Homeಕರ್ನಾಟಕಒಪಿಎಸ್ ಜಾರಿಗೆ ಛತ್ತೀಸ್‌ಗಡ ಕಾಂಗ್ರೆಸ್‌ ಗೌರ್ಮೆಂಟ್ ನಿರ್ಧಾರ; ರಾಜ್ಯದಲ್ಲಿ ಎಚ್ಚೆತ್ತುಕೊಳ್ಳುವುದೇ ಬಿಜೆಪಿ ಸರ್ಕಾರ?

ಒಪಿಎಸ್ ಜಾರಿಗೆ ಛತ್ತೀಸ್‌ಗಡ ಕಾಂಗ್ರೆಸ್‌ ಗೌರ್ಮೆಂಟ್ ನಿರ್ಧಾರ; ರಾಜ್ಯದಲ್ಲಿ ಎಚ್ಚೆತ್ತುಕೊಳ್ಳುವುದೇ ಬಿಜೆಪಿ ಸರ್ಕಾರ?

- Advertisement -
- Advertisement -

ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಅಥವಾ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶ ಛತ್ತೀಸ್‌ಗಡ ಸರ್ಕಾರಿ ನೌಕರರಿಗೆ ದೊರೆತಿದೆ.

ಏಪ್ರಿಲ್ 1, 2022ರ ನಂತರ ಸರ್ಕಾರಿ ಸೇವೆಗೆ ಸೇರಿದವರು ಹಳೆಯ ಪಿಂಚಣಿ ಯೋಜನೆಯ ಭಾಗವಾಗಿರುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

“ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನವೆಂಬರ್ 1, 2004ರ ನಂತರ ಮತ್ತು ಏಪ್ರಿಲ್ 2022ರ ಮೊದಲು ನೇಮಕಗೊಂಡ ನೌಕರರಿಗೆ ಆಯ್ಕೆಯನ್ನು ನೀಡುವ ಮೂಲಕ ಒಪಿಎಸ್ ಅನ್ನು ಪರಿಚಯಿಸಲು ಕ್ಯಾಬಿನೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ” ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರಿ ನೌಕರರನ್ನು ಏಪ್ರಿಲ್ 1, 2022ರಿಂದ ಛತ್ತೀಸ್‌ಗಢದ ಸಾಮಾನ್ಯ ಭವಿಷ್ಯ ನಿಧಿಯ ಸದಸ್ಯರನ್ನಾಗಿ ಪರಿಗಣಿಸಲಾಗುತ್ತದೆ. ನವೆಂಬರ್ 1, 2004ರಿಂದ ಅಥವಾ ಅದರ ನಂತರ ಮಾರ್ಚ್ 31, 2022ರವರೆಗೆ ಎನ್‌ಪಿಎಸ್ ಖಾತೆಯಲ್ಲಿ ಠೇವಣಿ ಮಾಡಿದ ಉದ್ಯೋಗಿಯ ಕೊಡುಗೆಯನ್ನು ಹಾಗೂ ಅದರಿಂದ ಗಳಿಸಿದ ಲಾಭಾಂಶವನ್ನು ಪರಿಗಣಿಸಲಾಗುತ್ತದೆ. ಎನ್‌ಪಿಎಸ್‌ ನಿಯಮಗಳ ಅಡಿಯಲ್ಲಿ ಸರ್ಕಾರಿ ಉದ್ಯೋಗಿಗೆ ಪಾವತಿಸಲಾಗುವುದು.

ರಾಜ್ಯ ಸರ್ಕಾರದ ಕೊಡುಗೆ ಮತ್ತು ಅದರಿಂದ ಗಳಿಸಿದ ಲಾಭಾಂಶವನ್ನು ಠೇವಣಿ ಮಾಡಿದ ನಂತರವೇ ನೌಕರರು ಹಳೆಯ ಪಿಂಚಣಿ ಯೋಜನೆಗೆ ಅರ್ಹರಾಗುತ್ತಾರೆ.

ಸರ್ಕಾರಿ ನೌಕರರು ಎನ್‌ಪಿಎಸ್ ಅಡಿಯಲ್ಲಿ ಮುಂದುವರಿಯುವ ಅಥವಾ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನವನ್ನು ನೋಟರೈಸ್ ಮಾಡಿದ ಅಫಿಡವಿಟ್‌ನಲ್ಲಿ ಪಡೆಯುವ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಈ ಆಯ್ಕೆಯು ಅಂತಿಮವಾಗಿದ್ದು ಬದಲಾಯಿಸಲು ಸಾಧ್ಯವಿಲ್ಲ.

ಈ ವರ್ಷದ ಆರಂಭದಲ್ಲಿ ನಡೆದ ಅಸೆಂಬ್ಲಿಯ ಬಜೆಟ್ ಅಧಿವೇಶನದಲ್ಲಿ ಬಘೆಲ್ ಅವರು, “ತಮ್ಮ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲಿದೆ” ಎಂದು ಘೋಷಿಸಿದ್ದರು.

