ಚೆನ್ನೈನ ಕಲಾಕ್ಷೇತ್ರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ರುಕ್ಮಿಣಿ ದೇವಿ ಫೈನ್ ಆರ್ಟ್ಸ್ ಕಾಲೇಜಿನ ಬೋಧಕ ಸಿಬ್ಬಂದಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ನಂತರ ಸಹಾಯಕ ಪ್ರಾಧ್ಯಾಪಕ ಹರಿಪದ್ಮನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಸ್ಥೆಯ ಮಾಜಿ ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕ ಮತ್ತು ಮೂವರು ಸಿಬ್ಬಂದಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಸಂಸ್ಥೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸಂಸ್ಥೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಸದ್ಯ ಏಪ್ರಿಲ್ 6ರವರೆಗೂ ಕಾಲೇಜು ಅನ್ನು ಮುಚ್ಚಲಾಗಿದೆ.
ಹರಿಪದ್ಮನ್, ಸಂಜಿತ್ ಲಾಲ್, ಸಾಯಿ ಕೃಷ್ಣನ್ ಮತ್ತು ಶ್ರೀನಾಥ್ ಎಂಬ ಸಿಬ್ಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸುಮಾರು 90 ವಿದ್ಯಾರ್ಥಿಗಳು ಮಾರ್ಚ್ 31ರಂದು ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆಗೆ ದೂರು ನೀಡಿದ್ದರು.
Unprecedented protests in Kalakshetra #thisisreal #justice pic.twitter.com/D9NRUeeXIx
— Nrithya (@nrithyapillai) March 30, 2023
“ನಾವು ಹಲವು ವರ್ಷಗಳಿಂದ ಕಲಾಕ್ಷೇತ್ರ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ, ನಿಂದನೆ ಮತ್ತು ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯ ಅನುಭವಿಸುತ್ತಿದ್ದೇವೆ. ಆದರೆ ಈ ಬಗ್ಗೆ ದೂರು ನೀಡಿದರೆ ಸಂಸ್ಥೆಯು ಅಸಡ್ಡೆ ಹಾಗೂ ನಿರ್ಲಕ್ಷ್ಯ ಧೋರಣೆ ತಾಳಿದೆ. ಕ್ರಮ ಕೈಗೊಳ್ಳದ ನಿರ್ದೇಶಕಿ ರೇವತಿ ರಾಮಚಂದ್ರನ್ ಅವರನ್ನು ವಜಾಗೊಳಿಸಿ ಆಂತರಿಕ ದೂರು ಸಮಿತಿ ಪುನರ್ರಚಿಸಬೇಕು” ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಪತ್ರವನ್ನು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ಗೂ ಕೂಡ ಕಳಿಸಲಾಗಿತ್ತು.
ತಮಿಳುನಾಡು ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ಎ.ಆರ್ ಕುಮಾರಿ ಅವರು ಕ್ಯಾಂಪಸ್ನಲ್ಲಿ ಐದು ಗಂಟೆಗಳ ವಿಚಾರಣೆಯ ನಂತರ ಕಲಾಕ್ಷೇತ್ರ ಫೌಂಡೇಶನ್ನಲ್ಲಿ ವಿದ್ಯಾರ್ಥಿನಿರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ 90 ದೂರುಗಳನ್ನು ಸ್ವೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ರವರು ಈ ಕುರಿತು ಸಮರ್ಪಕ ತನಿಖೆ ನಡೆಸುವುದಾಗಿ ಮತ್ತು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಆರೋಪಿ ಅಧ್ಯಾಪಕನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಆಗ್ರಹಿಸಿ ಕಾಲೇಜಿನ ಆವರಣದಲ್ಲಿರುವ ಆಲದ ಮರದ ಕೆಳಗೆ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆಯಿಂದ ಮೌನ ಪ್ರತಿಭಟನೆ ನಡೆಸಿದರು. ಸಂಜೆಯ ನಂತರ ಕಾಲೇಜಿನಿಂದ ತಿರುವನ್ಮಯೂರ್ ರಸ್ತೆಯವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇದನ್ನೂ ಓದಿ; ಬೆಂಗಳೂರಿನಲ್ಲಿ ನಾಲ್ವರು ಕಾಮುಕರಿಂದ ಯುವತಿಯ ಮೇಲೆ ಗ್ಯಾಂಗ್ ರೇಪ್; ಆರೋಪಿಗಳ ಬಂಧನ