Homeಕರ್ನಾಟಕಯಡಿಯೂರಪ್ಪ ಸರ್ಕಾರಕ್ಕೆ 1 ವರ್ಷ: ವಿವೇಚನೆಯನ್ನು ದೆಹಲಿ ದೊರೆಗಳ ಕಾಲಬುಡದಲ್ಲಿ ಅಡವಿಟ್ಟಿದ್ದಷ್ಟೇ ಸಾಧನೆ

ಯಡಿಯೂರಪ್ಪ ಸರ್ಕಾರಕ್ಕೆ 1 ವರ್ಷ: ವಿವೇಚನೆಯನ್ನು ದೆಹಲಿ ದೊರೆಗಳ ಕಾಲಬುಡದಲ್ಲಿ ಅಡವಿಟ್ಟಿದ್ದಷ್ಟೇ ಸಾಧನೆ

ಇತ್ತ ಖರೀದಿಯಾದ ಮಾಜಿ ಅನರ್ಹರು ಮಂತ್ರಿ ಮಂಡಲ ಸೇರುವ ಹೊತ್ತಿಗೆ ಅತ್ತ ಯಾವುದೋ ದೇಶದಲ್ಲಿ ಹುಟ್ಟಿಕೊಂಡ ಕೊರೊನ ವೈರಸ್ ಭಾರತಕ್ಕೆ ವಕ್ಕರಿಸಿದ್ದು ಒಂಥರಾ ಅರ್ಥಪೂರ್ಣ ಕಾಕತಾಳೀಯವೇ ಆಗಿದೆ.

- Advertisement -
- Advertisement -

ಕಳೆದ ಅಂದರೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಯಾವುದಾದರೂ ಒಂದು ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರೆ ಈಗ ನಾವು ಆ ಪಕ್ಷದ ಸರಕಾರಕ್ಕೆ ಎರಡು ವರ್ಷ ತುಂಬಿದ್ದನ್ನು ಸ್ಮರಿಸಿ ಎರಡು ತಿಂಗಳಾಗುತ್ತಿತ್ತು. ಚುನಾವಣೆಯಲ್ಲಿ ಮತದಾರ ಮೂರೂ ಪಕ್ಷಗಳನ್ನು ತಿರಸ್ಕರಿಸಿದ ಕಾರಣಕ್ಕೆ ಈಗ ನಾವು ಚುನಾವಣಾ ನಂತರದ ಎರಡನೆಯ ಸರಕಾರದ ಒಂದನೆಯ ವರ್ಧಂತಿಯಲ್ಲಿದ್ದೇವೆ.

ಒಂದು ಸರಕಾರಕ್ಕೆ ಒಂದು ವರ್ಷವಾದಾಗ ಅಥವಾ ಐದು ವರ್ಷ ತುಂಬಿದಾಗ ಅದರ ಸಾಧನೆ -ವೈಫಲ್ಯಗಳನ್ನು ಪರಾಮರ್ಶೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮ ಬಳಿ ಯಾವುದೇ ಸರ್ವತ್ರ ಸ್ವೀಕೃತ ಮಾನದಂಡಗಳಿಲ್ಲ. ನಮ್ಮಲ್ಲಿ ಅಂದರೆ ಮಾಧ್ಯಮದವರ ಬಳಿ ಮಾತ್ರ ಎಂದಲ್ಲ, ಪ್ರಜಾತಂತ್ರದ ಸಿದ್ಧಾಂತಗಳಲ್ಲೇ ಸರಕಾರದ ಕೆಲಸವನ್ನು ಮೌಲ್ಯಮಾಪನ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಎಲ್ಲೂ ಪ್ರಸ್ತಾಪ ಇದ್ದಂತೆ ಇಲ್ಲ. ಸರ್ಕಾರವೊಂದರ ಕಾರ್ಯವೈಖರಿಯನ್ನು ಹೇಗೆ ಅಳೆಯಬೇಕು, ಹೇಗೆ ತೂಗಬೇಕು ಎನ್ನುವುದು ಏನಿದ್ದರೂ ಮತದಾರರ ಭಾವಕ್ಕೆ ಮತ್ತು ಭಕುತಿಗೆ ಬಿಟ್ಟ ವಿಚಾರ. ಇರಲಿ.