ರಾಜ್ಯದಲ್ಲಿ ಹೋರಾಟಕ್ಕೆ ಗೆಲುವು ದೊರಕುವುದೇ?

ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಒಪಿಎಸ್ ಜಾರಿಗೆ ಕ್ರಮ ಜರುಗಿಸಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಚುನಾವಣೆಗೂ ಮುನ್ನ ‘ವೋಟ್ ಫಾರ್‌ ಒಪಿಎಸ್’ ಅಭಿಯಾನವನ್ನು ಸರ್ಕಾರಿ ನೌಕರರು ನಡೆಸಿದ್ದರು. ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಂದಿನ ದಿನಗಳಲ್ಲಿ ಛತ್ತೀಸ್‌ಗಡದಂತೆಯೇ ಹಿಮಾಚಲ ಪ್ರದೇಶದಲ್ಲೂ ಒಪಿಎಸ್ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ನೌಕರರು ಭಾವಿಸಿದ್ದಾರೆ.

“ವೋಟ್ ಫಾರ್‌ ಒಪಿಎಸ್ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಒಪಿಎಸ್ ಜಾರಿಗೊಳಿಸಿದವರಿಗೆ ನೌಕರರು ಮತ ನೀಡಲಿದ್ದಾರೆ. ಹೀಗಾಗಿ ಕರ್ನಾಟಕದಲ್ಲೂ ಒಪಿಎಸ್ ಜಾರಿಗೆ ತರಲು ಸರ್ಕಾರ ಮುಂದಾಗಬೇಕು” ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಒತ್ತಾಯಿಸುತ್ತಿದೆ.

ಎನ್‌ಪಿಎಸ್ ಆತಂಕಕಾರಿ ಏಕೆ?

’ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ’ದ ವತಿಯಿಂದ 2016ರಲ್ಲಿ ಬಿಡುಗಡೆ ಮಾಡಲಾಗಿರುವ ’ನಿಶ್ಚಿತ ಪಿಂಚಣಿ ನಮ್ಮ ಹಕ್ಕು’ ಕೈಪಿಡಿಯಲ್ಲಿ ದಿವಂಗತ ಎಸ್.ಪ್ರಸನ್ನಕುಮಾರ್ ಅವರು ಎನ್‌ಪಿಎಸ್‌ನ ಅವಾಂತರಗಳ ಕುರಿತು ವಿವರಿಸಿದ್ದಾರೆ. ಎನ್‌ಪಿಎಸ್ ತಳಹದಿಯಾಗಿರುವ ಮೂರು ಅಂಶಗಳ ಕುರಿತು ಬೆಳಕು ಚೆಲ್ಲಿ ಸರ್ಕಾರಿ ನೌಕರರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಒಂದನೇ ಅಂಶ- ಪಿಂಚಣಿ ವಿಚಾರದಲ್ಲಿ ನಿಗದಿತ ಫಲ ಅಥವಾ ಲಾಭದ ಬದಲು ’ನಿಗದಿತ ಕೊಡುಗೆ’ ವ್ಯವಸ್ಥೆ: ನಿಗದಿತ ಫಲವೆಂದರೆ ಈಗಾಗಲೇ ಇರುವ ಪಿಂಚಣಿ ವ್ಯವಸ್ಥೆಯಾಗಿದೆ. ಒಂದು ನಿರ್ದಿಷ್ಟ ಕಾಲದವರೆಗೆ ಸೇವೆ ಸಲ್ಲಿಸಿ ನಿವೃತ್ತಿಯಾದಾಗ, ಸಲ್ಲಿಸಿದ ಸೇವೆಯ ವರ್ಷಗಳ ಆಧಾರದಲ್ಲಿ ಪಿಂಚಣಿ ನಿಗದಿಪಡಿಸಲಾಗುತ್ತಿತ್ತು. ಯಾವುದೇ ನೌಕರರಿಗೆ ನಿವೃತ್ತಿ ವೇತನ ಎಷ್ಟು ಸಿಗಬೇಕೆಂಬುದು ಸೇವೆಗೆ ಸೇರಿದ್ದಾಗಲೇ ಸೇವಾ ನಿಯಮಗಳ ಪ್ರಕಾರ ನಿಗದಿಯಾಗುತ್ತದೆ. ಆದರೆ ಎನ್‌ಪಿಎಸ್ ಮೂಲಕ ಅದನ್ನೀಗ ’ನಿಗದಿತ ಕೊಡುಗೆ’ ಪಿಂಚಣಿ ವಿಧಾನವನ್ನಾಗಿ ಬದಲಿಸಲಾಗಿದೆ. ಪ್ರತಿ ನೌಕರನ ಸಂಬಳದ ನಿಗದಿತ ಮೊತ್ತದಲ್ಲಿ ಪ್ರತಿ ತಿಂಗಳು ಶೇ. 10ರಷ್ಟು ಕಡಿತ ಮಾಡಿ ’ಪಿಂಚಣಿ ನಿಧಿ’ಗೆ ಜಮಾ ಮಾಡಲಾಗುತ್ತದೆ. ಪಿಂಚಣಿ ನಿಧಿಗೆ ನೌಕರನು ನಿರ್ದಿಷ್ಟ ಕೊಡುಗೆ ನೀಡಬೇಕಾಗುತ್ತದೆ. ಆದರೆ ಪಿಂಚಣಿ ಎಷ್ಟು ದೊರೆಯುತ್ತದೆ, ಎಷ್ಟು ವರ್ಷದ ಸೇವೆಗೆ ಎಷ್ಟು ನೀಡಲಾಗುತ್ತದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಿಖರ ಉತ್ತರವಿಲ್ಲ. ಅಂದರೆ ನೌಕರರ ಪಿಂಚಣಿ ಕಡಿತ ಮಾಡುವ ಜವಾಬ್ದಾರಿ ಹೊತ್ತ ಸಂಸ್ಥೆಗಳು ತಮ್ಮ ಲಾಭ ನಷ್ಟಕ್ಕೆ ಅನುಗುಣವಾಗಿ ಪಿಂಚಣಿ ಮೊತ್ತವನ್ನು ನಿಗದಿಪಡಿಸುತ್ತವೆ.

