ಐದು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ಜೀವ ಚೆಲ್ಲಿದ 40 ಜನ ಭಾರತೀಯ ಸೈನಿಕರ ಹತ್ಯೆಗೆ ಕಾರಣ ಯಾರು? ಈ ಕೃತ್ಯಕ್ಕೆ ಬಳಸಿದ ಆರ್ಡಿಎಕ್ಸ್ ಎಲ್ಲಿಂದ ಬಂತು? ಈ ಪ್ರಕರಣದ ತನಿಖೆ ಏನಾಯ್ತು? ಎಂಬುದನ್ನು ಅಯೋಗ್ಯ ಬಿಜೆಪಿ ನಾಯಕರು ಸ್ಪಷ್ಟಪಡಿಸಲಿ ಎಂದು ಸಚಿವ ಕೃಷ್ಣಬೈರೇಗೌಡ ಆಗ್ರಹಿಸಿದರು.
ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಮಾತನಾಡುತ್ತಾ “ಕೇಂದ್ರ ಸರ್ಕಾರ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಯಾವ ಪಕ್ಷ? ದೇಶ ಒಡೆದದ್ದು ಯಾರು?” ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣಬೈರೇಗೌಡ ಅವರು, ಪುಲ್ವಾಮಾ ಹತ್ಯಾಕಾಂಡ ಘಟನೆಯನ್ನು ಉಲ್ಲೇಖಿಸಿ ಬಿಜೆಪಿಗರ ವಿರುದ್ಧ ಕಿಡಿಕಾರಿದರು. “ನಮ್ಮ ದೇಶದ 40 ಜನ ಸೈನಿಕರ ಸಾವಿಗೆ ಕಾರಣ ಯಾರು ಎಂಬುದನ್ನು ಜನರ ಮುಂದೆ ಹೇಳಲಾಗದ, ಪ್ರಕರಣದ ತನಿಖೆ ನಡೆಸುವ ಯೋಗ್ಯತೆಯೂ ಇಲ್ಲದ ಅಯೋಗ್ಯರು ಬಿಜೆಪಿಗರು. ಇವರಿಗೆ ದೇಶಕ್ಕೆ ಬೆಂಕಿ ಇಟ್ಟು ಓಟು ಹಾಕಿಸಿಕೊಳ್ಳುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ?” ಎಂದು ಆಕ್ರೋಶ ಹೊರಹಾಕಿದರು.
ಮುಂದುವರೆದು, “ಬಿಜೆಪಿಗರು ಸದನದಲ್ಲಿ ವಾಸ್ತವಕ್ಕೆ ಹತ್ತಿರವಾದ ವಿಚಾರದ ಬಗ್ಗೆ ಮಾತನಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬರೀ ಸುಳ್ಳು ಮತ್ತು ಕಟ್ಟುಕಥೆಗಳಿಂದ ಕೂಡಿದ ಅವರ ಮಾತಿಗೆ ಸದನದಲ್ಲಿ ಅವಕಾಶ ನೀಡಬೇಡಿ. ಬಿಜೆಪಿ ನಾಯಕರು ಸದನದ ಒಳಗೆ ಮತ್ತು ಹೊರಗೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿಷ್ಣಾತರು. ಅದರಲ್ಲೂ, ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಪ್ರಚೋದನಾತ್ಮಕ ಮಾತುಗಳನ್ನಾಡುತ್ತಿದ್ದಾರೆ” ಎಂದರು.
“ನಾವು ತಾಳ್ಮೆಯಿಂದ ಇದ್ದೇವೆ ಎಂಬ ಕಾರಣಕ್ಕೆ ಅವರು ದುರ್ಲಾಬ ಪಡೆದುಕೊಂಡು ವಾಸ್ತವ ಬಿಟ್ಟು ಪ್ರಚೋದನೆಯ ಮಾತುಗಳನ್ನಾಡುತ್ತಿದ್ದಾರೆ. ನಮ್ಮ ತಾಳ್ಮೆ ಪರೀಕ್ಷೆ ಮಾಡುವುದೇ ಅವರ ಉದ್ದೇಶವಾಗಿದೆ. ದೇಶದ ವಿಭಜನೆಗೆ ಯಾರು ಕಾರಣ? ಎಂಬ ಬಗ್ಗೆ ಚರ್ಚಿಸಲು ನಾವು ಸಿದ್ದರಿದ್ದೇವೆ. ಆದರೆ, ಇಂದು ಅವರು ಅಸಲಿ ವಿಚಾರದ ಬಗ್ಗೆ ಮಾತನಾಡಲಿ. ವಿಷಯಾಂತರ ಬೇಡ” ಎಂದು ಸಚಿವರು ಕಿಡಿಕಾರಿದರು.
ಇದನ್ನೂ ಓದಿ : ಕಾಂಗ್ರೆಸ್ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಮಾಡಿದ ಬಿಜೆಪಿ; ಕ್ರಮ ತೆಗೆದುಕೊಳ್ಳುತ್ತಾ ಸಿದ್ದರಾಮಯ್ಯ ಸರ್ಕಾರ?