ಉತ್ತರ ಪ್ರದೇಶದಲ್ಲಿ NRC ಮತ್ತು CAA ವಿರುದ್ದ ನಡೆಸುತ್ತಿರುವ ಕೆಲವು ಹೋರಾಟಕ್ಕೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ರೆಹಬ್ ಫೌಂಡೇಷನ್ ಇಂಡಿಯಾ ಸಂಘಟನೆಗಳು ಹಣಕಾಸು ನೆರವು ನೀಡಿವೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳನ್ನು ಉಲ್ಲೇಖಿಸಿ IANS ವರದಿ ಮಾಡಿದೆ ಎಂದು ದಿ ವೈರ್.ಕಾಮ್ ಸುದ್ದಿ ಮಾಡಿದೆ.
ಜಾರಿ ನಿರ್ದೇಶನಾಲಯದ ಮೂಲಗಳನ್ನು ಉಲ್ಲೇಖಿಸಿ ಸುದ್ದಿಯನ್ನು ಬ್ರೇಕ್ ಮಾಡಿರುವ IANS ಯಾವುದೇ ಅಧಿಕಾರಿಯ ಹೆಸರನ್ನಾಗಲಿ ಬಹಿರಂಗಪಡಿಸಿಲ್ಲ. ಪಾಪುಲರ್ ಫ್ರೆಂಟ್ ಆಫ್ ಇಂಡಿಯ ಮತ್ತು ರೆಹಬ್ ಫೌಂಡೇಷನ್ ಇಂಡಿಯಾ ಸಂಸ್ಥೆಗಳ ವಿರುದ್ಧ ಬಾರಿ ಹಣ ವರ್ಗಾವಣೆಯಡಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ಜೊತೆಗೆ ಹಿರಿಯ ವಕೀಲರಾದ ಕಪಿಲ್ ಸಿಬಾಲ್, ದುಶ್ಯಂತ್ ಧವೆ, ಇಂದಿರಾ ಜೈಸಿಂಗ್ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಲು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಮೂವರ ಖಾತೆಗಳಿಗೆ ಆರ್.ಟಿ.ಜಿ.ಎಸ್. ಎನ್.ಇ.ಎಫ್.ಟಿ. ಮತ್ತು ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎಂದು IANS ವರದಿ ಮಾಡಿದೆ. ಆದರೆ ಈ ಆರೋಪವನ್ನು ಇಂದಿರಾ ಜೈಸಿಂಗ್ ನಿರಾಕರಿಸಿದ್ದಾರೆ.
My statement denying receipt of money from PFI in relation to anti CAA protests or for any other reason or purpose whatsoever. @PTI_News @ZeeNews @ndtv @CNNnews18 @LiveLawIndia @barandbench @AltNews @scroll_in @thewire_in @the_hindu pic.twitter.com/HM1ECWDmxI
— Indira Jaising (@IJaising) January 27, 2020
ಪತ್ರಿಕಾ ಹೇಳಿಕೆ ನೀಡಿರುವ ಇಂದಿರಾ ಜೈಸಿಂಗ್ ಸಿಎಎ ಮತ್ತು ಎನ್.ಆರ್.ಸಿ ವಿರೋಧಿ ಹೋರಾಟಕ್ಕೆ ಪಿಎಫ್ ಐ ಸಂಘಟನೆ ಸೇರಿದಂತೆ ಯಾವುದೇ ಸಂಘಟನೆಯಿಂದ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು 73 ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಿದ್ದೇವೆ. ಸಿಎಎ ಮತ್ತು ಎನ್ಆರ್ ಸಿ ವಿರೋಧಿ ಪ್ರತಿಭಟನೆಗೆ 120 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ. ಇದು ಎರಡು ತಿಂಗಳಲ್ಲಿ ನಡೆದಿರುವ ವರ್ಗಾವಣೆ ಯಾಗಿದೆ. 27 ಖಾತೆಗಳು ಪಿಎಫ್ಐಗೆ ಸೇರಿದ್ದರೆ, 37 ಖಾತೆಗಳು ಆರ್.ಎಫ್ಐ.ಗೆ ಸೇರಿವೆ. 17 ವಿವಿಧ ಬ್ಯಾಂಕ್ ಖಾತೆಗಳಾಗಿವೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಹೇಳಿವೆ ಎಂದು ವರದಿ ಮಾಡಿದೆ.
