ಚೆನ್ನೈನ ಕಲಾಕ್ಷೇತ್ರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ರುಕ್ಮಿಣಿ ದೇವಿ ಫೈನ್ ಆರ್ಟ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯೊಬ್ಬರು ನೀಡಿದ ಲೈಂಗಿಕ ಕಿರುಕುಳದ ದೂರಿನ ಆಧಾರದ ಮೇಲೆ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಮಾರ್ಚ್ 31ರಂದು, ಕಲಾಕ್ಷೇತ್ರ ಕಾಲೇಜ್ನ ಸಹಾಯಕ ಪ್ರಾಧ್ಯಾಪಕ ಹರಿ ಪದ್ಮನ್ ವಿರುದ್ಧ ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ), 509 (ಪದಗಳು, ಸನ್ನೆಗಳು ಅಥವಾ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿದ ಕೃತ್ಯಗಳು) ಮತ್ತು ತಮಿಳುನಾಡು ಮಹಿಳೆಯರಿಗೆ ಕಿರುಕುಳದ ನಿಷೇಧದ ನಿಬಂಧನೆಗಳ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
”ಹೈದರಾಬಾದ್ನ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ಪದ್ಮನ್ ಅವರು ಹಿಂದಿರುಗಿದ ನಂತರ ತಲೆಮರೆಸಿಕೊಂಡಿದ್ದರು. ಪ್ರಯಾಣದ ಸಮಯದಲ್ಲಿ ಅವರು ತಮ್ಮ ಮೊಬೈಲ್ ಫೋನ್ನ್ನು ಏರ್ಪ್ಲೇನ್ ಮೋಡ್ನಲ್ಲಿ ಇರಿಸಿದ್ದರು ಆದರೆ ಭಾನುವಾರ ಬೆಳಿಗ್ಗೆ ಅವರು ಚೆನ್ನೈಗೆ ಹಿಂದಿರುಗಿದ ನಂತರ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಲು ಫೋನ್ ಆನ್ ಮಾಡಿದ್ದರು. ಈ ಕರೆ ಅವರ ಇರುವಿಕೆಯ ಪತ್ತೆಗೆ ಸಹಾಯ ಮಾಡಿದೆ. ಬಂಧಿತ ಸಹಾಯಕ ಪ್ರಾಧ್ಯಾಪಕರನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಪೊಲೀಸರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಚೆನ್ನೈ: ಕಲಾಕ್ಷೇತ್ರ ಕಾಲೇಜಿನ ಪ್ರಾಧ್ಯಾಪಕನ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲು
”ಹರಿ ಪದ್ಮನ್ ನೀಡುತ್ತಿದ್ದ ಲೈಂಗಿಕ ಕಿರುಕುಳ ಹಾಗೂ ಅವರ ನಿಂದನೆಯಿಂದಾಗಿ ಕೆಲವು ವರ್ಷಗಳ ಹಿಂದೆ ಕಲಾಕ್ಷೇತ್ರ ಫೌಂಡೇಶನ್ನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮದಿಂದ ಹೊರಗುಳಿದಿದ್ದೆ” ಎಂದು ದೂರು ದಾಖಲಿಸಿದ ವಿದ್ಯಾರ್ಥಿನಿ ಎನ್ಡಿಟಿವಿಗೆ ತಿಳಿಸಿದ್ದಾರೆ.
”ಅವರು ಒಮ್ಮೆ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರು. ಯಾರಿಗೂ ತಿಳಿಯುವುದಿಲ್ಲ, ಮನೆಗೆ ಬಾ ಎಂದು ನನ್ನನ್ನು ಕರೆದಿದ್ದರು” ಎಂದು ದೂರುದಾರರು ಹೇಳಿದ್ದಾರೆ.
”ಅವರ ಆ ಬೇಡಿಕೆಗೆ ನಾನು ಒಪ್ಪದಿದ್ದಾಗ ಅದರ ಪ್ರತೀಕಾರದ ಕ್ರಮವಾಗಿ, ಪ್ರಮುಖ ನೃತ್ಯ ಪಾತ್ರದಿಂದ ನನ್ನನ್ನು ತೆಗೆದುಹಾಕಲಾಯಿತು” ಎಂದು ಆ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ಸುಮಾರು 250 ವಿದ್ಯಾರ್ಥಿಗಳು ಮಾರ್ಚ್ 30ರಿಂದ ಪ್ರತಿಭಟನೆ ನಡೆಸುತ್ತಿದ್ದು, ಅನುಚಿತ ವರ್ತನೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಹರಿ ಸಹಾಯಕ ಪ್ರಾಧ್ಯಾಪಕ ಹರಿ ಪದ್ಮನ್ ಹಾಗೂ ಸಂಜಿತ್ ಲಾಲ್, ಸಾಯಿ ಕೃಷ್ಣನ್ ಮತ್ತು ಶ್ರೀನಾಥ್ ಎಂಬ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆಗೆ ದೂರು ನೀಡಿದ್ದರು.
Unprecedented protests in Kalakshetra #thisisreal #justice pic.twitter.com/D9NRUeeXIx
— Nrithya (@nrithyapillai) March 30, 2023
”ನಾನು ಕಲಾಕ್ಷೇತ್ರ ಫೌಂಡೇಶನ್ನ ಕ್ಯಾಂಪಸ್ನಲ್ಲಿ ಐದು ಗಂಟೆಗಳ ವಿಚಾರಣೆ ನಡೆಸಿದಾಗ ಲೈಂಗಿಕ ಕಿರುಕುಳ ಮತ್ತು ಕಿರುಕುಳದ 90 ದೂರುಗಳು ವಿದ್ಯಾರ್ಥಿಗಳಿಂದ ಸ್ವೀಕರಿಸಿದ್ದಾರೆ” ಎಂದು ಶುಕ್ರವಾರ ತಮಿಳುನಾಡು ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಎಆರ್ ಕುಮಾರಿ ಅವರು ತಿಳಿಸಿದ್ದಾರೆ.
”ದೂರುಗಳಲ್ಲಿ ಹುಡುಗಿಯರು ಮತ್ತು ಹುಡುಗರ ಲೈಂಗಿಕ ದೌರ್ಜನ್ಯವೂ ಸೇರಿದೆ. ನಾನು ಜೂಮ್ ಆ್ಯಪ್ ಮೂಲಕ ಆರು ವಿದ್ಯಾರ್ಥಿಗಳನ್ನು ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳನ್ನು ಮಾತನಾಡಿಸಿ, ಎಲ್ಲರಲ್ಲೂ ಆತ್ಮವಿಶ್ವಾಸದಿಂದ ಇರಬೇಕು ಎಂದು ಹೇಳಿದ್ದೇನೆ. ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇನೆ” ಎಂದು ಕುಮಾರಿ ಅವರು ಹೇಳಿದರು.
ತನಿಖೆಯ ಸಮಯದಲ್ಲಿ ಆರೋಪಿ ಸಿಬ್ಬಂದಿ ವಿರುದ್ಧ ಆರೋಪ ದೃಢಪಟ್ಟರೆ ಸರ್ಕಾರವು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.