ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಎಂದೇ ಕರೆಸಿಕೊಳ್ಳುವ ಯೋಜನೆ ‘ಅನ್ನಭಾಗ್ಯ’ ಯೋಜನೆಗೆ ಇದೀಗ ಕತ್ತರಿ ಹಾಕಲಾಗುತ್ತದೆ ಎಂದು ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಹೆಚ್ಚುವರಿ ತಲಾ 5 ಕೆ.ಜಿ ಅಕ್ಕಿ ವಿತರಣೆಗಾಗಿ ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ನೀಡಲು ಒಪ್ಪಿದ್ದ ಭಾರತೀಯ ಆಹಾರ ನಿಗಮ ಈಗ ಹಿಂದೇಟು ಹಾಕಿದೆ. ಇದಕ್ಕೆ ಬಿಜೆಪಿಯ ಬಡವರ ವಿರೋಧಿ ಧೋರಣೆಯೇ ಕಾರಣ. ಈ ಸಂಬಂಧ ಕೇಂದ್ರಕ್ಕೆ ಪ್ರತಿಭಟನಾ ಪತ್ರ ಬರೆಯಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
”ಭಾರತೀಯ ಆಹಾರ ನಿಗಮವು 7 ಲಕ್ಷ ಟನ್ ಅಕ್ಕಿ ಇಟ್ಟುಕೊಂಡು ಕೊಡುವುದಿಲ್ಲ ಎನ್ನುತ್ತಿದೆ. ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್ಗೆ ಒಳ್ಳೆಯ ಹೆಸರು ಬರುತ್ತದೆ. ಬಡವರ ಕಲ್ಯಾಣ ಆಗುತ್ತದೆ. ಅದನ್ನು ತಪ್ಪಿಸಬೇಕು ಎಂದೇ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ” ಎಂದು ಹೇಳಿದರು.
”ನಿಗಮವು ನಮಗೆ ಅಕ್ಕಿ ಕೊಡುವುದಾಗಿ ತಿಳಿಸಿದ್ದರಿಂದಲೇ ನಾವು ಜುಲೈ 1 ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ತಲಾ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಈಗ ಕೊಡುವುದಿಲ್ಲ ಎನ್ನುತ್ತಿದೆ. ಬೇರೆ ರಾಜ್ಯಗಳಿಂದ ಖರೀದಿಸಬೇಕಾಗಿದೆ. ತಮ್ಮ ಬಳಿ ಅಕ್ಕಿ ಇಲ್ಲ ಎಂದು ಪಂಜಾಬ್ ಹೇಳಿದೆ. ಛತ್ತೀಸ್ಗಢ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನೋಡೋಣ ಎಂದಿದ್ದಾರೆ. ಆ ರಾಜ್ಯಗಳ ಜತೆ ಮಾತುಕತೆಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಲ್ಲಿಗೆ ತೆರಳಲಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣ; ರಾಹುಲ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್
”ನಮ್ಮ ಅಧಿಕಾರಿಗಳು ಹೆಚ್ಚುವರಿ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನಿಗಮ ಅಧಿಕಾರಿಗಳು ನಿಗಮದ ಬಳಿ ಅಕ್ಕಿ ಇದೆ. 2.8 ಲಕ್ಷ ಟನ್ ಅಕ್ಕಿ ಕೊಡಲು ಅಭ್ಯಂತರವಿಲ್ಲ ಎಂದು ಹೇಳಿದ್ದರು. ಪ್ರತಿ ಕ್ವಿಂಟಲ್ಗೆ 73,400ರಂತೆ, ಎಲೆಕ್ಟ್ರಾನಿಕ್ ಹರಾಜಿನಲ್ಲಿ ಭಾಗವಹಿಸದೇ ಪಡೆದುಕೊಳ್ಳಬಹುದು ಎಂದೂ ನಿಗಮದ ಪ್ರಾದೇಶಿಕ ವ್ಯವಸ್ಥಾಪಕರು ತಿಳಿಸಿದ್ದರು. ಆ ಬಳಿಕ ಇನ್ನೊಂದು ಪತ್ರ ಬರೆದು 13,189.45 ಟನ್ ಅಕ್ಕಿ ಕೊಡುವುದಾಗಿಯೂ ಹೇಳಿದ್ದರು” ಎಂದು ಸಿದ್ದರಾಮಯ್ಯ ವಿವರಿಸಿದರು.
ರಾಜ್ಯಗಳಿಗೆ ಕೇಂದ್ರದ ಪತ್ರ..
