ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕನ ಕುಟುಂಬವೊಂದರ ದುಸ್ಥಿತಿಯನ್ನು ವರದಿ ಮಾಡಿದ ನಂತರ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜಾರ್ಖಾಂಡ್ನ ಸ್ಥಳೀಯ ಇಬ್ಬರು ಪತ್ರಕರ್ತರ ವಿರುದ್ಧ ಜಾರ್ಖಂಡ್ನ ಖುಂತಿ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ ಸ್ಮಿತಾ ನಾಗೇಸಿಯಾ ಮತ್ತು ವೃತ್ತ ಅಧಿಕಾರಿ ವಂದನಾ ಭಾರತಿ ಅವರ ದೂರಿನ ಆಧಾರದ ಮೇಲೆ ಕರ್ರಾ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಸೋನು ಅನ್ಸಾರಿ ಮತ್ತು ಯೂಟ್ಯೂಬರ್ ಗುಂಜನ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತೋರ್ಪಾ ಉಪವಿಭಾಗೀಯ ಪೊಲೀಸ್ ಅಧಿಕಾರಿ ಓಂಪ್ರಕಾಶ್ ತಿವಾರಿ ಹೇಳಿದ್ದಾರೆ.
ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಮತ್ತು ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಧಿಕಾರಿಗಳು ಕಾರ್ಮಿಕನ ಮನೆಗೆ ಭೇಟಿ ನೀಡಿದಾಗ, ಇಬ್ಬರು ವರದಿಗಾರರು ಆಗಲೇ ಅಲ್ಲಿದ್ದರು. ಅವರು ಸತ್ಯವನ್ನು ಪರಿಶೀಲಿಸದೆ ರೆಕಾರ್ಡಿಂಗ್ ಪ್ರಾರಂಭಿಸಿದರು. ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಕೇಳಿದಾಗ ಅವರು ನಮ್ಮ ಕೆಲಸಕ್ಕೆ ಅಡ್ಡಿಪಡಿಸಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ನ.30ರಂದು ದಾಖಲಿಸಿದ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಸಿಆರ್ಪಿಸಿಯ ನಿಬಂಧನೆಗಳ ಪ್ರಕಾರ ಇಬ್ಬರಿಗೂ ನೋಟಿಸ್ ನೀಡಲಾಗುವುದು ಮತ್ತು ಅವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿವಾರಿ ಹೇಳಿದ್ದಾರೆ.
ಅನ್ಸಾರಿ ಮತ್ತು ಕುಮಾರ್ ತಮ್ಮ ವರದಿಗಳ ಮೂಲಕ ವಿಜಯ್ ಹೊರೋ ಕುಟುಂಬದ ದುಸ್ಥಿತಿಯನ್ನು ಎತ್ತಿ ತೋರಿಸಿದ್ದರು. ನ.12ರಂದು ಸುರಂಗ ಕುಸಿತದ ಎರಡು ವಾರಗಳ ನಂತರ ಆಡಳಿತವು ಬಡ ಕುಟುಂಬಕ್ಕೆ ಪಡಿತರವನ್ನು ಒದಗಿಸಿದೆ ಎಂದು ಅವರು ತಮ್ಮ ವರದಿಗಳಲ್ಲಿ ಆರೋಪಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿ ಪತ್ರಕರ್ತ ಗುಂಜನ್, ವಿಜಯ್ ಕುಟುಂಬದ ಪರಿಸ್ಥಿತಿಯನ್ನು ಹೊರಜಗತ್ತಿಗೆ ತಿಳಿಸಲು ವರದಿ ಮಾಡಿದ್ದೇವೆ. ಸುರಂಗ ಕುಸಿತವಾದ ಎರಡು ವಾರಗಳ ನಂತರ ಬಡ ಕುಟುಂಬಕ್ಕೆ ಅಧಿಕಾರಿಗಳು ಪಡಿತರ ಒದಗಿಸಿದ್ದರು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಚಾರ್ಧಾಮ್ ಸರ್ವಋತು ರಸ್ತೆ ಯೋಜನೆಯಡಿ ನಿರ್ಮಿಸುತ್ತಿದ್ದ ಸುರಂಗದ ಕೆಳಭಾಗಗಳು ನ.12ರಂದು ಕುಸಿದು 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಘಟನೆ ನಡೆದ 17 ದಿನಗಳ ನಂತರ ನ.28ರಂದು ಕಾರ್ಮಿಕರನ್ನು ರಕ್ಷಿಸಲಾಗಿತ್ತು.
ಇದನ್ನು ಓದಿ; ನ್ಯಾಯಾಲಯದಲ್ಲಿ ಅಂಬೇಡ್ಕರ್ಗೂ ಮೊದಲು ಮನು ಪ್ರತಿಮೆ ಏಕೆ ಸ್ಥಾಪಿಸಲಾಯಿತು?