ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೋಟ್ಯಾಧಿಪತಿ ಗೆಳೆಯರ ಕೋಟ್ಯಂತರ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಸಾಮಾನ್ಯ ಜನರಿಗಾಗಿ ಸರ್ಕಾರದ ಬೊಕ್ಕಸವನ್ನು ತೆರೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಎಕ್ಸ್ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಕೆಲವು ಬಿಲಿಯನೇರ್ಗಳ 16 ಲಕ್ಷ ಕೋಟಿ ಸಾಲವನ್ನು ಒಂದೇ ಬಾರಿಗೆ ಮನ್ನಾ ಮಾಡಿದ್ದಾರೆ. ಇಷ್ಟು ಹಣದಿಂದ MGNREGAದಂತಹ ಯೋಜನೆಯನ್ನು 24 ವರ್ಷಗಳ ಕಾಲ ನಡೆಸಬಹುದಿತ್ತು. ಕಾಂಗ್ರೆಸ್ನ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳುವವರು, ಈ ಅಂಕಿ-ಅಂಶಗಳನ್ನು ನಿಮ್ಮಿಂದ ಮರೆಮಾಡುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಸ್ನೇಹಿತರ ಕಡೆಗೆ ದಯೆ ತೋರಿರುವುದು ಸಾಕು, ಸಾಮಾನ್ಯ ಜನರಿಗಾಗಿ ಸರ್ಕಾರದ ಬೊಕ್ಕಸವನ್ನು ತೆರೆಯುವ ಸಮಯ ಇದಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಕಾಂಗ್ರೆಸ್ ನಿರಂತರವಾಗಿ ಟೀಕಿಸುತ್ತಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಹಿಂದುಳಿದವರ ಕಲ್ಯಾಣಕ್ಕೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವ ಭರವಸೆ ನೀಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸು ಮತ್ತು ಸಾಂಸ್ಥಿಕ ಸಮೀಕ್ಷೆ ನಡೆಸುವುದಾಗಿಯೂ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಪಕ್ಷವು ಅಧಿಕಾರಕ್ಕೆ ಬಂದರೆ ಭರವಸೆ ನೀಡಿರುವ ರಾಷ್ಟ್ರವ್ಯಾಪಿ ಜಾತಿ ಗಣತಿಯ ಜೊತೆಗೆ ಈ ಸಮೀಕ್ಷೆ ನಡೆಸಲಾಗುವುದು. ಇತರ ಹಿಂದುಳಿದ ವರ್ಗಗಳು (ಒಬಿಸಿಗಳು), ಪರಿಶಿಷ್ಟ ಜಾತಿಗಳು (ಎಸ್ಸಿಗಳು), ಪರಿಶಿಷ್ಟ ಪಂಗಡಗಳು (ಎಸ್ಟಿಗಳು) ಮತ್ತು ಅಲ್ಪಸಂಖ್ಯಾತ ಜನಸಂಖ್ಯೆ ಬಗ್ಗೆ ತಿಳಿಯಲು ನಾವು ಮೊದಲು ರಾಷ್ಟ್ರವ್ಯಾಪಿ ಜಾತಿಗಣತಿಯನ್ನು ಮಾಡುತ್ತೇವೆ, ನಂತರ ನಾವು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸುತ್ತೇವೆ. ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಇದೊಂದು ಐತಿಹಾಸಿಕ ಹೆಜ್ಜೆ. ಜನರಿಗೆ ಸರಿಯಾದ ಪಾಲು ನೀಡುವುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನು ಓದಿ: ಚುನಾವಣಾ ಬಾಂಡ್ ಹಗರಣದ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