ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 2018ರ ಚುನಾವಣೆಯಲ್ಲಿ ಗುಂಡ್ಲುಪೇಟೆಯಲ್ಲಿ ಬಿಜೆಪಿ, ಚಾಮರಾಜನಗರದಲ್ಲಿ ಕಾಂಗ್ರೆಸ್, ಹನೂರಿನಲ್ಲಿ ಕಾಂಗ್ರೆಸ್, ಚಾಮರಾಜನಗರದಲ್ಲಿ ಕಾಂಗ್ರೆಸ್, ಕೊಳ್ಳೇಗಾಲದಲ್ಲಿ ಬಿಎಸ್ಪಿ ಗೆದ್ದಿದ್ದವು.
ಚಾಮರಾಜನಗರ ವಿಧಾನಸಭಾ ಕ್ಷೇತ್ರ
ಪುಟ್ಟರಂಗಶೆಟ್ಟಿ (ಕಾಂಗ್ರೆಸ್)- ಮುನ್ನಡೆ
ವಿ.ಸೋಮಣ್ಣ (ಬಿಜೆಪಿ)- ಹಿನ್ನಡೆ
ಹ.ರ.ಮಹೇಶ್ (ಬಿಎಸ್ಪಿ)- ಹಿನ್ನಡೆ
ಹಿಂದುಳಿದ ವರ್ಗಕ್ಕೆ ಸೇರಿದ ಉಪ್ಪಾರ ಸಮುದಾಯದ ಏಕೈಕ ಶಾಸಕ ಎಂದೇ ಗುರುತಿಸಿಕೊಂಡಿರುವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಈ ಬಾರಿ ನಿಜದ ಸವಾಲು ಎದುರಾಗಿತ್ತು. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ಸಚಿವ ವಿ.ಸೋಮಣ್ಣನವರು ಚಾಮರಾಜನಗರದಲ್ಲೂ ಸ್ಪರ್ಧಿಸಿದ್ದರಿಂದ ಜಾತಿ ಸಮೀಕರಣದ ಲೆಕ್ಕಾಚಾರ ಗರಿಗೆದರಿತ್ತು. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಸಿ.ಪುಟ್ಟರಂಗಶೆಟ್ಟಿಯವರಿಗೆ ಪೈಪೋಟಿ ಏರ್ಪಟ್ಟಿತ್ತು. ದಲಿತ ಮತಗಳು ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ ಹೋರಾಟಗಾರಿ ಹ.ರ.ಮಹೇಶ್ ಬಿಎಸ್ಪಿಯಿಂದ ಸ್ಪರ್ಧಿಸಿದ್ದರು. ಹೀಗಾಗಿ ಬಿಎಸ್ಪಿ ದಲಿತ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದರೆ ಕಾಂಗ್ರೆಸ್ ಸೋಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರಂಭಿಕವಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
***
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ
ಎ.ಆರ್.ಕೃಷ್ಣಮೂರ್ತಿ (ಕಾಂಗ್ರೆಸ್)- ಮುನ್ನಡೆ
ಎನ್.ಮಹೇಶ್ (ಬಿಜೆಪಿ)- ಹಿನ್ನಡೆ
ಬಿ.ಪುಟ್ಟಸ್ವಾಮಿ (ಜೆಡಿಎಸ್)- ಹಿನ್ನಡೆ
2018ರಲ್ಲಿ ಬಿಎಸ್ಪಿಯಿಂದ ಗೆದ್ದು, ನಂತರ ಉಚ್ಚಾಟಿತರಾಗಿ ಬಿಜೆಪಿ ಸೇರಿಕೊಂಡಿರುವ ಎನ್.ಮಹೇಶ್ ಅವರಿಗೆ ಸೈದ್ಧಾಂತಿಕ ವಿರೋಧ ಕ್ಷೇತ್ರದಲ್ಲಿ ವ್ಯಕ್ತವಾಗಿತ್ತು. ಸತತ ಸೋಲುಗಳನ್ನು ಕಂಡಿದ್ದ ಎ.ಆರ್.ಕೃಷ್ಣಮೂರ್ತಿಯವರಿಗೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಮಹೇಶ್ ಅವರ ಸೈದ್ಧಾಂತಿಕ ಬದಲಾವಣೆಯ ಕಾರಣ ದೊಡ್ಡ ಮಟ್ಟದ ದಲಿತರು ಬಿಜೆಪಿಗೆ ಏಟು ನೀಡಿದ್ದಾರೆ. ಎನ್.ಮಹೇಶ್ ಅವರಿಗೆ ಹಿನ್ನಡೆಯಾಗಿದೆ. ಬಿಎಸ್ಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದರು.
