ಮಂಡ್ಯ ನಗರದ ಹಲವು ಭಾಗಗಳಲ್ಲಿ ಬಾಯ್ಕಾಟ್ ಆರ್.ಅಶೋಕ್, ಮಂಡ್ಯ ಬಿಟ್ಟು ಹೋಗಿ ಎಂಬ ದೊಡ್ಡ ದೊಡ್ಡ ಪೋಸ್ಟರ್ಗಳು ರಾರಾಜಿಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ರಾತ್ರೋರಾತ್ರಿ ಈ ಪೋಸ್ಟರ್ ಅಂಟಿಸಿದವರು ವಿರೋಧ ಪಕ್ಷದವರಲ್ಲ. ಬದಲಿಗೆ ಬಿಜೆಪಿ ಕಾರ್ಯಕರ್ತರ ಆರ್.ಅಶೋಕ್ ವಿರುದ್ಧ ಪೋಸ್ಟರ್ ಅಂಟಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಮಂಡ್ಯ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿರುವ ಆರ್.ಅಶೋಕ್ರವರಿಗೆ ಪ್ರತಿಭಟನೆಯ ಸ್ವಾಗತ ಕೋರಲಾಗಿದೆ.
ಮಂಡ್ಯದ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಕೆ. ಗೋಪಾಲಯ್ಯ ಅವರನ್ನು ತೆರವುಗೊಳಿಸಿ ಆ ಸ್ಥಾನಕ್ಕೆ ಆರ್.ಅಶೋಕ್ರವರನ್ನು ನೇಮಿಸಲಾಗಿದೆ. ಇದರಿಂದ ಕ್ರೋಧಗೊಂಡಿರುವ ಬಿಜೆಪಿ ಕಾರ್ಯಕರ್ತರು ನಗರದ ವಿವಿ ರಸ್ತೆ, ಸುಭಾಷ್ ರಸ್ತೆಗಳಲ್ಲಿರುವ ಹಲವಾರು ಕಟ್ಟಡ ಮತ್ತು ಕಾಂಪೌಂಡ್ ಗೋಡೆ ಮೇಲೆ ‘ಗೋ ಬ್ಯಾಕ್ ಆರ್ ಅಶೋಕ್’, ’ಬಾಯ್ಕಾಟ್ ಆರ್. ಅಶೋಕ್’ ಎಂಬ ಭಿತ್ತಿಪತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಜಿಲ್ಲೆಯ ಪಕ್ಷದಲ್ಲಿ ಎಲ್ಲವೂ ಸರಿಯಲ್ಲಿ ಎಂಬುದನ್ನು ಬೀದಿಗೆ ತಂದಿದ್ದಾರೆ.
ಗೋಪಾಲಯ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಂಡ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಉಸ್ತುವಾರಿ ಸ್ಥಾನದಿಂದ ತೆಗೆಯುವ ಅಗತ್ಯವಿರಲಿಲ್ಲ. ಆದರೂ, ಅವರನ್ನು ಕಿತ್ತೊಗೆದು ‘ಹೊಂದಾಣಿಕೆ ರಾಜಕಾರಣ’ ಮಾಡುವ ಆರ್. ಅಶೋಕ್ ಅವರನ್ನು ನೇಮಿಸಲಾಗಿದೆ ಎಂದು ಮಂಡ್ಯದ ಬಿಜೆಪಿ ಕಾರ್ಯಕರ್ತರೇ ಆರೋಪಿಸಿದ್ದಾರೆ.
“ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ. ಗೋಪಾಲಯ್ಯ ಉತ್ತಮ ಕೆಲಸ ಮಾಡಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬೇಕಿರಲಿಲ್ಲ. ಅದು ಅಲ್ಲದೇ ಆರ್. ಅಶೋಕ್ ಮೇಲೆ ‘ಹೊಂದಾಣಿಕೆ ರಾಜಕಾರಣ’ ಮಾಡಿದ ಆರೋಪವಿದೆ. ಹೊಂದಾಣಿಕೆ ರಾಜಕಾರಣ ಮಾಡಬಾರದೆಂದು ಅಮಿತ್ ಶಾ ಮಂಡ್ಯ ಭೇಟಿ ವೇಳೆ ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. ಮಂಡ್ಯದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವುದು ಸರಿಯಲ್ಲ” ಎಂದು ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವವರಾರು? ಇಲ್ಲಿದೆ ಪೂರ್ಣ ಸಮೀಕ್ಷೆ