ಕರ್ನಾಟಕದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಎಂದೇ ಪರಿಗಣಿತವಾಗಿರುವ ಜಾತಿ ಗಣತಿಯ ವರದಿಯನ್ನು ನಾಳೆ (ಫೆ.29) ಸರ್ಕಾರಕ್ಕೆ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿರುವುದಾಗಿ ಈದಿನ.ಕಾಂ ವರದಿ ಮಾಡಿದೆ.
“ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯನವರ ಭೇಟಿಗೆ ಸಮಯ ಕೇಳಿದ್ದೇವೆ. ಕೊಡುವುದಾಗಿ ತಿಳಿಸಿದ್ದಾರೆ. ಸ್ಥಳ ಇನ್ನೂ ನಿಗದಿಯಾಗಿಲ್ಲ. ಸ್ಥಳ ನಿಗದಿಯಾದ ಬಳಿಕ ಭೇಟಿ ಮಾಡಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ” ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿರುವುದಾಗಿ ವರದಿ ಹೇಳಿದೆ.
“ವರದಿ ಈಗಾಗಲೇ ಸಿದ್ದವಾಗಿದೆ. ಮುದ್ರಣದ ಕೆಲಸ ಕೂಡ ಮುಗಿದಿದೆ. ಸರ್ಕಾರಕ್ಕೆ ಸಲ್ಲಿಸಲಷ್ಟೇ ಬಾಕಿ ಇದೆ. ಇದು ಹಿಂದುಳಿದ ವರ್ಗಗಳ ಆಯೋಗದ ವರದಿ” ಎಂದು ಹೇಳಿದ್ದಾರೆ ಎಂದಿದೆ.
“ನಮ್ಮ ಯಾವುದೇ ದಾಖಲೆಗಳು ಕಳೆದು ಹೋಗಿರಲಿಲ್ಲ. ಅದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೇ. ನಮ್ಮ ವರದಿಯಲ್ಲಿ ಏನಿದೆ ಎಂಬ ಅಂಶವನ್ನು ನಾವು ಬಹಿರಂಗಪಡಿಸುವಂತಿಲ್ಲ. ಅದು ಸರ್ಕಾರದ ಕೆಲಸ. ನಮ್ಮ ಕೆಲಸ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸುವುದಷ್ಟೇ. ಆಯೋಗದ ಎಲ್ಲ ಸದಸ್ಯರು ಈ ಸಂದರ್ಭದಲ್ಲಿ ಜೊತೆಗಿರಲಿದ್ದಾರೆ” ಎಂದು ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದ ಕಾರ್ಯಾವಧಿಯು ಫೆ.29ಕ್ಕೆ ಕೊನೆಗೊಳ್ಳಲಿದೆ. ಈ ಆಯೋಗವು ಹೆಚ್. ಕಾಂತರಾಜ್ ನೇತೃತ್ವದ ಆಯೋಗ ಸಿದ್ಧಪಡಿಸಿದ ವರದಿಯ ದತ್ತಾಂಶಗಳನ್ನು ಬಳಸಿಕೊಂಡು ಪರಿಷ್ಕೃತ ವರದಿ ಸಿದ್ಧಪಡಿಸಿದೆ.
ಇದನ್ನೂ ಓದಿ : ನಮ್ಮ ನಾಯಕ ಅಂದು ಗುಹೆಯೊಳಗೆ, ಇಂದು ನೀರೊಳಗೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರಾಜ್