ತಮಿಳುನಾಡಿನ ಚೆನ್ನೈನಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ‘ತಮಿಳುನಾಡು ವಾಲ್ಗ’ (ತಮಿಳುನಾಡು ಚಿರಾಯುವಾಗಲಿ) ಎಂದು ಬರೆದಿರುವ ಬೃಹತ್ ಬ್ಯಾನರ್ನ ಟ್ಯಾಬ್ಲೋ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ತಮಿಳುನಾಡನ್ನು ‘ತಮಿಳಗಂ’ ಎಂದು ಕರೆಯಬೇಕು ಎಂದು ಆಗ್ರಹಿಸಿ ರಾಜ್ಯಪಾಲ ಆರ್.ಎನ್. ರವಿ ಸೃಷ್ಟಿಸಿದ್ದ ವಿವಾದದ ನಡುವೆ ಟ್ಯಾಬ್ಲೋ ಭಾರಿ ರಾಜಕೀಯ ಮಹತ್ವ ಪಡೆದುಕೊಂಡಿದೆ.
ಜನವರಿ ಮೊದಲ ವಾರದಲ್ಲಿ, ರಾಜ್ಯಪಾಲ ರವಿ ಅವರು ತಮಿಳುಬನಾಡು ರಾಜಭವನದಲ್ಲಿ ಮಾಡಿದ ಭಾಷಣದಲ್ಲಿ ರಾಜ್ಯಕ್ಕೆ ‘ತಮಿಳಗಂ’ ಎಂಬ ಹಸರು ಹೆಚ್ಚು ಸೂಕ್ತವಾಗಿದೆ ಎಂದು ಸೂಚಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಇಷ್ಟೆ ಅಲ್ಲದೆ ರಾಜಭವನದ ‘ಪೊಂಗಲ್’ ಆಚರಣೆಯ ಆಹ್ವಾನ ಪತ್ರದಲ್ಲಿ ಕೂಡಾ ರಾಜ್ಯವನ್ನು ‘ತಮಿಳಗಂ’ ಎಂದು ಉಲ್ಲೇಖಿಸಲಾಗಿತ್ತು. ಈ ಘಟನೆಯು ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆ ಹುಟ್ಟು ಹಾಕಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಗಣರಾಜ್ಯೋತ್ಸವದ ಹಿಂದಿನ ದಿನವಾದ ಬುಧವಾರ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ರಾಜ್ಯಪಾಲ ರವಿ ಅವರು, ತಮ್ಮ ಭಾಷಣದ ಕೊನೆಯಲ್ಲಿ ‘ವಾಲ್ಗ ತಮಿಳುನಾಡು’ (ತಮಿಳುನಾಡುಗೆ ಚಿರಾಯುವಾಗಲಿ) ಮತ್ತು ‘ವಾಲ್ಗ ಭಾರತಂ’ (ಭಾರತ ಚಿರಾಯುವಾಗಲಿ) ಎಂಬ ಘೋಷಣೆಗಳೊಂದಿಗೆ ತಮ್ಮ ಭಾಷಣವನ್ನು ಕೊನೆಗೊಳಿಸಿದ್ದರು.
ಜನವರಿ 18ರಂದು ಮಾತನಾಡಿದ್ದ ಅವರು, “ತಮಿಳುನಾಡಿನ ಹೆಸರನ್ನು ಬದಲಾಯಿಸಬೇಕು ಎಂದು ನನ್ನ ಸಲಹೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ನನ್ನ ಭಾಷಣದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದೆ, ರಾಜ್ಯಪಾಲರು ತಮಿಳುನಾಡು ಪದಕ್ಕೆ ವಿರುದ್ಧವಾಗಿದ್ದಾರೆ ಎಂಬ ವಾದಗಳು ಚರ್ಚೆಯ ವಿಷಯವಾಗಿದೆ. ಹಾಗಾಗಿ ಇದಕ್ಕೆ ಅಂತ್ಯ ಹಾಡಲು ಈ ಸ್ಪಷ್ಟನೆ ನೀಡುತ್ತಿದ್ದೇನೆ” ಎಂದು ಹೇಳಿದ್ದರು.
ಆದಾಗ್ಯೂ, ಎರಡು ಎಡ ಪಕ್ಷಗಳು ಸೇರಿದಂತೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನ ನಾಲ್ಕು ಮಿತ್ರಪಕ್ಷಗಳು ಬುಧವಾರ ರಾಜ್ಯಪಾಲ ರವಿ ಆಯೋಜಿಸಿದ್ದ ಗಣರಾಜ್ಯೋತ್ಸವದ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದವು. ಈ ಹಿಂದೆ ಕೂಡಾ ಆಡಳಿತರೂಢ ಮಿತ್ರಪಕ್ಷಗಳು ಪೊಂಗಲ್ ಆಚರಣೆಯ ಸಭೆಯನ್ನು ಬಹಿಷ್ಕರಿಸಿದ್ದರು.
