪ ಸಿಂಹಗೆ ಯೋಗ್ಯತೆ ಇಲ್ಲ. ಬಿಜೆಪಿಯವರು ಭೂತಕಾಲದಲ್ಲಿ ತಿರುಗಾಡುತ್ತಿದ್ದಾರೆ.ವರ್ತಮಾನದ ಬಗ್ಗೆ ಅವರಿಗೆ ಯೋಚನೆಯೇ ಇಲ್ಲ” ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಯಾರಿಂದ ಗೆದ್ದಿದ್ದಾರೆ? ಕಾಂಗ್ರೆಸ್ ಚಿಹ್ನೆ ಹಾಗೂ ಸಿದ್ದರಾಮಯ್ಯ ಅವರಿಂದಾಗಿ ಗೆದ್ದಿದ್ದಾರೆ. ಅವರಿಗೆ ಎಲ್ಲ ವರ್ಗದವರೂ ಮತ ಹಾಕಿದ್ದಾರೆ. ಹೀಗಿರುವಾಗ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
‘ಅವರು ಯಾರನ್ನಾದರೂ ಗೆಲ್ಲಿಸಿಕೊಂಡು ಬಂದಿದ್ದಾರೆಯೇ?’ ಎಂದು ಕೇಳಿದರು.
ಮಹಿಷ ದಸರಾ ಆಚರಣೆ ಸಮಿತಿಯ ಅಧ್ಯಕ್ಷರ ವಿರುದ್ಧ ಸಾಮಾಜಿಕ ಕಾರ್ಯಕರ್ತನೆನ್ನಲಾದ ಸ್ನೇಹಮಯಿ ಕೃಷ್ಣ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಸಮಿತಿ ಅಧ್ಯಕ್ಷರಿಗೆ ಈ ಬಗ್ಗೆ ಕೋರ್ಟ್ ತುರ್ತು ನೊಟೀಸ್ ನೀಡಿ ಅ.11ಕ್ಕೆ ವಿಚಾರಣೆ ಮುಂದೂಡಿದೆ.
ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಪುರಾಣದಲ್ಲಿ ರಾಕ್ಷಸನೆಂದು ಗುರುತಿಸಲ್ಪಟ್ಟ ಮಹಿಷಾಸುರನನ್ನು ವೈಭವೀಕರಿಸಿ ಮಹಿಷ ದಸರಾ ಆಚರಿಸಲಾಗುತ್ತಿದೆ. ಈ ಬಗ್ಗೆ ಮಾದ್ಯಮಗಳಲ್ಲಿ ಮಾತನಾಡುವಾಗ ಚಾಮುಂಡೇಶ್ವರಿ ದೇವಿಯ ಬಗ್ಗೆ ಆಧಾರ ಇಲ್ಲದೆ ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಇನ್ನು ಮಹಿಷ ದಸರಾದ ಬಗ್ಗೆಅವಹೇಳನಾಕಾರಿಯಾಗಿ ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
ಇದನ್ನೂ ಓದಿ: ಮಹಿಷ ದಸರಾ ಆಚರಣೆ ವಿರುದ್ಧ ಕೋರ್ಟ್ಗೆ ಅರ್ಜಿ ಸಲ್ಲಿಕೆ