ಎರಡನೇ ಅಂಶ- ಸಾಮಾಜಿಕ ಸಹಾಯದ ಬದಲಾಗಿ ವಿಮಾ ಪದ್ಧತಿ: ಸಾಮಾಜಿಕ ಸಹಾಯವೆಂಬುದು ಸರ್ಕಾರ ಜವಾಬ್ದಾರಿಯಾಗಿತ್ತು. ಆದರೆ ಈಗ ನೌಕರರೇ ತಮ್ಮ ಉಳಿತಾಯದ ಮೂಲಕ ಭವಿಷ್ಯವನ್ನು ಭದ್ರತೆ ಮಾಡಿಕೊಳ್ಳಬೇಕು ಎಂಬುದನ್ನು ’ವಿಮೆ’ಯ ಪ್ರಸ್ತಾಪ ಹೇಳುತ್ತದೆ. ಸಮಾಜದ ಎಲ್ಲ ಜನರ ಕೊಡುಗೆಯಿಂದಿರುವ ಸರ್ಕಾರದ ಖಜಾನೆಯಿಂದ ಶ್ರೀಮಂತ ಬಂಡವಾಳಗಾರರಿಗೆ ರಿಯಾಯಿತಿಗಳನ್ನು ನೀಡಲು ಖರ್ಚು ಮಾಡಬಹುದೇ ಹೊರತು ಜನಸಾಮಾನ್ಯರಿಗೆ, ನೌಕರರಿಗೆ ಸರ್ಕಾರದ ಖಜಾನೆಯಿಂದ ಏನು ಸಹಾಯ ಮಾಡಬಾರದು ಎಂಬುದು ಈ ಅಂಶದ ತಿರುಳಾಗಿದೆ.

ಮೂರನೇ ಅಂಶ- ’ಹೂಡಿಕೆ’ಗಳನ್ನು ಸಂಸ್ಥೆಗಳಿಗೆ ’ಸಾಲ’ದ ಸ್ವರೂಪದ ಬದಲಾಗಿ ಷೇರು ಬಂಡವಾಳ ಪದ್ಧತಿಯಲ್ಲಿ ನೀಡುವುದು: ಇಲ್ಲಿ ನೌಕರರ ಉಳಿತಾಯದ ಹಣವನ್ನೇ ಪೂರ್ಣ ವಂಚಿಸುವ ಹುನ್ನಾರವಿದೆ. ನೌಕರರ ಉಳಿತಾಯವನ್ನು ಸಾಲದ ರೂಪದಲ್ಲಿ ಹೂಡಿಕೆ ಮಾಡುವುದಕ್ಕೂ ಷೇರುಗಳಾಗಿ ಬಳಸುವುದಕ್ಕೂ ವ್ಯತ್ಯಾಸವಿದೆ. ಸಾಲವೆಂದು ಪರಿಗಣಿಸಿದಾಗ ಬಡ್ಡಿಯನ್ನು ನೀಡಲಾಗುತ್ತದೆ. ಅದಕ್ಕೆ ಬದಲಾಗಿ ಕಂಪನಿಯ ಷೇರು ಬಂಡವಾಳವಾಗಿ ಪರಿಗಣಿಸಿದರೆ ಕಂಪನಿಗೆ ಲಾಭ ಬಂದರೆ ಡಿವಿಡೆಂಡ್ ನೀಡಲಾಗುತ್ತದೆ. ನಷ್ಟವಾದರೆ ಇಡೀ ಉಳಿತಾಯವೇ ಇಲ್ಲವಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...