ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಮುಖ್ಯಸ್ಥೆ ಯಾಮಿನಿ ಅಯ್ಯರ್ ಅವರು ರಾಜೀನಾಮೆ ನೀಡಿದ್ದು, ಪ್ರಧಾನಿ ಮೋದಿ ಆಡಳಿತವನ್ನು ಟೀಕಿಸಿ ಲೇಖನವನ್ನು ಪ್ರಕಟಿಸಿದ್ದ ಬೆನ್ನಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ.
ನೀತಿ ಸಂಶೋಧನಾ ಕೇಂದ್ರದ ಅಧ್ಯಕ್ಷೆ ಮತ್ತು ವಿದ್ವಾಂಸರಾದ ಯಾಮಿನಿ ಅಯ್ಯರ್ ಅವರು ಮಾ.26ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಾ.23ರಂದು ‘ಯಾಮಿನಿ ಅಯ್ಯರ್ ʼಲೆಮೆಂಟ್ಸ್ ದಿ ಡ್ಯಾಮೇಜ್ ಡನ್ ಟು ಇಂಡಿಯನ್ ಡೆಮಾಕ್ರೆಸಿ ಅಂಡರ್ ನರೇಂದ್ರ ಮೋದಿʼ ಎಂಬ ಲೇಖನವನ್ನು ಬರೆದಿದ್ದಾರೆ. ಲೇಖನದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕೆ ಹಾನಿಯಾಗಿದೆ. ಭಾರತ ತನ್ನ 18ನೇ ಸಾರ್ವತ್ರಿಕ ಚುನಾವಣೆಗೆ ಸಿದ್ಧಗೊಳ್ಳುತ್ತಿದ್ದಂತೆ ದೇಶದ ಮೇಲೆ ಸರ್ವಾಧಿಕಾರದ ಗಾಢ ಛಾಯೆ ಮೂಡುತ್ತಿದೆ ಎಂದು ಯಾಮಿನಿ ಅಯ್ಯರ್ ಉಲ್ಲೇಖಿಸಿದ್ದಾರೆ.
ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಮೂರನೇ ಬಾರಿಗೆ ಗೆದ್ದ ನಂತರ ಅಧಿಕಾರವನ್ನು ಹಿಡಿಯಲು ಸಜ್ಜಾಗಿದೆ. ಆದರೆ ಆಕ್ರಮಣಕಾರಿ, ಹಿಂದೂ-ರಾಷ್ಟ್ರೀಯವಾದಿ ಸಿದ್ಧಾಂತದ ಮೋದಿ ಆಡಳಿತವು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ. ರಾಜಕೀಯ ವಿರೋಧಿಗಳು, ಮಾಧ್ಯಮಗಳು, ಶೈಕ್ಷಣಿಕ ಮತ್ತು ನಾಗರಿಕ ಸಮಾಜವು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶ ವೇಗವಾಗಿ ಕುಗ್ಗುತ್ತಿದೆ ಎಂದು ಅವರು ಹೇಳಿದ್ದರು.
ಯಾಮಿನಿ ಅಯ್ಯರ್ ರಾಜೀನಾಮೆ:
ಲೇಖನವನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನೀತಿ ಸಂಶೋಧನಾ ಕೇಂದ್ರದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರ ಸ್ಥಾನದಿಂದ ಯಾಮಿನಿ ಅಯ್ಯರ್ 31 ಮಾರ್ಚ್ 2024ಕ್ಕೆ ಅನ್ವಯವಾಗುವಂತೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಅವರು ತಮ್ಮ ಸಂಶೋಧನೆಗಳಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಅಯ್ಯರ್ ಅವರು ಶೈಕ್ಷಣಿಕ ಪ್ರಕಟಣೆಗಳು ಮತ್ತು ಜನಪ್ರಿಯ ಪತ್ರಿಕೆಗಳಲ್ಲಿ ಲೇಖನವನ್ನು ನಿಯಮಿತವಾಗಿ ಬರೆಯುತ್ತಿದ್ದರು. ಅವರು ಭಾರತೀಯ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಪ್ರಸ್ತುತ ವ್ಯವಹಾರಗಳು ಮತ್ತು ನೀತಿ ವಿಷಯಗಳ ಬಗ್ಗೆ ನಿಯಮಿತವಾಗಿ ಬರೆಯುತ್ತಿದ್ದರು.
An absolute privilege to have lead & fought for this remarkable institution. CPR's fierce intellectual independence and democratic spirit have enriched me enormously.
Delighted that @CPR_India leadership will now be in the very capable hands of my wonderful colleague Srinivas. https://t.co/MR0xzYonVQ— Yamini Aiyar (@AiyarYamini) March 26, 2024
ಜಲ ಶಕ್ತಿ ಸಂಶೋಧನಾ ಸಚಿವಾಲಯದ ಹಿರಿಯ ಸಂಶೋಧಕ ಶ್ರೀನಿವಾಸ್ ಚೊಕ್ಕಕುಲ ಅವರನ್ನು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಅಧ್ಯಕ್ಷರನ್ನಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಿಸಲಾಗಿದೆ. ಅವರು 2024ರ ಏಪ್ರಿಲ್ 1ರಂದು ಜಾರಿಗೆ ಬರುವಂತೆ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಬರೀ 56 ಇಂಚಿನ ಎದೆ ಇರೋದಲ್ಲ, ಎದೆಯೊಳಗೆ ಹೃದಯ ಇರಬೇಕು: ಮೋದಿ ವಿರುದ್ಧ ಸಿಎಂ ವಾಗ್ದಾಳಿ