Homeಮುಖಪುಟ'ವಿಶ್ವಾಸ' ಗಳಿಸಿದ ಚಂಪೈ; ಜಾರ್ಖಂಡ್‌ನಲ್ಲಿ 'ರಾಷ್ಟ್ರಪತಿ ಆಳ್ವಿಕೆ' ತಪ್ಪಿಸಿದ್ದೇಗೆ ಹೇಮಂತ್ ಸೊರೇನ್?

‘ವಿಶ್ವಾಸ’ ಗಳಿಸಿದ ಚಂಪೈ; ಜಾರ್ಖಂಡ್‌ನಲ್ಲಿ ‘ರಾಷ್ಟ್ರಪತಿ ಆಳ್ವಿಕೆ’ ತಪ್ಪಿಸಿದ್ದೇಗೆ ಹೇಮಂತ್ ಸೊರೇನ್?

- Advertisement -
- Advertisement -

ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತದ ಮೊದಲು ಹೇಳಿಕೆ ನೀಡಿದ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು, ಹಿಂದಿನ ಮುಖ್ಯಮಂತ್ರಿಯನ್ನು “ಹೇಮಂತ್ ಬಾಬು” ಎಂದು ಉಲ್ಲೇಖಿಸಿದ್ದಾರೆ. ‘ಹೇಮಂತ್ ಸೊರೇನ್ ಭಾಗ 2″ ಎಂದು ಸರ್ಕಾರವನ್ನು ನಡೆಸುವುದಾಗಿ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಆರೋಪದ ನಡುವೆ ರಾಜೀನಾಮೆ ನೀಡುವಂತೆ ಒತ್ತಾಯಿಸಲ್ಪಟ್ಟ ನಂತರ, ಜೈಲು ಪಾಲಾದ ಮಾಜಿ ಮುಖ್ಯಮಂತ್ರಿ ಹೇಮಂತ್, ಹಾಲಿ ಮುಖ್ಯಮಂತ್ರಿಗಿಂತ ಹೆಚ್ಚು ಕಾಲ ಸದನವನ್ನು ಉದ್ದೇಶಿಸಿ ಮಾತನಾಡಿದರು. ಚಂಪೈ ಸೊರೇನ್ ಅವರು ವಿಶ್ವಾಸ ಮತವನ್ನು ಎದುರಿಸುತ್ತಿದ್ದರೆ; ಹೇಮಂತ್ ಸೊರೇನ್ ಅವರು ಅದರ ಉಸ್ತುವಾರಿ ವಹಿಸಿದ್ದ ಚಿತ್ರಣ ಇಂದು ಜಾರ್ಖಂಡ್ ವಿಧಾನಸಭೆಯಲ್ಲಿ ಕಂಡುಬಂತು.

ಜಾರ್ಖಂಡ್ ಮುಕ್ತಿ ಮೋರ್ಚಾದ 48 ವರ್ಷದ ಕಾರ್ಯಾಧ್ಯಕ್ಷ ಹೇಮಂತ್, ತಮ್ಮ ತಂದೆ ಮತ್ತು ಪಕ್ಷದ ಸಂಸ್ಥಾಪಕ ಶಿಬು ಸೊರೇನ್ ಅವರ ನೆರಳಿನಲ್ಲಿ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಳೆದ ವಾರ ಜಾರ್ಖಂಡ್‌ನಲ್ಲಿ ಸರ್ಕಾರವನ್ನು ಉಳಿಸಲು ಸಹಾಯ ಮಾಡಿದ ಚತುರ ರಾಜಕೀಯ ನಡೆಗಳಿಂದ ಅನೇಕರನ್ನು ಆಶ್ಚರ್ಯಗೊಳಿಸಿದ್ದಾರೆ. ಹೇಮಂತ್ ಸೊರೇನ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತಡೆಯಲು ಮತ್ತು ತಮ್ಮ ಆಪ್ತರಿಗೆ ಅಧಿಕಾರವನ್ನು ಸುಗಮವಾಗಿ ಹಸ್ತಾಂತರಿಸುವಲ್ಲಿ ಹೇಗೆ ಯಶಸ್ವಿಯಾದರು ಎಂಬುದರ ಬಗ್ಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕಳೆದ ಸೋಮವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಹೇಮಂತ್ ಸೊರೇನ್ ಅವರ ದೆಹಲಿ ನಿವಾಸಕ್ಕೆ ಆಗಮಿಸಿ ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿತ್ತು. ದಾಳಿ ಸಂದರ್ಭದಲ್ಲಿ, ಸೊರೇನ್ ಪತ್ತೆಯಾಗಿರಲಿಲ್ಲ; ಅವರ ಸಿಬ್ಬಂದಿಗಳಿಗೂ ಅವರ ಇರುವಿಕೆಯ ಬಗ್ಗೆ ಸುಳಿವು ಇರಲಿಲ್ಲ. ಈ ಅವಕಾಶವನ್ನು ತ್ವರಿತವಾಗಿ ಬಳಸಿಕೊಂಡ ಬಿಜೆಪಿಯು, ಮುಖ್ಯಮಂತ್ರಿಯನ್ನು “ಕಾಣೆಯಾಗಿದೆ” ಎಂದು ಘೋಷಿಸಿತು. ಜಾರ್ಖಂಡ್ ರಾಜ್ಯವು ಸಾಂವಿಧಾನಿಕ ಬಿಕ್ಕಟ್ಟಿನ ಮಧ್ಯದಲ್ಲಿದೆ ಎಂದು ಹೇಳಿತು. ಆದರೆ ಪಕ್ಷ ಮಾತ್ರ, ‘ಹೇಮಂತ್ ಸೊರೇನ್ ನಮ್ಮ ಸಂಪರ್ಕದಲ್ಲಿದ್ದಾರೆ, ಅವರು ಜನವರಿ 31 ರಂದು ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುತ್ತಾರೆ’ ಎಂದು ಭರವಸೆ ನೀಡಿದರು. ‘ಹೇಮಂತ್ ಸೊರೇನ್ ದೆಹಲಿ ತಲುಪಿದ ವಿಶೇಷ ವಿಮಾನವು ವಿಮಾನ ಏರ್‌ಪೋರ್ಟಿನಲ್ಲೆ ನಿಂತಿದೆ, ಹೇಮಂತ್ ಸೊರೇನ್ ಎಲ್ಲಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ’ ಎಂದು ಇಡಿ ಅಧಿಕಾರಿಗಳು ಹೇಳಿದರು.