ಇದೆಲ್ಲಾ ಸುಳ್ಳು
ಪಾಪ್ಯುಲರ್ ಫ್ರಂಟ್ ಈ ಆರೋಪವನ್ನು ಅಲ್ಲಗೆಳೆದಿದ್ದು ನಮ್ಮ ಸಂಘಟನೆಯ ವಿರುದ್ಧದ ವ್ಯವಸ್ಥಿತ ಸಂಚು ಎಂದು ಆರೋಪಿಸಿದೆ. ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಅನೀಸ್ ಅಹ್ಮದ್ ಮಾತನಾಡಿ “ಎಲ್ಲಾ ಆರೋಪಗಳು ನಿರಾಧಾರವಾಗಿವೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ಆರೋಪಗಳೂ ಕೂಡಾ ಈ ಹಿಂದೆ ನಮ್ಮ ವಿರುದ್ಧ ಮಾಡಿದ್ದ ಆರೋಪಗಳಂತೆಯೇ ಆಗಲಿರುವುದು. ಏಕೆಂದರೆ ಇದನ್ನೂ ಕೂಡಾ ಸಾಬೀತುಪಡಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಪೌರತ್ವ ವಿರೋಧಿ ಪ್ರತಿಭಟನೆಗಳಿಗೆ ವಿವಿಧ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ವರದಿಯನ್ನು ಯಾವುದೋ ಒಂದು ರಹಸ್ಯ ಸಂಸ್ಥೆ ನೀಡಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ED ಸಂಸ್ಥೆಯ ಹೆಸರು ಪ್ರಸ್ತಾಪಿಸಲಾಗಿದೆಯಾದರೂ, ಅನ್ಯ ಮೂಲಗಳ ಹೆಸರು ಹೇಳಲಾಗುತ್ತಿದೆ. ಈ ವಿಷಯದಲ್ಲಿ ED ಯು ಪಾಪ್ಯುಲರ್ ಫ್ರಂಟ್ ಅನ್ನು ಸಂಪರ್ಕಿಸಿಲ್ಲ, ಅಥವಾ ಈ ಬಗ್ಗೆ ಯಾವುದೇ ಅಧಿಕೃತ ವರದಿಯನ್ನು ಜಾರಿಗೊಳಿಸಿಲ್ಲ. ಹಾಗಾಗಿ ಇದು ಯಾವುದೋ ಆಧಾರವಿಲ್ಲದ ಮೂಲಗಳ ವರದಿ ಆಧರಿಸಿ ಊಹಾಪೋಹಗಳನ್ನು ಪ್ರಚಾರಪಡಿಸಲಾಗುತ್ತಿದೆ. ಹಾಗಾಗಿ ಇದನ್ನು ಸಾಬೀತುಪಡಿಸುವುದು, ಈ ಆರೋಪಗಳನ್ನು ಮಾಡುವವರ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಹಾದಿಯಾ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ 2017 ರಲ್ಲಿ ಹೋರಾಡಿತ್ತು. ಇದಕ್ಕಾಗಿ ಜನರ ಬಳಿ ತೆರಳಿ ಧನ ಸಹಾಯ ಸಂಗ್ರಹಿಸಿತ್ತು. ಇದೇನು ರಹಸ್ಯವಾಗಿ ನಡೆದಿದ್ದಲ್ಲ. ಈ ಕೇಸಿನ ವಕೀಲರಾಗಿದ್ದ ಕಪಿಲ್ ಸಿಬಲ್, ಇಂದಿರಾ ಜೈಸಿಂಗ್, ದುಷ್ಯಂತ್ ಧವೆ ಮುಂತಾದ ವಕೀಲರ ಫೀಸ್ ಅನ್ನು ಪಾಪ್ಯುಲರ್ ಫ್ರಂಟ್ 2017 ರಲ್ಲಿ ಬ್ಯಾಂಕ್ ಖಾತೆಯ ಮುಖಾಂತರ ವರ್ಗಾವಣೆ ಮಾಡಿತ್ತು. ಇದೀಗ 2017 ರಲ್ಲಿ ಬ್ಯಾಂಕ್ ವರ್ಗಾವಣೆಯಾಗಿರುವ ಹಣವನ್ನು 2019 ರ ಪೌರತ್ವ ಕಾಯ್ದೆ ವಿರೋಧಿ ಗಲಭೆಗಳಿಗೆ ತಳುಕು ಹಾಕುತ್ತಿರುವುದು ನೋಡಿದರೆ, ಭಾರತದಲ್ಲಿ ನಡೆಯುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪಾಪ್ಯುಲರ್ ಫ್ರಂಟ್ ಮಾತ್ರ ಕಾರಣ ಎಂಬಂತೆ ಬಿಂಬಿಸುವ ಅಭಿಯಾನ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.