ಜೂನ್ 13 ರಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪತ್ರವೊಂದನ್ನು ಬರೆದಿತ್ತು. ಅದರಲ್ಲಿ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳು ಹೆಚ್ಚುವರಿ ಅಕ್ಕಿ ಮತ್ತು ಗೋಧಿಯನ್ನು ‘ಮುಕ್ತ ಮಾರುಕಟ್ಟೆಯ ಮಾರಾಟ ಯೋಜನೆ’ಯಡಿ (ಒಎಂಎಸ್ಎಸ್ಡಿ) ಖರೀದಿಸಲು ಅವಕಾಶ ಇಲ್ಲ’ ಎಂದುತಿಳಿಸಿತ್ತು. ಈ ಪತ್ರವನ್ನು ಸಿದ್ದರಾಮಯ್ಯ ಪ್ರದರ್ಶಿಸಿದರು.
ಅಕ್ಕಿ ಸಿಗದಿದ್ದರೆ ಬಡವರ ಖಾತೆಗೆ ಹಣ ಹಾಕಿ: ಸಿ.ಟಿ.ರವಿ
”ಸಿದ್ದರಾಮಯ್ಯ ಅವರೇ ನಿಮ್ಮ ಪ್ರಣಾಳಿಕೆ ಪ್ರಕಾರ ನೀವು ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ನೀಡಲೇಬೇಕು. ಅಕ್ಕಿ ಹೊಂದಿಸಲು ಸಾಧ್ಯವಾಗದಿದ್ದರೆ ಅಲ್ಲಿಯವರೆಗೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿಯ ಮಾರುಕಟ್ಟೆ ದರದ ಮೊತ್ತವನ್ನು ಬಡವರ ಖಾತೆಗೆ ಜಮೆ ಮಾಡಿ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ರಾಜ್ಯದ ಪ್ರತಿಯೊಬ್ಬ ಬಡವರಿಗೂ ಪ್ರತಿ ತಿಂಗಳೂ ಐದು ಕೆಜಿ ಅಕ್ಕಿ ಕೊಡುತ್ತಿರುವುದು @narendramodi ಜಿ ಅವರ ನೇತೃತ್ವದ @BJP4India ಸರಕಾರ. @siddaramaiah ನವರೇ ನಿಮ್ಮ ಪ್ರಣಾಳಿಕೆ ಪ್ರಕಾರ ನೀವು ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ನೀಡಿ. ಅಕ್ಕಿ ಹೊಂದಿಸಲು ಸಾಧ್ಯವಾಗದಿದ್ದರೆ ಅಲ್ಲಿಯವರೆಗೆ ಪ್ರತಿಯೊಬ್ಬರಿಗೂ ಹತ್ತು ಕೆಜಿ…
— C T Ravi 🇮🇳 ಸಿ ಟಿ ರವಿ (@CTRavi_BJP) June 14, 2023
ಈ ಕುರಿತು ಟ್ವಿಟ್ ಮಾಡಿರುವ ಅವರು, ”ರಾಜ್ಯದ ಪ್ರತಿಯೊಬ್ಬ ಬಡವರಿಗೂ ಪ್ರತಿ ತಿಂಗಳು ಐದು ಕೆ.ಜಿ.ಅಕ್ಕಿ ಕೊಡುತ್ತಿರುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ವೈಫಲ್ಯ: ವಿಜಯೇಂದ್ರ
”ಅಕ್ಕಿ ಯೋಜನೆ ಜಾರಿಗೆ ತರುವಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ನಿಮ್ಮ ಸರ್ಕಾರದ ವೈಫಲ್ಯ ಅನಾವರಣಗೊಳ್ಳುವ ಆತಂಕದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ನಿಮ್ಮ ದಿಕ್ಕು ತಪ್ಪಿಸುವ ತಂತ್ರ ಅರ್ಥ ಮಾಡಿಕೊಳ್ಳದೇ ಇರುವಷ್ಟು ನಮ್ಮಜನ ಮುಗ್ಧರಲ್ಲ” ಎಂದು ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
”ಉಚಿತ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಅಕ್ಕಿ ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದೀರಿ. ಈ ಹಿಂದೆಯೂ ನಿಮ್ಮ ಆಡಳಿತದ ಅವಧಿಯಲ್ಲಿ ಕೇಂದ್ರದಿಂದ ಅಕ್ಕಿ ತರಿಸಿಕೊಂಡು ಅನ್ನರಾಮಯ್ಯ ಎಂದು ಕರೆಸಿಕೊಂಡಿರಿ. ಅಪ್ಪಿತಪ್ಪಿಯೂ ಕೇಂದ್ರ ಸರ್ಕಾರದ ಕೊಡುಗೆ ಕುರಿತು ಎಲ್ಲೂ ಉಲ್ಲೇಖಿಸುವ ಔದಾರ್ಯವನ್ನು ತೋರಿಸಲೇ ಎಲ್ಲ” ಎಂದು ಅವರು ಕುಟುಕಿದ್ದಾರೆ.