14 ರಿಂದ 16 ವರ್ಷ ವಯಸ್ಸಿನೊಳಗೆ ಹುಡುಗಿಯರಿಗೆ ಮದುವೆ ಮಾಡುತ್ತಿದ್ದರು ಮತ್ತು 17 ವರ್ಷ ವಯಸ್ಸಿನೊಳಗೆ ಕನಿಷ್ಠ ಒಂದು ಮಗುವಿಗೆ ಜನ್ಮ ನೀಡುವುದು ಸಾಮಾನ್ಯವಾಗಿತ್ತು ಎಂದು ಗುಜರಾತ್ ಹೈಕೋರ್ಟ್ ಬುಧವಾರ ಮನುಸ್ಮೃತಿಯನ್ನು ಉಲ್ಲೇಖಿಸಿ ಹೇಳಿದೆ. ಅತ್ಯಾಚಾರ ಸಂತ್ರಸ್ತ ಬಾಲಕಿ ತನ್ನ ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ರೀತಿಯಲ್ಲಿ ಹೇಳಿದ್ದಾರೆ.
ಮನುಸ್ಮೃತಿಯು ಮನು ಎಂಬ ತಪಸ್ವಿಯಿಂದ ರಚಿಸಲ್ಪಟ್ಟ ಗ್ರಂಥವಾಗಿದೆ. ಇದುರಲ್ಲಿ ಅಸಮಾನತೆ, ಕೊಳಕು ಸಂಪ್ರದಾಯ, ವೇದ-ಉಪನಿಷತ್ತು ಮುಂತಾದವುಗಳು ತುಂಬಿದ್ದವು ಎಂದು ಟೀಕಿಸಲ್ಪಟ್ಟಿದೆ.
ಏಕಸದಸ್ಯ ನ್ಯಾಯಮೂರ್ತಿ ಸಮೀರ್ ದವೆ ಅವರಿದ್ದ ಪೀಠವು ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯ ತಂದೆಯ ಮನವಿಯನ್ನು ಆಲಿಸುವ ಸಂದರ್ಭದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅತ್ಯಾಚಾರ ಸಂತ್ರಸ್ತೆಗೆ 16 ವರ್ಷ 11 ತಿಂಗಳಾಗಿದ್ದು, ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಗರ್ಭಾವಸ್ಥೆಯು 24 ವಾರಗಳ ಮಿತಿಯನ್ನು ದಾಟಿರುವುದರಿಂದ ಗರ್ಭಪಾತಕ್ಕೆ ಅನುಮತಿ ಕೋರಿ ಆಕೆಯ ತಂದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಮಹಿಳೆಯ ನಗ್ನತೆಯನ್ನು ಲೈಂಗಿಕ ದೃಷ್ಠಿಯಿಂದ ನೋಡುವುದು ಸರಿಯಲ್ಲ: ಕೇರಳ ಹೈಕೋರ್ಟ್
ಬಾಲಕಿಯ ವಯಸ್ಸು ಅತ್ಯಂತ ಚಿಕ್ಕದಿರುವುದರಿಂದ ಕುಟುಂಬ ವರ್ಗ ಬಹಳ ಆತಂಕದಲ್ಲಿದೆ. ಹೀಗಾಗಿ, ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕೆಂದು ವಕೀಲರು ಮಾಡಿದ ಮನವಿ ಮಾಡಿದರು. ಆದರೆ, ಬಾಲಕಿ ಮತ್ತು ಭ್ರೂಣ ಆರೋಗ್ಯವಾಗಿದ್ದರೆ ಅವರ ಅರ್ಜಿಯನ್ನು ಪುರಸ್ಕರಿಸುವುದಿಲ್ಲ ಎಂದು ಹೈಕೋರ್ಟ್ನ ನ್ಯಾಯಮೂರ್ತಿ ಸಮೀರ್ ದವೆ ಅವರು ಹೇಳಿದ್ದಾರೆ. ಇದೇ ಸಂದರ್ಭ ಮನುಸ್ಮೃತಿಯನ್ನು ಉಲ್ಲೇಖಿಸಿದ್ದಾರೆ.
”ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ಅದಕ್ಕೆ ನಿಮಗೆ ಹಾಗೆನಿಸುತ್ತಿದೆ. ನಿಮ್ಮ ತಾಯಿ ಅಥವಾ ಅಜ್ಜಿಯನ್ನು ಕೇಳಿ, ಹದಿನಾಲ್ಕರಿಂದ ಹದಿನೇಳು ಮದುವೆಗೆ ಗರಿಷ್ಠ ವಯಸ್ಸಾಗಿತ್ತು. 17 ವರ್ಷ ತುಂಬುವ ಮೊದಲೇ ಬಾಲಕಿಯರು ತಮ್ಮ ಮೊದಲ ಮಗುವಿಗೆ ಜನ್ಮ ನೀಡುತ್ತಿದ್ದರು. ಬಾಲಕಿಯರು ಬಾಲಕರಿಗಿಂತ ಬೇಗನೆ ಪ್ರೌಢಾವಸ್ಥೆಗೆ ತಲುಪುತ್ತಾರೆ. ನೀವು ಓದಿಲ್ಲವೆಂದಾದರೆ, ಒಮ್ಮೆ ಮನುಸ್ಮೃತಿ ಓದಿ” ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.
ತಮ್ಮ ಕೊಠಡಿಯಲ್ಲೇ ತಜ್ಞ ವೈದ್ಯರ ಸಲಹೆ ಪಡೆದ ನ್ಯಾಯಮೂರ್ತಿ, ಆಗಸ್ಟ್ 16ರಂದು ಬಾಲಕಿಯು ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಎಂಬುದರ ಮಾಹಿತಿ ಪಡೆದರು. ಆದರೆ, ಬಾಲಕಿ ಮತ್ತು ಭ್ರೂಣಕ್ಕೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಎಂಬುದು ಕಂಡುಬಂದರೆ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡುತ್ತೇನೆ. ಒಂದೊಮ್ಮೆ, ಆರೋಗ್ಯ ಸ್ಥಿತಿ ಉತ್ತಮವಾಗಿದ್ದರೆ ಅಂತಹ ಆದೇಶ ನೀಡುವುದು ನ್ಯಾಯಾಲಯಕ್ಕೆ ಕಷ್ಟವಾಗಲಿದೆ” ಎಂದು ವಕೀಲರಿಗೆ ತಿಳಿಸಿದರು.
ಕೊನೆಗೆ, ಬಾಲಕಿಗೆ ಗರ್ಭಪಾತ ನಡೆಸುವುದು ಸೂಕ್ತವೇ ಎಂಬುದನ್ನು ಕಂಡುಹಿಡಿಯಲು ವೈದ್ಯರ ಸಮಿತಿಯಿಂದ ಬಾಲಕಿಯನ್ನು ಪರೀಕ್ಷಿಸುವಂತೆ ನ್ಯಾಯಾಲಯವು ರಾಜ್ಕೋಟ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ನಿರ್ದೇಶಿಸಿದೆ.