ಆಡಳಿತರೂಢ ಮಿತ್ರಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ -ಮಾರ್ಕ್ಸ್ವಾದಿ (ಸಿಪಿಐ-ಎಂ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ತೋಲ್ ತಿರುಮವಳವನ್ ನೇತೃತ್ವದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ತಮಿಳಗ ವಾಳ್ವುರಿಮೈ ಕಚ್ಚಿ (ಟಿವಿಕೆ) ಗುರುವಾರ ನಡೆಯಲಿರುವ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.
ಸಿಪಿಐ ರಾಜ್ಯ ಕಾರ್ಯದರ್ಶಿ ಆರ್. ಮುತರಸನ್ ನೀಡಿರುವ ಹೇಳಿಕೆಯಲ್ಲಿ, “ಕಾರ್ಯಕ್ರಮದ ಆಹ್ವಾನ ಪತ್ರದಲ್ಲಿ ರವಿಯನ್ನು ‘ತಮಿಳುನಾಡು ರಾಜ್ಯಪಾಲ’ ಎಂದು ಉಲ್ಲೇಖಿಸಿದ್ದರೂ, ಅವರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಮಾಡಿಲ್ಲ. ತಮಿಳುನಾಡು ವಿಧಾನಸಭೆಯಿಂದ 20 ಕ್ಕೂ ಹೆಚ್ಚು ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಆದರೆ ರಾಜ್ಯಪಾಲರು ಅವುಗಳನ್ನು ಹಾಗೆ ಇಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದಷ್ಟೆ ಅಲ್ಲದೆ, ಅವರು ಆರ್ಎಸ್ಎಸ್ ಪರ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದ್ದಾರೆ. ಆದ್ದರಿಂದ, ಗುರುವಾರ ರಾಜಭವನದಲ್ಲಿ ಆಯೋಜಿಸಲಾದ ‘ಅಟ್ ಹೋಮ್’ ಕಾರ್ಯಕ್ರಮವನ್ನು ಬಹಿಷ್ಕರಿಸಲು ಪಕ್ಷ ನಿರ್ಧರಿಸಿದೆ” ಎಂದು ಎಂದು ಮುತರಸನ್ ಹೇಳಿದ್ದಾರೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಅವರ ಹೇಳಿಕೆಯಲ್ಲಿ, ರಾಜ್ಯಪಾಲರು ಬಾಕಿ ಉಳಿಸಿರುವ ಮಸೂದೆಗಳು ಸೇರಿದಂತೆ ಸದನದಿಂದ ಹೊರನಡೆದ ಬಗ್ಗೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಿಲ್ಲ ಜೊತೆಗೆ ಅದರ ಬಗ್ಗೆ ವಿಷಾದ ಕೂಡಾ ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿಪಿಐ(ಎಂ) ರಾಜಭವನದ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲೋಕಸಭಾ ಸದಸ್ಯರಾದ ವಿಸಿಕೆ ಸಂಸ್ಥಾಪಕ ತಿರುಮಾವಲವನ್ ಅವರು ಕೂಡಾ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಭವನದ ಕಾರ್ಯಕ್ರಮವನ್ನು ಬಹಿಷ್ಕರಿಸುವ ತಮ್ಮ ಪಕ್ಷದ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಟಿವಿಕೆ ಕೂಡ ‘ಅಟ್ ಹೋಮ್’ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಅದರ ಸಂಸ್ಥಾಪಕ ಮತ್ತು ಪಂರುತಿ ಶಾಸಕ ಟಿ ವೇಲು ಮುರುಗನ್ ಘೋಷಿಸಿದ್ದಾರೆ.
தமிழ்நாடு அரசு ஏற்படுத்திருக்கின்ற ஊர்திகளின் முதல் வரிசையில் #தமிழ்நாடுவாழ்க!! என்ற வாகனம் இடம்பெற்றுள்ளது #ஆளுனர் ஆர்.என்.#ரவி முன்பாக வலம் வந்தது!!@CMOTamilnadu@rajbhavan_tn @arivalayam @Ahmedshabbir20 @The_Abinesh @rameshibn @rajakumaari @Veera284 pic.twitter.com/N1aCjDTID7
— Nowshath A (@Nousa_journo) January 26, 2023
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ವಿಚಾರಕ್ಕೆ ಜಾಮಿಯಾ ವಿವಿಯಲ್ಲಿ ಗಲಾಟೆ; 12ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಂಧನ