ಭೂಗತ ಜಗತ್ತಿನೊಂದಿಗೆ ಆರ್ಥಿಕ ವ್ಯವಹಾರ ನಡೆಸಿರುವ ಆರೋಪದ ಹಿನ್ನೆಲೆ ಜಾರಿ ನಿರ್ದೇಶನಾಲಯ (ಇಡಿ) ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ದಕ್ಷಿಣ ಮುಂಬೈನಲ್ಲಿರುವ ಬಲ್ಲಾರ್ಡ್ ಪಿಯರ್ ಕಚೇರಿ ತಲುಪಿದ ಶಿಲ್ಪಾಶೆಟ್ಟಿಯವರ ಪತಿಯಾಗಿರುವ ರಾಜ್ ಕುಂದ್ರಾರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಅವರ ಆರ್ಥಿಕ ಅವ್ಯವಹಾರ ಮತ್ತು ಉದ್ಯಮಿ ರಂಜೀತ್ ಬಿಂದ್ರಾ ಅವರೊಂದಿಗಿನ ವ್ಯವಹಾರ ಮತ್ತು ಇತರೆ ವಿಷಯವಾಗಿ ಪ್ರಶ್ನೆಗಳ ಸುರಿಮಳೆಗೈದರು ಎಂದು ವರದಿಯಾಗಿದೆ.
ಅಕ್ರಮ ಹಣ ವರ್ಗಾವಣೆ ಆರೋಪ ಮತ್ತು ಪಿಎಂಎಲ್ಎ ಅಡಿ ನವೆಂಬರ್ 4ರಂದು ಮುಂಬೈನ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ರಾಜ್ ಕುಂದ್ರಾಗೆ ಈಗಾಗಲೇ ಇಡಿ ಸಮನ್ಸ್ ಜಾರಿ ಮಾಡಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಇಕ್ಬಾಲ್ ಮಿರ್ಚಿ ಜತೆ ಆರ್ಥಿಕ ವ್ಯವಹಾರ, ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪ ಉದ್ಯಮಿ ರಾಜ್ ಕುಂದ್ರಾ ಮೇಲಿದೆ.
ತನಿಖಾ ಸಂಸ್ಥೆಯು ರಾಜ್ ಕುಂದ್ರಾ, ಇಕ್ಬಾಲ್ ಮಿರ್ಚಿ ಆಪ್ತ ಸಹಾಯಕ ರಂಜೀತ್ ಬಿಂದ್ರಾ ಮತ್ತು ಬಾಸ್ಟಿಯನ್ ಹಾಸ್ಪಿಟಾಲಿಟಿ ಎಂಬ ಸಂಸ್ಥೆಯೊಂದಿಗೆ ವ್ಯವಹಾರ ನಡೆಸಿದ್ದಾರೆ ಎಂದು ಹೇಳಿದೆ. ಆದರೆ ರಾಜ್ ಕುಂದ್ರಾ ಈ ಆರೋಪವನ್ನು ತಳ್ಳಿ ಹಾಕಿದ್ದು, ಇದು ನಿಜವಲ್ಲ ಎಂದಿದ್ದಾರೆ.
ದಾವೂದ್ ಇಬ್ರಾಹಿಂ ಗ್ಯಾಂಗ್ ನ ಇಕ್ಬಾಲ್ ಜತೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಉದ್ಯಮಿ ರಾಜ್ ಕುಂದ್ರಾ ಅವರ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದ. ಅಲ್ಲದೇ ಐಪಿಎಲ್ ಮ್ಯಾಚ್ ಫಿಕ್ಸಿಂಗ್, ಬಿಟ್ ಕಾಯಿನ್ ವ್ಯವಹಾರಗಳಲ್ಲಿಯೂ ರಾಜ್ ಕುಂದ್ರಾ ಹೆಸರಿದೆ. ಇನ್ನು ಇಕ್ಬಾಲ್ ಮಿರ್ಚಿ, 2013ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇಡಿ ಅಧಿಕಾರಿಗಳು ಮಿರ್ಚಿ ವಿರುದ್ಧ ಅಪರಾಧ, ಅಕ್ರಮ ಹಣ ವರ್ಗಾವಣೆ, ರಿಯಲ್ ಎಸ್ಟೇಟ್ ನಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದೂ ಇಡಿ ಆರೋಪಿಸಿದೆ. ಇನ್ನು ಬಿಂದ್ರಾ ಅವರನ್ನು ಇಡಿ ಬಂಧಿಸಿದೆ.
ಇತ್ತೀಚೆಗಷ್ಟೇ ಇಕ್ಬಾಲ್ ಆಪ್ತ ಹುಮಾಯೂನ್ ಮರ್ಚೆಂಟ್ ಅವರನ್ನೂ ಸಹ ಇದೇ ವಿಚಾರದಲ್ಲಿ ಇಡಿ ಬಂಧಿಸಿದೆ. ಬೆಂಗಳೂರು ಮೂಲದ ರಿಂಕು ದೇಶಪಾಂಡೆ ಎಂಬ ಮಹಿಳೆಯನ್ನು ಸಹ ಹಣ ವರ್ಗಾವಣೆ ಪ್ರಕರಣದಡಿ ಬಂಧಿಸಿ ವಿಚಾರಣೆ ನಡೆಸಿದೆ.