ಹೋದ ಚುನಾವಣೆ ಆದ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷಗಳ ಸಮ್ಮಿಶ್ರ ಸರಕಾರ ಇತ್ತು. ಅದು ಸಮ್ಮಿಶ್ರ ಸರ್ಕಾರದಂತೆ ಇರದೇ ಕಲಬೆರಕೆ ಸರ್ಕಾರದಂತೆ ವರ್ತಿಸಿತು ಎನ್ನುವುದು ವಾಸ್ತವ. ಅದನ್ನು ಕಪಟದಿಂದ ಕೆಡವಿ ಬಿಜೆಪಿ ಸರಕಾರ ರಚಿಸಿತು. ಈಗ ಕರ್ನಾಟಕದಲ್ಲಿ ಬಿಜೆಪಿ ‘ಬಹುಮತ’ದ ಆಧಾರದಲ್ಲಿ ರಚಿಸಿದ ಸರಕಾರ ಇದೆ. ಈ ಸರಕಾರದಲ್ಲಿ ಎರಡು ಭಾಗಗಳಿವೆ. ಒಂದು ಭಾಗ ಚುನಾಯಿತವಾದದ್ದು. ಇನ್ನೊಂದು ಭಾಗ ಖರೀದಿಸಲ್ಪಟ್ಟದ್ದು. ಚುನಾಯಿತ ಭಾಗ ಸಂಪೂರ್ಣ ಚುನಾಯಿತ ಎನ್ನುವ ಹಾಗಿಲ್ಲ ಯಾಕೆಂದರೆ ಚುನಾವಣೆಯಲ್ಲೂ ಕೆಲವೊಮ್ಮೆ ಅಥವಾ ಕೆಲವು ಮತಗಳನ್ನು ಖರೀದಿಸಲಾಗುತ್ತದೆ ಎನ್ನುವ ಕಾರಣಕ್ಕೆ. ಅದೇ ರೀತಿ ಖರೀದಿಸಲ್ಪಟ್ಟ ಭಾಗ ಸಂಪೂರ್ಣ ಖರೀದಿಸಲ್ಪಟ್ಟದ್ದು ಎನ್ನುವ ಹಾಗಿಲ್ಲ. ಖರೀದಿಯಾದವರು ಆ ನಂತರ ಉಪಚುನಾವಣೆಯಲ್ಲಿ ಮತ್ತೆ ಚುನಾಯಿತರಾಗಿದ್ದಾರೆ. ಇನ್ನೊಂದರ್ಥದಲ್ಲಿ ನೋಡುವುದಾದರೆ ಈ ಸರಕಾರ ಒಂದು ಭಾಗ ಅರ್ಹ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದ್ದಾರೆ ಇನ್ನೊಂದು ಭಾಗ ಮಾಜಿ ಅನರ್ಹ ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಇವೆಲ್ಲಾ ಯಾವ ಸರಕಾರದ ಸಾಧನೆಯ ಒಂದನೇ ವರ್ಧಂತಿಯ ಮೌಲ್ಯಮಾಪನ ನಡೆಸಬೇಕಿದೆಯೋ ಆ ಸರಕಾರಕ್ಕೆ ಸಂಬಂಧಿಸಿದ ಕೆಲವು ಮೂಲಭೂತ ಸತ್ಯಗಳು.

ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ನಡೆಯುವ ಸರಕಾರದ ವರ್ಷಾವಧಿ ಪರಾಮರ್ಶೆಯಲ್ಲಿ ಈ ಯೋಜನೆ, ಆ ಯೋಜನೆ, ಇದಕ್ಕೆ ಅಷ್ಟು ಹಣ, ಅದಕ್ಕೆ ಅಷ್ಟು ಹಣ, ಈ ಹಗರಣ, ಆ ಪ್ರಕರಣ ಅಂತ ಪಟ್ಟಿ ಮಾಡುವುದು ವಾಡಿಕೆ. ಅದನ್ನು ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ. ಯಾಕೆಂದರೆ ಎಲ್ಲಾ ಕಾಲದಲ್ಲೂ ಎಲ್ಲಾ ಸರಕಾರಗಳ ಅವಧಿಯಲ್ಲೂ ಇವೆಲ್ಲಾ ನಡೆಯುತ್ತವೆ. ಅದನ್ನು ಇಲ್ಲೂ ಮಾಡುವುದರಲ್ಲಿ ಅರ್ಥವಿಲ್ಲ. ಹಾಗೆಂದು ಮೇಲೆ ಹೇಳಿದಂತೆ ಇನ್ಯಾವುದೋ ರೀತಿಯಲ್ಲಿ ಸರ್ಕಾರವೊಂದರ ವಾರ್ಷಿಕ ಮೌಲ್ಯಮಾಪನ ಮಾಡುವುದು ಹೇಗೆ ಎನ್ನುವುದು ಯಾರಿಗೂ ತಿಳಿಯದ ಹಿನ್ನೆಲೆಯಲ್ಲಿ ಬಹುಶಹ ಹೀಗೆ ಮಾಡಬಹುದು. ಈ ಕಾಲಕ್ಕೆ ತಕ್ಕುದಾಗಿ ಈ ಸರಕಾರದ ಅವಧಿಯನ್ನು ಕೋವಿಡ್-19 ಪೂರ್ವದ ಅವಧಿ ಮತ್ತು ಕೋವಿಡ್-19 ಕಾಲದ ಅವಧಿ ಅಂತ ವಿಂಗಡಿಸೋಣ. ಕೋವಿಡ್-19 ಪೂರ್ವದಲ್ಲಿ ಈ ಸರಕಾರದ ಚರ್ಯೆ ಮತ್ತು ಕಾರ್ಯ ಹೇಗಿದ್ದವು ಮತ್ತು ಈಗ ಅಂದರೆ ಕೋವಿಡ್-19 ಅವಧಿಯಲ್ಲಿ ಹೇಗಿವೆ ಅಂತ ಸ್ಥೂಲವಾಗಿ ಅವಲೋಕಿಸಿದರೆ ಅಲ್ಲಿಗೆ ಪರಾಮರ್ಶೆಯ ಕಟ್ಟುಕಟ್ಟಳೆ ನೆರವೇರಿಸಿದಂತೆ ಅಂತ ಭಾವಿಸೋಣ.

