ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಕರ್ನಾಟಕದಲ್ಲಿ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಜೊತೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮನ್ಸ್ ನೀಡಿದ್ದಾರೆ.
ಮೇ 9ರಂದು ರಾಜ್ಯ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್ ಅವರು ಸಲ್ಲಿಸಿರುವ ದೂರಿನ ಅನ್ವಯ ಈ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಶೇ 40ರಷ್ಟು ಭ್ರಷ್ಟಾಚಾರದ ಆರೋಪಗಳನ್ನು ಕಾಂಗ್ರೆಸ್ ಮಾಡಿತ್ತು. ಈ ಸಂಬಂಧ ಬಿಜೆಪಿ ಕಾನೂನು ಸಮರಕ್ಕೆ ಇಳಿದಿದೆ.
ಚುನಾಯಿತ ಮಾಜಿ ಮತ್ತು ಹಾಲಿ ಸಂಸದರು/ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ಹೇಳಿಕೆಯನ್ನು ದಾಖಲಿಸಲು ಪ್ರಕರಣವನ್ನು ಜುಲೈ 27 ರಂದು ನಿಗದಿಪಡಿಸಿದೆ.
ಮೇ 5, 2023 ರಂದು ಪತ್ರಿಕೆಗಳಿಗೆ ಕಾಂಗ್ರೆಸ್ ನೀಡಿದ ಜಾಹೀರಾತಿನ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. “ಬಿಜೆಪಿ ಸರ್ಕಾರವು ಶೇಕಡಾ 40 ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ, ಹಿಂದಿನ ನಾಲ್ಕು ವರ್ಷಗಳಲ್ಲಿ ₹ 1.5 ಲಕ್ಷ ಕೋಟಿ ಲೂಟಿ ಮಾಡಿದೆ” ಎಂದು ಜಾಹೀರಾತು ಪ್ರಕಟಿಸಲಾಗಿತ್ತು.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಪತ್ರಿಕೆಗಳಿಗೆ ನೀಡಿದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ ಜಾಹೀರಾತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಕೂಡ ಚುನಾವಣೆ ಸಂದರ್ಭದಲ್ಲಿ ನೋಟೀಸ್ ಕೂಡ ಜಾರಿ ಮಾಡಿತ್ತು.
“ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ, ಉದ್ಯೋಗ ನೇಮಕಾತಿ ಮತ್ತು ವರ್ಗಾವಣೆಗಳಿಗಾಗಿ ಜನರು ಲಂಚವನ್ನು ನೀಡಬೇಕಾಗಿದೆ” ಎಂದು ಆರೋಪಿಸಿದ್ದ ಕಾಂಗ್ರೆಸ್, “ಯಾವ ಯಾವ ಕೆಲಸಕ್ಕೆ ಎಷ್ಟು ಹಣ ಪಾವತಿಸಬೇಕಾಗಿದೆ” ಎಂಬ ವಿವರಗಳನ್ನು ಪ್ರಕಟಿಸಿತ್ತು.
ಮೇಲ್ನೋಟಕ್ಕೆ ಕಾಂಗ್ರೆಸ್ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು.
ಜಾಹೀರಾತಿನಲ್ಲಿ ಏನಿದೆ?
“ಈ ಟ್ರಬಲ್ ಇಂಜಿನ್ ಸರ್ಕಾರ- ಭ್ರಷ್ಟಾಚಾರದ ರೇಟ್ ಕಾರ್ಡ್ 2019-2023” ಎಂದ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಜಾಹೀರಾತು ಪ್ರಕಟಿಸಿತ್ತು.
“ಸಿಎಂ ಹುದ್ದೆಗೆ 2500 ಕೋಟಿ ರೂ., ಮಂತ್ರಿಗಳ ಹುದ್ದೆಗೆ 500 ಕೋಟಿ ರೂಗಳನ್ನು ಬಿಜೆಪಿ ಪಡೆಯುತ್ತದೆ” ಎಂದು ಆರೋಪಿಸಲಾಗಿತ್ತು.
