ಸಂಜಯ್ ಸಿಂಗ್ ಬಣ ಪುಣೆಯಲ್ಲಿ ಆಯೋಜಿಸಿದ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕುಸ್ತಿಪಟುಗಳಿಗೆ ನಕಲಿ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಅಮಾನತುಗೊಂಡಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಸಂಜಯ್ ಸಿಂಗ್ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.
ಈ ಕುರಿತು ಸಾಕ್ಷಿ ಮಲಿಕ್ ಅವರು ಅವರು ಸಾಮಾಜಿಕ ಮಾದ್ಯಮ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಭಾರ ಎತ್ತುವ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಕುಸ್ತಿಪಟುಗೆ ನಕಲಿ ಪ್ರಮಾಣಪತ್ರವನ್ನು ನೀಡಲಾಗಿದೆ. ಪ್ರಮಾಣಪತ್ರದಲ್ಲಿ ಕುಸ್ತಿಪಟುವಿನ ಹುಟ್ಟಿದ ವರ್ಷ 2023 ಆಗಿತ್ತು ಎಂದು ಉಲ್ಲೇಖಿಸಿದ್ದಾರೆ.
ಅಮಾನತುಗೊಂಡಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಪುಣೆಯಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ಗಳನ್ನು ಹೇಗೆ ಆಯೋಜಿಸುತ್ತದೆ ಎಂದು ಪ್ರಶ್ನಿಸಿದ ಸಾಕ್ಷಿ ಮಲಿಕ್, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ನೇಮಿಸಿದ ತಾತ್ಕಾಲಿಕ ಸಮಿತಿಯು ಫೆಬ್ರವರಿಯಲ್ಲಿ ರಾಷ್ಟ್ರೀಯ ಕುಸ್ತಿ ಪಂದ್ಯವನ್ನು ಜೈಪುರದಲ್ಲಿ ನಿಗದಿಪಡಿಸಿದೆ. ಈ ಮಧ್ಯೆ ಸಂಜಯ್ ಸಿಂಗ್ ಪಂದ್ಯ ಆಯೋಜಿಸಿದ್ದು, ಯುವ ಕುಸ್ತಿಪಟುಗಳ ಭವಿಷ್ಯವು ಅಪಾಯದಲ್ಲಿದೆ. ಈ ಸಮಸ್ಯೆಯನ್ನು ಪರಿಶೀಲಿಸುವಂತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಸಾಕ್ಷಿ ಮಲಿಕ್ ಆಗ್ರಹಿಸಿದ್ದಾರೆ.
ಭಾರತ ಸರ್ಕಾರವು ಬ್ರಿಜ್ ಭೂಷಣ್ ಅವರ ಸಹವರ್ತಿ ಸಂಜಯ್ ಸಿಂಗ್ ಅವರನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದಿಂದ ಅಮಾನತುಗೊಳಿಸಿದೆ, ಆದರೂ ಸಂಜಯ್ ಸಿಂಗ್ ಅವರು ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ ಪಂದ್ಯಾಟ ನಡೆಸುತ್ತಿದ್ದಾರೆ ಮತ್ತು ಆಟಗಾರರಿಗೆ ನಕಲಿ ಪ್ರಮಾಣಪತ್ರಗಳನ್ನು ವಿತರಿಸುತ್ತಿದ್ದಾರೆ. ಇದು ಕಾನೂನುಬಾಹಿರವಾಗಿದೆ. ಕ್ರೀಡ ಸಚಿವಾಲಯ ಆಯೋಜಿಸಿದ್ದ ಕುಸ್ತಿ ರಾಷ್ಟ್ರೀಯ ಚಾಂಪಿಯನ್ಶಿಪ್ ಪಂದ್ಯವು ಜೈಪುರದಲ್ಲಿ ನಡೆಯಲಿದೆ. ಆದರೆ ಸಂಜಯ್ ಸಿಂಗ್ ಕಾನೂನುಬಾಹಿರವಾಗಿ ವಿವಿಧ ರಾಷ್ಟ್ರೀಯ ಚಾಂಪಿಯನ್ಶಿಪ್ಗಳ ಪ್ರಮಾಣಪತ್ರಗಳಿಗೆ ಸಹಿ ಮಾಡಿ ವಿತರಿಸುತ್ತಿದ್ದಾರೆ ಎಂದು ಸಾಕ್ಷಿ ಮಲಿಕ್ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಸಂಸ್ಥೆಯಿಂದ ಅಮಾನತಗೊಂಡಿರುವ ವ್ಯಕ್ತಿ ಸಂಸ್ಥೆಯ ಹಣವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಾರೆ? ನಾಳೆ ಆಟಗಾರರು ಈ ಪ್ರಮಾಣಪತ್ರಗಳೊಂದಿಗೆ ಕೆಲಸ ಕೇಳಲು ಹೋದಾಗ, ಬಡ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ, ಆದರೆ ಇದರಲ್ಲಿ ಆಟಗಾರರ ಯಾವುದೇ ತಪ್ಪಿಲ್ಲ. ಇಂತಹ ವಂಚನೆ ಮಾಡುತ್ತಿರುವ ಸಂಜಯ್ ಸಿಂಗ್ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು, ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಜಿ ಅವರಲ್ಲಿ ಈ ಸಮಸ್ಯೆಯನ್ನು ಪರಿಶೀಲಿಸಿ ಆಟಗಾರರ ಭವಿಷ್ಯವನ್ನು ಉಳಿಸಲು ಮನವಿ ಮಾಡುತ್ತೇನೆ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಭೂಪೇಂದ್ರ ಸಿಂಗ್ ಬಾಜ್ವಾ ನೇತೃತ್ವದ ತಾತ್ಕಾಲಿಕ ಸಂಸ್ಥೆಯು ಫೆಬ್ರವರಿ 2-5 ರಿಂದ ಜೈಪುರದಲ್ಲಿ ಪ್ರತ್ಯೇಕ ಹಿರಿಯರ ರಾಷ್ಟ್ರೀಯ ಚಾಂಪಿಯನ್ಶಿಪ್ನ್ನು ಆಯೋಜಿಸಲಿದೆ. ಸಂಜಯ್ ಸಿಂಗ್ ನೇತೃತ್ವದ ಬಣವು ಪುಣೆಯಲ್ಲಿ ಆಯೋಜಿಸುವ ಕುಸ್ತಿ ಸ್ಪರ್ಧೆಗೆ ಮಾನ್ಯತೆ ಇಲ್ಲ. WFIನ ಅಧಿಕೃತ ಸಹಿ, ಲೆಟರ್ ಹೆಡ್ಗಳನ್ನು ಬಳಸದಂತೆ ಕೂಡ ಸಂಜಯ್ ಸಿಂಗ್ಗೆ ಈ ಹಿಂದೆ ಕ್ರೀಡಾ ಸಚಿವಾಲಯ ತಿಳಿಸಿತ್ತು. ಭಾರತೀಯ ಕುಸ್ತಿ ಫೆಡರೇಶನ್ಗೆ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಮತ್ತು WFIನ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ನ್ನು ಕುಸ್ತಿ ಫೆಡರೇಶನ್ ಮುಖ್ಯಸ್ಥರಾಗಿ ನೇಮಿಸಿರುವುದಕ್ಕೆ ವಿರೋಧಿಸಿ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಸಂಜಯ್ ಸಿಂಗ್ ನೇತೃತ್ವದ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತು ಮಾಡಿತ್ತು.
भारत सरकार ने बृजभूषण के साथी संजय सिंह की गतिविधियों को सस्पेंड कर दिया था उसके बावजूद संजय सिंह अपनी मनमर्ज़ी चला नेशनल रेसलिंग चैंपियनशिप करवा रहा है और खिलाड़ियों को फ़र्ज़ी सर्टिफिकेट बाँट रहा है जोकि ग़ैर क़ानूनी है. खेल मंत्रालय द्वारा आयोजित रेसलिंग नेशनल चैंपियनशिप जयपुर… pic.twitter.com/Hx6N3awyml
— Sakshee Malikkh (@SakshiMalik) January 30, 2024
ಇದನ್ನು ಓದಿ; ಹಸಿವನ್ನು ‘ಯುದ್ಧ ಅಸ್ತ್ರ’ವನ್ನಾಗಿಸಿದ ಇಸ್ರೇಲ್: ಗಾಝಾದಲ್ಲಿ ಪರಿಸ್ಥಿತಿ ‘ನರಕಸದೃಶ’