ಕೊರೊನಾ ಪೂರ್ವದ ಅವಧಿ ಎಂದರೆ ಹೋದ ವರ್ಷದ ಜುಲೈನಲ್ಲಿ ಬಿ.ಎಸ್. ಯಡಿಯೂರಪ್ಪ ಎಂಬ ಹೆಸರಿನವರಾದ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಂದಿನಿಂದ ಹಿಡಿದು ಈ ವರ್ಷದ ಮಾರ್ಚ್‍ನಲ್ಲಿ ಕೊರೊನಾ ವೈರಸ್ ಕನ್ನಡದ ಮಣ್ಣಿಗೆ ಕಾಲಿಡುವ ತನಕದ ಸುಮಾರು ಎಂಟು ತಿಂಗಳ ಕಾಲ ಈ ಸರಕಾರ ಹೇಗೆ ಕಾರ್ಯ ನಿರ್ವಹಿಸಿತು? ಹೇಗೆ ಕಾರ್ಯ ನಿರ್ವಹಿಸಿತು ಎಂದರೆ ಕರ್ನಾಟಕ ಸರಕಾರವು ಬಿಜೆಪಿಯ ಕೇಂದ್ರ ಸರಕಾರದ ಒಂದು ರಾಜ್ಯ ಮಟ್ಟದ ಇಲಾಖೆಯಂತೆ ಕಾರ್ಯ ನಿರ್ವಹಿಸಿತು. ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿಗೆ ತಿಂಗಳ ಕಾಲ ಮಂತ್ರಿಮಂಡಲ ರಚಿಸುವ ಅಧಿಕಾರವಿಲ್ಲದ, ಮಂತ್ರಿಮಂಡಲ ರಚನೆಯ ಕಾಲಕ್ಕೆ ಅದರಲ್ಲಿ ಯಾರಿರುತ್ತಾರೆ ಅಂತ ನಿರ್ಣಯಿಸಲು ಅಥವಾ ಊಹಿಸಲೂ ಆಗದ ರೀತಿಯಲ್ಲಿ ರಾಜ್ಯಸರಕಾರವನ್ನು ಕೇಂದ್ರದಿಂದ ಬಿಜೆಪಿಯ ನಾಯಕರು ನಿಯಂತ್ರಿಸಿದರು. ಕೇಂದ್ರ ಸರಕಾರದಿಂದ ನೆರೆ ಪರಿಹಾರ ಬರಲಿಲ್ಲ, ಬರ ಪರಿಹಾರ ಬರಲಿಲ್ಲ. ಅದು ಬಿಡಿ, ಸಾಂವಿಧಾನಿಕವಾಗಿ ಮತ್ತು ಮೂಲಭೂತ ಅವಶ್ಯಕತೆಯಾಗಿ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ತೆರಿಗೆಯ ಪಾಲು ಬರಲಿಲ್ಲ. ರಾಜ್ಯ ಸರಕಾರವು ಕೇಂದ್ರ ಸರಕಾರ ನೀಡಿದ್ದಷ್ಟನ್ನು ಪಡೆದು, ಹೇಳಿದ್ದಷ್ಟನ್ನು ಮಾಡಿಕೊಂಡು ಇರಬೇಕಾದ ಪರಿಸ್ಥಿತಿ ಇದ್ದಂತೆ ತೋರಿತು. ದುರ್ಬಲ ಮುಖ್ಯಮಂತ್ರಿಗಳ ಕತೆ ಹಿಂದೆಯೂ ಕೇಳಿದ್ದೇವೆ, ಮುಖ್ಯಮಂತ್ರಿಗಳನ್ನು ಕೇಂದ್ರ ಸರಕಾರ ಹಿಂದೆ ಇತರ ಪಕ್ಷಗಳ ಸರಕಾರ ಇದ್ದಾಗಲೂ ನಿಯಂತ್ರಿಸುತ್ತಿದ್ದ ಕತೆ ಕೇಳಿದ್ದೇವೇ. ಆದರೆ ಒಂದು ಇಡೀ ರಾಜ್ಯ ಸರಕಾರವೇ ಕೇಂದ್ರ ಸರಕಾರದ ಮುಂದೆ ಹೀಗೆ ದೈನೇಸಿ ಮಂಡಿಯೂರಿ ನಡೆದುಕೊಳ್ಳಬೇಕಾದ ದೌರ್ಬಾಗ್ಯ ಹಿಂದೆ ಬಂದದ್ದು ಅಧಿಕೃತವಾಗಿಯಾಗಲೀ, ಅನಧಿಕೃತವಾಗಿಯಾಗಲೀ ಎಲ್ಲೂ ದಾಖಲಾದ ಹಾಗೆ ಇಲ್ಲ. ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ಶಾಸಕರ ಖರೀದಿಯ ಸಂದರ್ಭದಲ್ಲಿ, ಉಪಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ಹೇಳುತಿದ್ದ ಒಂದು ಮಾತು ಎಂದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ, ಅರ್ಥಾತ್ ಬಿಜೆಪಿ ಸರಕಾರ, ಇದ್ದುಬಿಟ್ಟರೆ ಮತ್ತೆ ಕನ್ನಡಿಗರ ಭಾಗ್ಯಕ್ಕೆ ಎಣೆಯೇ ಇಲ್ಲ ಅಂತ. ಬಹಳಷ್ಟು ಜನ ಅದನ್ನು ನಂಬಿದರು ಕೂಡಾ. ಆ ಮಾತಿನ ಸತ್ಯಾಸತ್ಯತೆ ಈ ಸರಕಾರ ಅಧಿಕಾರಕ್ಕೆ ಬಂದ ಒಂದೆರಡು ತಿಂಗಳುಗಳಲ್ಲೇ ಜನರಿಗೆ ಮನವರಿಕೆಯಾಗಿರಬೇಕು.

