ಚಿತ್ರದುರ್ಗದ ಬಸವಮೂರ್ತಿ ಮಾದರ ಚನ್ನಯ್ಯ ಪೀಠದ ಸಮೀಪದ ಮೈದಾನದಲ್ಲಿ ಇಂದು ನಡೆಯಲಿರುವ ’ಶೋಷಿತರ ಜಾಗೃತಿ ಸಮಾವೇಶ’ಕ್ಕಾಗಿ ವೇದಿಕೆ ಸಜ್ಜಾಗಿದೆ. ಸಮಾವೇಶಕ್ಕೆ ಜರ್ಮನ್ ಟೆಕ್ನಾಲಜಿ ಟೆಂಟ್ ನಿರ್ಮಿಸಲಾಗಿದ್ದು, ಸುಮಾರು ಮೂರು ಲಕ್ಷ ಕುರ್ಚಿಗಳನ್ನು ಹಾಕಲಾಗಿದೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿರುವ ಈ ಬೃಹತ್ ಸಮಾವೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.
ಕಾಂತರಾಜ ಆಯೋಗ ವರದಿಯನ್ನು ಬಿಡುಗಡೆ ಮಾಡಿ ಜಾರಿಗೆ ತರಬೇಕು, ಇಡಬ್ಲ್ಯುಎಸ್ ಮೀಸಲಾತಿಯನ್ನು ರದ್ದುಗೊಳಿಸಬೇಕು, ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಬೇಕು ಸೇರಿದಂತೆ ಹಲವು ಮಹತ್ವದ ಆಗ್ರಹಗಳನ್ನು ಈ ಸಮಾವೇಶ ಮಾಡುತ್ತಿದೆ. ಕಾಂತರಾಜು ಆಯೋಗದ ಜಾತಿ ಸಮೀಕ್ಷೆಯ ಬಿಡುಗಡೆ, ಇಡಬ್ಲ್ಯುಎಸ್ ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ಪ್ರಮುಖ ಹಕ್ಕೊತ್ತಾಯ ಕೂಡ ಸಭೆಯಲ್ಲಿ ನಡೆಯಲಿದೆ.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಹಿಂದುಳಿದ ವರ್ಗದ ಪ್ರಮುಖರಾದ ಕೆ.ಎಂ ರಾಮಚಂದ್ರಪ್ಪ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ಸೇರಿದಂತೆ ಶೋಷಿತ ಸಮುದಾಯಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಸಮಾವೇಶಕ್ಕೆ ಆಗಮಿಸಿರುವ ಜನರಿಗಾಗಿ ಮೂರು ಲಕ್ಷ ಜನಕ್ಕೆ ಕೋಳಿ ಬಿರಿಯಾನಿ ಮತ್ತು ಮೂರು ಲಕ್ಷ ಜನಕ್ಕೆ ಪಲಾವ್ ತಯಾರಿ ಮಾಡಲಾಗುತ್ತಿದೆ.
ಇದನ್ನು ಓದಿ: ಅಂಬೇಡ್ಕರ್ ಪೋಟೋ ಇದ್ದ ಧ್ವಜಕ್ಕೆ ಅವಮಾನ: ಮೂವರು ಆರೋಪಿಗಳ ಬಂಧನ