ಜನವರಿ 30ರಂದು ಹೇಮಂತ್ ಸೊರೇನ್ ರಾಂಚಿಯಲ್ಲಿ ಕಾಣಿಸಿಕೊಂಡರು. ಜೆಎಂಎಂ ಮತ್ತು ಕಾಂಗ್ರೆಸ್, ಆರ್‌ಜೆಡಿಯ ಆಡಳಿತ ಒಕ್ಕೂಟದ ಶಾಸಕರನ್ನು ಭೇಟಿಯಾದರು. 1,300 ಕಿಮೀ ದೂರದ ರಸ್ತೆ ಪ್ರಯಾಣದ ಮೂಲಕ ಅವರು ಮಾಧ್ಯಮಗಳು, ಇಡಿ ಮತ್ತು ಟೋಲ್ ಬೂತ್ ಕ್ಯಾಮೆರಾಗಳ ಕಣ್ತಪ್ಪಿಸಿ, ಅವರು ರಾಂಚಿ ತಲುಪುವಲ್ಲಿ ಯಶಸ್ವಿಯಾಗಿದ್ದರು.

ವಾಸ್ತವವಾಗಿ, ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಅವರು ಭಾನುವಾರ ರಾತ್ರಿ ಸೊರೇನ್ ತಮ್ಮ ದೆಹಲಿ ನಿವಾಸದಿಂದ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದರು. ಆದರೆ, ಇಡಿ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ಮಾಡುತ್ತಾರೆ ಮತ್ತು ಸಮಯಕ್ಕೆ ಸರಿಯಾಗಿ ತಲುಪುತ್ತಾರೆ ಎಂದು ಮುಖ್ಯಮಂತ್ರಿಗೆ ಹೇಗೆ ತಿಳಿದಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಹೇಮಂತ್ ಸೊರೇನ್ ಅವರನ್ನು ಬುಧವಾರದವರೆಗೆ ಇಡಿ ಅಧಿಕಾರಿಗಳು ಪ್ರಶ್ನಿಸಿದರು. ಅವರನ್ನು ಬಂಧಿಸಲಾಗುವುದು ಎಂದು ಸ್ಪಷ್ಟವಾದಾಗ, ಅವರು ತಮ್ಮ ಸರ್ಕಾರವನ್ನು ಉಳಿಸುವ ದಿಟ್ಟ ನಡೆಗೆ ಮುಮದಾದರು. ಇಡಿ ಮೂಲಗಳ ಪ್ರಕಾರ, ಹೇಮಂತ್ ಸೊರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಬಂಧನ ಮೆಮೊಗೆ ಸಹಿ ಹಾಕಲು ನಿರಾಕರಿಸಿದ್ದರು ಎನ್ನಲಾಗಿದೆ. ಹಾಲಿ ಮುಖ್ಯಮಂತ್ರಿಯನ್ನು ಬಂಧಿಸಿದರೆ ಸಾಂವಿಧಾನಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ರಾಜೀನಾಮೆ ಸಲ್ಲಿಸಿ, ಶಾಸಕಾಂಗ ಪಕ್ಷದ ಸಭೆ ನಡೆಸಿದ ನಂತರ ಇಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.