ಕೊರೋನ ಪೂರ್ವದ ಬಹುಪಾಲು ಅವಧಿಯಲ್ಲಿ ಇದ್ದದ್ದು ಒಂದು ಅಸಂಪೂರ್ಣ ಸರಕಾರ. ಯಾಕೆಂದರೆ ಮಂತ್ರಿ ಮಂಡಲದ ಅರ್ಧಕ್ಕರ್ಧವನ್ನು ಕಾಂಗ್ರೆಸ್ಸಿನಿಂದ ಖರೀದಿಸಿ ತಂದವರಿಗೆ ಅಂತ ಬದಿಗಿರಿಸಿ ಕಾಯಲಾಯಿತು. ಸುಪ್ರೀಂ ಕೋರ್ಟ್‍ನಿಂದ ಪಕ್ಷಾಂತರ ಮಾಡಿದ ಕಾರಣಕ್ಕೆ ಅನರ್ಹರು ಅಂತ ಕರೆಸಿಕೊಂಡ ಅವರು ಉಪಚುನಾವಣೆ ಗೆಲ್ಲುವವರೆಗೂ ಮಂತ್ರಿಗಳಾಗುವ ಹಾಗಿರಲಿಲ್ಲ. ಕೊನೆಗೂ ಡಿಸೆಂಬರ್‌ನಲ್ಲಿ ಚುನಾವಣೆಗಳು ನಡೆದು ಜನವರಿ ಹೊತ್ತಿಗೆ ಮಾಜಿ ಅನರ್ಹರೂ ಮಂತ್ರಿಮಂಡಲ ಸೇರಿಕೊಳ್ಳುವುದರ ಜೊತೆಗೆ ಸರಕಾರ ಹೆಚ್ಚುಕಡಿಮೆ ಪೂರ್ಣಸ್ವರೂಪ ಪಡೆಯಿತು. ಇತ್ತ ಖರೀದಿಯಾದ ಮಾಜಿ ಅನರ್ಹರು ಮಂತ್ರಿ ಮಂಡಲ ಸೇರುವ ಹೊತ್ತಿಗೆ ಅತ್ತ ಯಾವುದೋ ದೇಶದಲ್ಲಿ ಹುಟ್ಟಿಕೊಂಡ ಕೊರೊನ ವೈರಸ್ ಭಾರತಕ್ಕೆ ವಕ್ಕರಿಸಿದ್ದು ಒಂಥರಾ ಅರ್ಥಪೂರ್ಣ ಕಾಕತಾಳೀಯವೇ ಆಗಿದೆ.