ನೇಮಕಾತಿ ಮತ್ತು ವರ್ಗಾವಣೆ ದರ
ಕೆಎಸ್ಡಿಎಲ್: 5ರಿಂ 15 ಕೋಟಿ ರೂ.,
ಇಂಜಿನಿಯರ್: 1ರಿಂದ 5 ಕೋಟಿ ರೂ.
ಸಬ್ ರಿಜಿಸ್ಟ್ರಾರ್: 50 ಲಕ್ಷ ರೂ.ಗಳಿಂದ 5 ಕೋಟಿ ರೂ.
ಬೆಸ್ಕಾ: 1 ಕೋಟಿ ರೂ.
ಪಿಎಸ್ಐ: 80 ಲಕ್ಷ ರೂ.
ಸಹಾಯಕ ಪ್ರಾಧ್ಯಾಪಕ: 50 ಲಕ್ಷ – 70 ಲಕ್ಷ ರೂ.
ಉಪನ್ಯಾಸಕ: 30 ಲಕ್ಷ- 50 ಲಕ್ಷ ರೂ.
ಎಫ್ಡಿಎ:30 ಲಕ್ಷ ರೂ.
ಸಹಾಯಕ ಇಂಜಿನಿಯರ್: 30 ಲಕ್ಷ ರೂ.
ಬಮುಲ್- 25 ಲಕ್ಷ ರೂ.
ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ 10 ಲಕ್ಷ ರೂ.
ಪೊಲೀಸ್ ಪೇದೆ 10 ಲಕ್ಷ ರೂ.
***
ಹುದ್ದೆಗಳ ದರ
ಬಿಡಿಎ ಆಯುಕ್ತ : 10 ಕೋಟಿ – 15 ಕೋಟಿ ರೂ.
ಕೆಪಿಎಸ್ಸಿ ಅಧ್ಯಕ್ಷ: 5 ರಿಂದ 15 ಕೋಟಿ ರೂ.
ಡಿಸಿ ಮತ್ತು ಎಸ್ಪಿ: 5 ರಿಂದ 15 ಕೋಟಿ ರೂ.
ಉಪಕುಲಪತಿ: 5 ರಿಂದ 10 ಕೋಟಿ ರೂ.
ಎಸಿ ಮತ್ತು ತಹಸೀಲ್ದಾರ್ 50 ಲಕ್ಷ- 3 ಕೋಟಿ ರೂ.
***
ಸರ್ಕಾರದ ಡೀಲ್ಗಳು
ಕೋವಿಡ್ ಕಿಟ್ ಪೂರೈಕೆ: 75%
ಪಿಡಬ್ಲ್ಯುಡಿ ಗುತ್ತಿಗೆಗಳು: 40 %
ಮಠಕ್ಕೆ ಅನುದಾನ: 30%
ಉಪಕರಣಗಳ ಪೂರೈಕೆ: 40%
ಮೊಟ್ಟೆ ಪೂರೈಕೆ: 30%
ರಸ್ತೆ ಗುತ್ತಿಗೆಗಳು: 40%
-ಹೀಗೆ ಜಾಹೀರಾತಿನಲ್ಲಿ ಆರೋಪಗಳನ್ನು ಕಾಂಗ್ರೆಸ್ ಮಾಡಿತ್ತು. “ಕಳೆದ ನಾಲ್ಕೇ ವರ್ಷಗಳಲ್ಲಿ 40% ಸರ್ಕಾರ ಕನ್ನಡಿಗರಿಂದ 1,50,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಲೂಟಿ ಮಾಡಿದೆ. ಇದೇ ಗತಿಯಲ್ಲಿ ಸಾಗಿದರೆ ನಮ್ಮ ರಾಜ್ಯವೇ ನಾಶವಾಗುತ್ತದೆ. ಈ ಲೂಟಿಯನ್ನು ನಿಲ್ಲಿಸಿ. ಬದಲಾವಣೆ ಹಾಗೂ ಪ್ರಗತಿಗೆ ನಿಮ್ಮ ಮತ ನೀಡಿ. ಕಾಂಗ್ರೆಸ್ಗೆ ಮತ ನೀಡಿ” ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿತ್ತು.