ಮೆಮೊಗೆ ಸಹಿ ಹಾಕಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಹೇಮಂತ್ ಸೊರೇನ್ ಅವರನ್ನು ರಾಜ್ಯಪಾಲರ ನಿವಾಸಕ್ಕೆ ಕರೆದೊಯ್ದರು. ಆದರೆ, ಅಲ್ಲಿಗೆ ಹೋದಾಗ ಆಡಳಿತಾರೂಢ ಸಮ್ಮಿಶ್ರ ಪಕ್ಷದ ಉನ್ನತ ಶಾಸಕರು ಅವರ ಜೊತೆಗಿದ್ದರು. ಹೇಮಂತ್ ಸೊರೇನ್ ಕೆಳಗಿಳಿದ ತಕ್ಷಣ, ಚಂಪೈ ಸೊರೇನ್ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.

ಇದಕ್ಕೂ ಮೊದಲು, ಚಂಪೈ ಸೊರೇನ್ ಅವರು ಜೆಎಂಎಂನ ಶಾಸಕಾಂಗ ಪಕ್ಷದ ನಾಯಕರಾಗಿ ಚುನಾಯಿತರಾಗಿದ್ದರು. ಹೇಮಂತ್ ಸೊರೇನ್ ಅವರು ತಮ್ಮ ಪತ್ನಿ ಕಲ್ಪನಾ ಅವರಿಗೆ ಅಧಿಕಾರ ನೀಡಬಹುದು ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಿದರು. ವಾಸ್ತವವಾಗಿ ಕಲ್ಪನಾ ಸೊರೇನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವುದಕ್ಕೆ ಸೊರೇನ್ ಕುಟುಂಬದಿಂದಲೇ ವಿರೋಧ ವ್ಯಕ್ತವಾಗಿತ್ತು ಎಂದು ಹೇಮಂತ್ ಸೊರೇನ್ ಅವರ ಸೊಸೆ, ಜಾಮಾದ ಜೆಎಂಎಂ ಶಾಸಕಿ ಸೀತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಲ್ಪನಾ ಸೊರೇನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಯಾವುದೇ ಕ್ರಮವನ್ನು ನಾನು ವಿರೋಧಿಸುತ್ತೇನೆ. ಏಕೆಂದರೆ, ಅವರಿಗೆ ರಾಜಕೀಯದ ಅನುಭವವಿಲ್ಲ ಎಂದಿದ್ದರು. ಪಕ್ಷದ ನಾಯಕತ್ವವು ಈ ನಿರ್ಣಾಯಕ ಹಂತದಲ್ಲಿ ಬಿರುಕು ಉಂಟುಮಾಡುವ ಯಾವುದೇ ಮನಸ್ಥಿತಿಯಿಲ್ಲದೆ, ಸುರಕ್ಷಿತ ಆಯ್ಕೆಯತ್ತ ಹೋಯಿತು. ಅಂತಿಮವಾಗಿ ಶಿಬು ಸೊರೇನ್ ಅವರ ದೀರ್ಘಾವಧಿಯ ಸಹಾಯಕ, 67 ವರ್ಷದ ಚಂಪೈ ಸೊರೇನ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಹೇಮಂತ್ ಸೊರೇನ್ ಅವರು ಜನವರಿ 31 ರಂದು ಅಧಿಕಾರದಿಂದ ಕೆಳಗಿಳಿದ ಕೂಡಲೇ ಚಂಪೈ ಸೊರೇನ್ ಅವರು ಹಕ್ಕು ಚಲಾಯಿಸಿದ್ದರೂ ಸಹ, ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಜಾರ್ಖಂಡ್‌ನಲ್ಲಿ ಸರ್ಕಾರ ರಚನೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಜೆಎಂಎಂ ಮತ್ತು ಕಾಂಗ್ರೆಸ್ ಆರೋಪಿಸಿದೆ. ಫೆಬ್ರವರಿ 1 ರಂದು ಚಂಪೈ ಸೊರೇನ್ ಅವರು ರಾಜ್ಯಪಾಲರಿಗೆ ಪತ್ರ ಬರೆದು, ಕಳೆದ 18 ಗಂಟೆಗಳ ಕಾಲದಿಂದ  ಜಾರ್ಖಂಡ್ ರಾಜ್ಯದಲ್ಲಿ ಸರ್ಕಾರವಿಲ್ಲ; ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಅದೇ ದಿನ, ಅವರು ಮತ್ತು ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟದ ಇತರ ನಾಯಕರು ರಾಜ್ಯಪಾಲರನ್ನು ಭೇಟಿಯಾದರು. ವಾಸ್ತವವಾಗಿ, ಚಂಪೈ ಸೊರೇನ್ ಅವರನ್ನು ಬೆಂಬಲಿಸುವ ಶಾಸಕರು ಸಹಿ ಸಂಗ್ರಹಿಸಿ, ತಮ್ಮ ಬೆಂಬ ರೆಕಾರ್ಡ್ ಮಾಡಿ ಬಹುಮತದ ಪುರಾವೆಯಾಗಿ ರಾಜ್ಯಪಾಲರಿಗೆ ತೋರಿಸಿದರು.

