ಹಿಂದಿನ ಬಿಜೆಪಿ ಸರ್ಕಾರವು ಆರ್ಎಸ್ಎಸ್ ಸಂಸ್ಥೆಗೆ ನೂರಾರು ಎಕರೆ ಅಕ್ರಮ ಭೂ ಹಂಚಿಕೆ ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಯ ಸಲುವಾಗಿ ಹಿಂದಿದ್ದ ಬಿಜೆಪಿ ಸರ್ಕಾರ ಕಾನೂನು ಉಲ್ಲಂಘಿಸಿ ಆರ್ಎಸ್ಎಸ್ ಸಂಸ್ಥೆಗೆ ಅಕ್ರಮ ಭೂ ಹಂಚಿಕೆ ಮಾಡಿರುವುದು ನಿಜ. ಈ ಸಂಬಂಧ ದಾಖಲೆಗಳು ಲಭ್ಯವಾಗಿವೆ” ಎಂದಿದ್ದಾರೆ.
ಬಿಜೆಪಿ ಸರ್ಕಾರದ ಈ ಅಕ್ರಮ ಪರಭಾರೆ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಚರ್ಚಿಸಿ ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ, ತಮ್ಮ ಅಧಿಕಾರದಲ್ಲಿ ದ್ವೇಷವನ್ನ ಬಿತ್ತುವ ಕೆಲಸ ಮಾಡುತ್ತಿದ್ದರು, ಪಠ್ಯಗಳಲ್ಲಿ ಬದಲಾವಣೆ ಮಾಡಿದ್ದೂ ಕೂಡ ಇದೇ ಕಾರಣಕ್ಕೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಕ್ರಮಗಳಾಗಿದ್ದವು. ಹೀಗಾಗಿ ಈಗಾಗಲೇ ಕೆಲ ಟೆಂಡರ್ ಗಳನ್ನ ರದ್ದುಪಡಿಸಿದ್ದೇವೆ, ಇದರಲ್ಲಿ ಜಿಕೆವಿಕೆ ಸಂಸ್ಥೆಗೆ ನೀಡಿದ್ದ 108 ಗುತ್ತಿಗೆಯನ್ನ ರದ್ದುಪಡಿಸಿದ್ದೇವೆ ಎಂದು ಅವರು ತಿಳಿಸಿದರು.
ಇದಿಷ್ಟೇ ಅಲ್ಲದೆ, ರಾಜ್ಯದ ಡಯಾಲಿಸಿಸ್ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ, ಹಾಗಾಗಿ ಡಯಾಲಿಸಿಸ್ ಟೆಂಡರ್ ಅನ್ನೂ ರದ್ದುಪಡಿಸಲಾಗಿದೆ, ಈಗ ಜರೂರಾಗಿರುವ ಕೆಲಸಗಳನ್ನ ಮಾಡುತ್ತಿದ್ದೇವೆ, ಇಲಾಖೆಯ ಕಾರ್ಯನಿರ್ವಹಣೆ ಬದಲಾವಣೆ ಕೆಲಸ ನಡೆಯುತ್ತಿದೆ, ಅಧಿಕಾರಿಗಳು, ವೈದ್ಯರ ಕಾರ್ಯನಿರ್ವಹಣೆ ಸರಿಪಡಿಸಬೇಕಿದೆ, ಪಾಲಿಸಿ ವಿಚಾರಗಳನ್ನ ಬದಲಾಯಿಸಬೇಕಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇದನ್ನೂ ಓದಿ: ಹಜ್ ಭವನಕ್ಕೆ 5000 ಕೋಟಿ ರೂ. ಬಿಡುಗಡೆ ವಿಚಾರ: ಸುಳ್ಳು ಸುದ್ದಿ ಹರಡದಂತೆ ಮಾಧ್ಯಮಗಳಿಗೆ ಕಾಂಗ್ರೆಸ್ ಕಿವಿಮಾತು