ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ 5 ದಿನಗಳಲ್ಲೇ ಅದಕ್ಕೆ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಚಳಿಗಾಲದ ಅಧಿವೇಶನದ ಮೊದಲ ದಿನವೇ ಕೃಷಿ ಕಾಯ್ದೆಗಳ ಹಿಂತೆಗೆತ ಪ್ರಕ್ರಿಯೆ ಆರಂಭವಾಗಲಿದ್ದು, ಅದು ನಮ್ಮ ಆದ್ಯತೆಯ ಕರ್ತವ್ಯವಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
‘ಮುಂಬರುವ ಚಳಿಗಾಲದ ಅಧಿವೇಶನದಲ್ಲಿ, ಈ ಮಸೂದೆಗಳನ್ನು ಕೈಗೆತ್ತಿಗೊಳ್ಳುವುದು. ಸಂಸತ್ತಿನ ಅಧಿವೇಶನದ ಮೊದಲ ದಿನದಿಂದಲೇ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ. ನವೆಂಬರ್ 19ರಂದು ಪ್ರಧಾನಿ ನೀಡಿದ್ದ ಭರವಸೆಯನ್ನು ಘೋಷಣೆಯಾದ ಐದು ದಿನಗಳಲ್ಲಿ ಈಡೇರಿಸಲಾಗಿದೆ. ಕಾಯ್ದೆ ರದ್ದತಿ ವಿಷಯ ಇಂದಿನ ಕಾರ್ಯಸೂಚಿಯಲ್ಲಿ ಇಲ್ಲ ಎಂದು ಅನೇಕ ಪತ್ರಕರ್ತರು ಹೇಳುತ್ತಿದ್ದರು. ಆದರೆ ಸಂಪುಟವು ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಸಚಿವರು ತಿಳಿಸಿದರು.
2020ರ ಸೆಪ್ಟೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿದ್ದ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ಒಂದು ವರ್ಷದಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಕಳೆದ ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿ, ರೈತರ ಅನುಕೂಲಕ್ಕಾಗಿ ಕಾನೂನುಗಳನ್ನು ಪರಿಚಯಿಸಲಾಗಿದ್ದರೂ, ಅವರಿಗೆ ಅದರ ಪ್ರಯೋಜನಗಳನ್ನು ವಿವರಿಸಲು ಸರ್ಕಾರ ವಿಫಲವಾಗಿದೆ ಎಂದು ಪ್ರಧಾನಿಗಳು ತಪ್ಪೊಪ್ಪಿಕೊಂಡರು.
ಪ್ರಧಾನಿ ಮೋದಿಯವರ ಘೋಷಣೆಯ ನಂತರ ಇಂದು ನಡೆದ ಮೊದಲ ಸಂಪುಟ ಸಭೆಯಲ್ಲಿ ಮೂರು ಕಾನೂನುಗಳನ್ನು ರದ್ದುಗೊಳಿಸಲು ಕೃಷಿ ಕಾನೂನುಗಳ ರದ್ದತಿ ಮಸೂದೆ -2021 ಅನ್ನು ಅನುಮೋದಿಸಿದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೊಸ ಚೌಕಟ್ಟಿನ ಬಗ್ಗೆ ಕೆಲಸ ಮಾಡಲು ಸರ್ಕಾರವು ಸಮಿತಿಯನ್ನು ರಚಿಸಲಿದೆ ಎಂದು ಪ್ರಧಾನಿ ಘೋಷಿಸಿದ್ದರು. ಸಂಪುಟದ ನಿರ್ಧಾರಗಳ ಬಗ್ಗೆ ವಿವರಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಹೊಸ ಸಮಿತಿಯ ಬಗ್ಗೆ ಏನನ್ನು ಮಾತನಾಡಲಿಲ್ಲ. ಈ ಕುರಿತು ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯು ಕಾರ್ಪೊರೇಟ್ ಪರವಾದ ಕೃಷಿ ಕಾನೂನುಗಳನ್ನು ಜಾರಿಗೊಳಿಸಿ ದೊಡ್ಡ ತಪ್ಪು ಮಾಡಿತು. ಅದರ ವಿರುದ್ಧ ರೈತರು ಹೋರಾಡಿದರು ಮತ್ತು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲಾಯಿತು. C2+50% ಸೂತ್ರದ ಪ್ರಕಾರ MSP ಅನ್ನು ಕಾನೂನುಬದ್ಧಗೊಳಿಸುವುದಾಗಿ ಮೋದಿಯವರು ಚುನಾವಣಾ ಭರವಸೆ ನೀಡಿದ್ದರು. ಆದರೆ ಸರ್ಕಾರ ಈಗ ಅದನ್ನು ಜಾರಿಗೊಳಿಸದೆ ಏಕೆ ತಪ್ಪಿಸಿಕೊಳ್ಳುತ್ತಿದೆ? ಸಚಿವರ ಈ ಬಗ್ಗೆ ಮಾತನಾಡಲು ಏಕೆ ಹಿಂಜರಿಯುತ್ತಿದ್ದಾರೆ ಎಂದು ಟ್ರ್ಯಾಕ್ಟರ್ಟುಟ್ವಿಟರ್ ಪ್ರಶ್ನಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ನ.26ರಂದು ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್!