ಕೊರೋನವೈರಸ್ ಸಾಂಕ್ರಾಮಿಕ ರೋಗವು ದೇಶವನ್ನು ಆವರಿಸಿರುವ ಸಮಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಬಾರದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು “ನಾವು ರಾಜ್ಯವಾಗಿ ವೈರಸ್ ವಿರುದ್ಧ ಹೋರಾಡಲು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಈ ನಿರ್ಣಾಯಕ ಸಮಯದಲ್ಲಿ ಕೇಂದ್ರವು ರಾಜಕೀಯವನ್ನು ಮಾಡಬಾರದು. ನಾವು ಅಂತರರಾಷ್ಟ್ರೀಯ ಗಡಿಗಳು ಮತ್ತು ಇತರ ದೊಡ್ಡ ರಾಜ್ಯಗಳಿಂದ ಸುತ್ತುವರೆದಿದ್ದೇವೆ ಮತ್ತು ಅದನ್ನು ಎದುರಿಸಲು ಸಾಕಷ್ಟು ಸವಾಲುಗಳನ್ನು ಹೊಂದಿದ್ದೇವೆ” ಬ್ಯಾನರ್ಜಿ ಹೇಳಿದ್ದಾರೆ.
“ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು. ಫೆಡರಲ್ ರಚನೆಯನ್ನು ಗೌರವಿಸಬೇಕು. ನಾವು ಟೀಮ್ ಇಂಡಿಯಾದಂತೆ ಒಟ್ಟಾಗಿ ಕೆಲಸ ಮಾಡಬೇಕು” ಎಂದು ಅವರು ಹೇಳಿದ್ದಾರೆ.
ಕೇಂದ್ರವು ಇತ್ತೀಚೆಗೆ ತನ್ನ ಕೋವಿಡ್ -19 ನಿರ್ವಹಣೆಯ ಕುರಿತು ಪಶ್ಚಿಮ ಬಂಗಾಳ ಸರ್ಕಾರವನ್ನು ದೂಷಿಸಿತ್ತು. ಇದು ಜನಸಂಖ್ಯೆಗೆ ಅನುಗುಣವಾಗಿ ಕಡಿಮೆ ಪರೀಕ್ಷೆಯ ದರವನ್ನು ಹೊಂದಿದೆ ಮತ್ತು ದೇಶದಲ್ಲಿ ಅತಿ ಹೆಚ್ಚು ಮರಣ ಪ್ರಮಾಣವನ್ನು ಹೊಂದಿದೆ ಎಂದು ಆರೋಪಿಸಲಾಗಿತ್ತು.
ಇದಕ್ಕೆ ಇಂದು ಮಮತಾ ಬ್ಯಾನರ್ಜಿಯವರು ಪ್ರತಿಕ್ರಿಯೆ ನೀಡಿದ್ದು “ಯಾರೂ ನಮ್ಮ ಅಭಿಪ್ರಾಯವನ್ನು ಕೇಳುವುದಿಲ್ಲ” ಎಂದು ದೂರಿದ್ದಾರೆ.
ಇದನ್ನೂ ಓದಿ; ಲಾಕ್ಡೌನ್: ಹಸಿವು, ಅಪಘಾತಗಳಿಂದ ಸಾವಿಗೀಡಾದವರ ಸಂಖ್ಯೆ 383!