ಹಾಗೂ ಹೀಗೋ ಫೆಬ್ರವರಿ ಕಳೆದು, ದುಡ್ಡಿಲ್ಲದ ಸ್ಥಿತಿಯಲ್ಲೇ ಒಂದು ಬಜೆಟ್ ಮಂಡಿಸಿ ಇನ್ನೇನು ಕೊಸರಿ ನಿಲ್ಲಬೇಕು ಎಂದುಕೊಂಡಾಗ ಕರ್ನಾಟಕಕ್ಕೂ ಬಂದೇ ಬಿಟ್ಟಿತು ಕೊರೋನಾ. ಅದು ಬಂದದ್ದರಿಂದ ಒಂದರ್ಥದಲ್ಲಿ ಸರಕಾರ ಮತ್ತು ಮುಖ್ಯಮಂತ್ರಿಗಳ ಸ್ಥಾನ ಸುಭದ್ರವಾಯಿತು ಅಂತ ಹಲವು ವಿಶ್ಲೇಷಕರ ಅಭಿಪ್ರಾಯ. ಯಾಕೆಂದರೆ, ಮೊದಲ ಅವಧಿಯಲ್ಲಿ ಬಿಜೆಪಿಯ ಕೇಂದ್ರ ನಾಯಕರು ರಾಜ್ಯ ಸರಕಾರವನ್ನು ನಡೆಸಿಕೊಂಡದನ್ನು ನೋಡಿದ ಹಲವರಿಗೆ ಒಳಗಿನಿಂದ ಏನೋ ಮಸಲತ್ತು ನಡೆಯುತ್ತಿದೆ. ಈ ಸರಕಾರವನ್ನು ಹೀಗೆ ಮುಂದುವರಿಸುವ ಇರಾದೆ ದೆಹಲಿಯ ದೊಡ್ಡ ನಾಯಕರಿಗೆ ಇಲ್ಲದ ಕಾರಣವೇ ಈ ರೀತಿಯ ಅಸಹಕಾರ ಚಳವಳಿ ನಡೆಯುತ್ತಿದೆ ಅಂತ ಅನ್ನಿಸಿತ್ತು. ಅಂತೂ ಕೊರೊನಾ ಬಂದು ಸದ್ಯಕ್ಕೆ ಈ ಸರಕಾರ ಹೀಗೆ ಮುಂದುವರಿಯುವುದು ಎಂದಾಯಿತು. ಜತೆಗೆ ಆರಂಭದ ಅವಧಿಯಲ್ಲಿ ರಾಜ್ಯ ಸರಕಾರ ಕೊರೊನಾ ಸಂಕಷ್ಟವನ್ನು ಚೆನ್ನಾಗಿಯೇ ನಿಭಾಯಿಸಿತು ಎನ್ನುವ ಅಭಿಪ್ರಾಯ ಬೇರೆ ಹುಟ್ಟಿಕೊಂಡು ಒಂದು ಮಟ್ಟಿಗೆ ರಾಜಕೀಯ ವಾತಾವರಣ ತಿಳಿಯಾಯಾಯಿತು. ಅಷ್ಟರೊಳಗೇ ಬಂದ ರಾಜ್ಯ ಸಭಾ ಚುನಾವಣೆಯ ಕಾಲಕ್ಕೆ ಸ್ವಲ್ಪ ಮಟ್ಟಿಗೆ ಭಿನ್ನಮತ ಅಂತೇನೋ ಕಾಣಿಸಿಕೊಂಡದ್ದು ಹಾಗೆಯೇ ತಣ್ಣಗಾಯಿತು. ಅಥವಾ ದೆಹಲಿಯ ದೊಡ್ಡ ನಾಯಕರು ಅದನ್ನು ತಣ್ಣಗಾಗಿಸಿದರು.