***
ಹನೂರು ವಿಧಾನಸಭಾ ಕ್ಷೇತ್ರ
ಎಂ.ಆರ್.ಮಂಜುನಾಥ್ (ಜೆಡಿಎಸ್)- ಮುನ್ನಡೆ
ಆರ್.ನರೇಂದ್ರ (ಕಾಂಗ್ರೆಸ್)- ಹಿನ್ನಡೆ
ಪ್ರೀತನ್ ನಾಗಪ್ಪ (ಬಿಜೆಪಿ)- ಹಿನ್ನಡೆ
ರಾಜೂಗೌಡ ಮತ್ತು ಎಚ್.ನಾಗಪ್ಪ ಕುಟುಂಬವಷ್ಟೇ ದಶಕಗಳ ಕಾಲ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತಾ ಬಂದಿವೆ. ಈಗಲೂ ಅಷ್ಟೇ ಎರಡು ಕುಟುಂಬಗಳ ನಡುವೆಯೇ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಹಂಚಿಕೆಯಾಗಿತ್ತು. ಒಂದು ಕಾಲಕ್ಕೆ ಹನೂರು ವಿಧಾನಸಭಾ ಕ್ಷೇತ್ರವೂ ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಭದ್ರಕೋಟೆಯಾಗಿತ್ತು. ಆದರೆ ನಾಗಪ್ಪನವರು ಕಾಡುಗಳ್ಳ ವೀರಪ್ಪನ್ ಗುಂಡಿಗೆ ಬಲಿಯಾದ ಬಳಿಕ, ಅವರ ಪತ್ನಿ ಪರಿಮಳಾ ನಾಗಪ್ಪ ಸತತವಾಗಿ ಪಕ್ಷ ನಿಷ್ಠೆಯನ್ನು ಬದಲಿಸುತ್ತಾ ಬಂದಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ನಾಗಪ್ಪ ಅವರ ಪುತ್ರ ಪ್ರೀತನ್ ನಾಗಪ್ಪ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಇಲ್ಲಿ ಸೋತಿದ್ದರು. ರಾಜೂಗೌಡರ ಪುತ್ರ ನರೇಂದ್ರ ಹನೂರು ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದರು. ಆದರೆ ಜೆಡಿಎಸ್ಸಿನಲ್ಲಿ ಸಕ್ರಿಯವಾಗಿರುವ, ಕಳೆದ ಚುನಾವಣೆಯಲ್ಲಿ ಸೋತಿಸುವ ರಿಯಲ್ ಎಸ್ಟೇಟ್ ಉದ್ಯಮಿ, ಕುರುಬ ಸಮುದಾಯದ ಎಂ.ಆರ್.ಮಂಜುನಾಥ್ ಅವರನ್ನು ಜೆಡಿಎಸ್ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿಸಿತ್ತು. ಹೀಗಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮಂಜುನಾಥ್ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಎರಡು ಕುಟುಂಬಗಳ ರಾಜಕಾರಣಕ್ಕೆ ಮತದಾರರು ಬೇಸತ್ತಿರುವಂತೆ ಆರಂಭಿಕ ಬೆಳವಣಿಗೆಗಳು ತೋರಿಸಿವೆ.
***
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ
ಗಣೇಶ್ ಪ್ರಸಾದ್ (ಕಾಂಗ್ರೆಸ್)- ಮುನ್ನಡೆ
ಸಿ.ಎಸ್.ನಿರಂಜನಕುಮಾರ್ (ಬಿಜೆಪಿ)- ಹಿನ್ನಡೆ
ಕಡಬೂರು ಮಂಜುನಾಥ್ (ಜೆಡಿಎಸ್)- ಹಿನ್ನಡೆ
ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ವಿರುದ್ಧ ಸತತ ಸೋಲುಗಳನ್ನು ಕಂಡಿದ್ದ ಸಿ.ಎಸ್.ನಿರಂಜನಕುಮಾರ್ 2018ರಲ್ಲಿ ಗೆದ್ದಿದ್ದರು. ಗೀತಾ ಮಹದೇವಪ್ರಸಾದ್ ಸೋತಿದ್ದರು. ಈ ಬಾರಿ ಮಹದೇವ್ ಪ್ರಸಾದ್ ಅವರ ಪುತ್ರ ಗಣೇಶ್ ಪ್ರಸಾದ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
ಬಿಜೆಪಿಯಲ್ಲಿಯೇ ಇದ್ದ ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್, ಕಡಬೂರು ಮಂಜುನಾಥ್ ಅವರು ಕಣದಲ್ಲಿದ್ದದ್ದು ಸಿ.ಎಸ್.ನಿರಂಜನ್ಕುಮಾರ್ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕ್ಷೇತ್ರದಲ್ಲಿ ಸಮಾಜ ಕಾರ್ಯದಲ್ಲಿ ನಿರತರಾಗಿದ್ದ ಗಣೇಶ್ ಪ್ರಸಾದ್ ಗೆಲುವಿನತ್ತ ಮುನ್ನಡೆದಿರುವುದು ತೋರುತ್ತಿದೆ. ಎಂ.ಪಿ.ಸುನೀಲ್ ಪಕ್ಷೇತರರಾಗಿ ಮತ್ತು ಕಡಬೂರು ಮಂಜುನಾಥ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಸಿ.ಎಸ್.ನಿರಂಜನಕುಮಾರ್ ಅವರಿಗೆ ಭಾರಿ ಹೊಡೆತ ನೀಡಿದೆ.