ಮರುದಿನ, ಚಂಪೈ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ, ಮೈತ್ರಿ ಪಕ್ಷಗಳ ಇಬ್ಬರು ಶಾಸಕರಾದ ಕಾಂಗ್ರೆಸ್‌ನ ಅಲಂಗೀರ್ ಆಲಂ ಮತ್ತು ಆರ್‌ಜೆಡಿಯ ಸತ್ಯಾನಂದ್ ಭೋಕ್ತಾ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಚಂಪೈ ಸೊರೇನ್ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ನಿಜವಾದ ಯುದ್ಧ ಇಂದು ವಿಶ್ವಾಸಮತ ಗಳಿಸುವ ಪರೀಕ್ಷೆಯಾಗಿತ್ತು. ಚಂಪೈ ಸೊರೇನ್ ಮತ್ತು ಅವರ ಇಬ್ಬರು ಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಆಡಳಿತಾರೂಢ ಸಮ್ಮಿಶ್ರ ಶಾಸಕರನ್ನು ಹೈದರಾಬಾದ್‌ಗೆ ವಿಮಾನದಲ್ಲಿ ಕಳುಹಿಸಲಾಗಿತ್ತು. ನಿರ್ಣಾಯಕ ಬಹುಮತ ಯಾಚನೆಗೆ ಮುನ್ನ ಬಿಜೆಪಿಯಿಂದ ಯಾವುದೇ ಕಳ್ಳಬೇಟೆಯ ಪ್ರಯತ್ನವನ್ನು ತಡೆಯಲು ಅವರನ್ನು ಹೈದರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. ಈ ಮಧ್ಯೆ, ಹೇಮಂತ್ ಸೊರೇನ್ ಅವರು ಬಹುಮತಕ್ಕೆ ಹಾಜರಾಗಲು ಅನುಮತಿಗಾಗಿ ನ್ಯಾಯಾಲಯದಲ್ಲಿ ವಿನಂತಿಯನ್ನು ಸಲ್ಲಿಸಿದರು. ಜೆಎಂಎಂ ನಾಯಕತ್ವವು ಲೋಬಿನ್ ಹೆಂಬ್ರೋಮ್‌ನಂತಹ ಅಸಮಾಧಾನಗೊಂಡ ಶಾಸಕರನ್ನು ಸಮಾಧಾನಪಡಿಸಲು ಪ್ರಾರಂಭಿಸಿತು.

ಬಲ ಪರೀಕ್ಷೆಗೆ ಮುಂಚಿತವಾಗಿಯೆ, ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದ ಶಾಸಕರನ್ನು ರಾಂಚಿಗೆ ಹಿಂತಿರುಗಿಸಲಾಯಿತು. ಹೇಮಂತ್ ಸೊರೇನ್ ಕೂಡ ಸಮಯಕ್ಕೆ ಸರಿಯಾಗಿ ವಿಧಾನಸಭೆ ತಲುಪಿದರು. ಇದರ ಪರಿಣಾಮವಾಗಿ ಚಂಪೈ ಸೊರೇನ್ ಅವರ ಪರವಾಗಿ 47 ಮತಗಳೊಂದಿಗೆ ವಿಶ್ವಾಸ ಮತವನ್ನು ತೆರವುಗೊಳಿಸಿದರು. ಅವರ ವಿರುದ್ಧ ಇಪ್ಪತ್ತೊಂಬತ್ತು ಮತಗಳು ಚಲಾವಣೆಯಾದವು.

ಇದನ್ನೂ ಓದಿ; ‘ನಾನು ಕಣ್ಣೀರು ಸುರಿಸುವುದಿಲ್ಲ, ಆದಿವಾಸಿಗಳು, ಒಬಿಸಿಗಳ ಕಣ್ಣೀರಿಗೆ ಬೆಲೆಯಿಲ್ಲ’: ಹೇಮಂತ್‌ ಸೊರೆನ್‌ ಭಾವುಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...