ಈಗ ಕೊರೊನಾ ಕಾಲದಲ್ಲಿ ರಾಜ್ಯ ಸರಕಾರದ ಕಾರ್ಯವೈಖರಿಯ ಪ್ರಮುಖ ವಿಚಾರಕ್ಕೆ ಬರೋಣ. ಕೊರೊನಾ ಪೂರ್ವದ ಅವಧಿಯಲ್ಲಿ ಕೇಂದ್ರದ ಮುಂದೆ ಹಣಕ್ಕಾಗಿ ದೈನೇಸಿ ಬೇಡುತ್ತಿದ್ದದ್ದೇ ಸರಕಾರದ ಕಾರ್ಯವೈಖರಿಯ ಮುಖ್ಯ ಭಾಗವಾದರೆ, ಕೊರೊನಾ ಕಾಲದಲ್ಲಿ ಕರ್ನಾಟಕ ಸರಕಾರವು ಕೇಂದ್ರ ಸರಕಾರದ ಸಂಪೂರ್ಣ ಅಜ್ಞಾನುವರ್ತಿಯಾಗಿ ನಡೆದುಕೊಂಡದ್ದು ವರ್ಷದ ಅವಧಿಯ ಇನ್ನೊಂದು ವಿಶೇಷ. ಅದರ ಫಲವಾಗಿ ಭೂಮಿಗೆ ಸಂಬಂಧಿಸಿದ ಕಾನೂನುಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಾಯಿತು, ಭೂಸುಧಾರಣೆಯ ಕಾಲದ ಕೆಲ ಕಾನೂನುಗಳನ್ನೆಲ್ಲಾ ಬದಲಾಯಿಸಲಾಯಿತು, ಕೃಷಿ ಮಾರುಕಟ್ಟೆ ನಿಯಂತ್ರಣಗಳನ್ನೆಲ್ಲಾ ಸಡಿಲಿಸಲಾಯಿತು, ಕಾರ್ಮಿಕ ಕಾನೂನುಗಳನ್ನು ವ್ಯಾಪಕವಾಗಿ ತಿದ್ದುಪಡಿ ಮಾಡಲಾಯಿತು. ಯಾವ ಯಾವ ಮಹತ್ವದ ಕಾನೂನುಗಳನ್ನು ಜನಾಭಿಪ್ರಾಯ ಪಡೆದು, ಸಾರ್ವಜನಿಕ ಚರ್ಚೆ ನಡೆಸಿ ತಿದ್ದುಪಡಿ ಮಾಡುವ ಅಗತ್ಯವಿತ್ತೋ ಅಂತಹ ಕಾನೂನುಗಳನ್ನೇ ಕೊರೊನಾ ಕಾಲದ ಜನಸಂಕಷ್ಟದ ಅವಧಿಯನ್ನು ದುರ್ಬಳಕೆ ಮಾಡಿಕೊಂಡು ಬದಲಾಯಿಸಿದ್ದು ಈ ಸರಕಾರ ಮೊದಲ ವರ್ಷ ಮಾಡಿದ ಘನ ಕಾರ್ಯ. ಇದರ ಪರಿಣಾಮಗಳು ಮುಂದೆ ಹೇಗೆ ಎನ್ನುವುದು ಒಂದು ಚಿಂತೆಯಾದರೆ, ಇದನ್ನು ರಾಜ್ಯ ಸರಕಾರ ಮಾಡಿದ್ದು ತನ್ನ ಸ್ವಂತ ವಿವೇಚನೆಯಿಂದಲ್ಲ, ತನ್ನೆಲ್ಲಾ ವಿವೇಚನೆಯನ್ನು ಪಕ್ಷದ ದೆಹಲಿ ದೊರೆಗಳ ಕಾಲಬುಡದಲ್ಲಿ ಅಡವಿಟ್ಟುಬಿಟ್ಟಿದೆ ಎಂಬುದು ಅಷ್ಟೇ ಮಹತ್ವ ವಿಚಾರ. ಕೊರೊನಾ ನಿರ್ವಹಣೆ ಬರಬರುತ್ತಾ ಕುಸಿಯಿತು. ಸರಕಾರದಲ್ಲಿ ಚುನಾಯಿತರು ಮತ್ತು ಖರೀದಿಸಲ್ಪಟ್ಟವರ ನಡುವೆ ಮೂಡಿದ ಒಡಕು ವೈರಸ್ ವಿರುದ್ಧದ ಯುದ್ಧವನ್ನು ಭಾಧಿಸುತ್ತಿರುವಂತೆ ತೋರುತ್ತದೆ. ಜತೆಗೆ ಕೊರೊನಾ ನಿರ್ವಹಣೆಗೆ ಸಂಬಂಧಿಸಿದ ಖರೀದಿಯಲ್ಲಿ ಬಹುದೊಡ್ಡ ಹಗರಣದ ವಾಸನೆ ಬಡಿಯಲಾರಂಭಿಸಿದೆ. ಒಂದು ವರ್ಷಕ್ಕೆ ಇಷ್ಟು ವಿಶೇಷಗಳನ್ನು ಪಟ್ಟಿ ಮಾಡಿದರೆ ಸಾಲದೇ?

  • ಎ.ನಾರಾಯಣ

(ಲೇಖಕರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು)


ಇದನ್ನು ಓದಿ: ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ; ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳವುದು ಇನ್ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...