ಕ್ರೈಸ್ತರು ಬಹುಸಂಖ್ಯಾತರಾಗಿರುವ ಮಿಜೋರಾಂನಲ್ಲಿ ಮತ ಎಣಿಕೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಕ್ರಿಶ್ಚಿಯನ್ ಸಮುದಾಯದ ಜನರು ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಡಿಸೆಂಬರ್ 3ರ ಭಾನುವಾರ ಕ್ರಿಶ್ಚಿಯನ್ನರ ಆರಾಧನೆಯ ದಿನ. ಚುನಾವಣಾ ದಿನಾಂಕಗಳನ್ನು ಆಯ್ಕೆಮಾಡುವಾಗ ಭಾರತೀಯ ಚುನಾವಣಾ ಆಯೋಗವು (ಇಸಿಐ) ಸಾಮಾನ್ಯವಾಗಿ ವಿಶೇಷ ದಿನಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆಯಾದರೂ ಚುನಾವಣಾ ಆಯೋಗ ಮಿಜೋರಾಂ ವಿಚಾರದಲ್ಲಿ ಎಡವಿದೆ ಎಂದು ಕ್ರಿಶ್ಚಿಯನ್ ಸಮುದಾಯ ಹೇಳಿಕೊಂಡಿದೆ.
ಮಿಜೋರಾಂನಲ್ಲಿ ಮತ ಎಣಿಕೆ ದಿನವನ್ನು ಒಂದು ಅಥವಾ ಎರಡು ದಿನ ಮುಂದೂಡುವಂತೆ ಹಲವಾರು ನಾಗರಿಕ ಸಮಾಜ ಗುಂಪುಗಳು, ರಾಜಕೀಯ ಪಕ್ಷಗಳು ಮತ್ತು ಚರ್ಚ್ಗಳ ಮನವಿಯನ್ನು ಸ್ವೀಕರಿಸಲಾಗಿಲ್ಲ. ರಾಜಸ್ಥಾನದಲ್ಲಿ ನ.23ರಂದು ವಿಧಾನಸಭೆ ಚುನಾವಣೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ ಹೆಚ್ಚಿನ ಪ್ರಮಾಣದಲ್ಲಿ ವಿವಾಹ ಕಾರ್ಯಕ್ರಮಗಳು ನಿಗದಿಯಾಗಿದ್ದ ಕಾರಣ ಚುನಾವಣೆಯನ್ನು ಈ ಮೊದಲು ನ.25ಕ್ಕೆ ಮುಂದೂಡಿತ್ತು.
ರಾಜ್ಯದ 15 ಪ್ರಮುಖ ಚರ್ಚ್ಗಳ ಒಕ್ಕೂಟವಾದ ಮಿಜೋರಾಂ ಕೊಹ್ರಾನ್ ಹ್ರೂಯಿಟ್ಯೂಟ್ ಕಮಿಟಿ (MKHC), ಈ ಹಿಂದಿನ ಶನಿವಾರ ಎಲ್ಲಾ ಚರ್ಚ್ಗಳಲ್ಲಿ ಮತ ಎಣಿಕೆ ದಿನಾಂಕದ ಬದಲಾವಣೆಗೆ ದೇವರಲ್ಲಿ ಪ್ರಾರ್ಥನೆ ನಡೆಸಿದ್ದಾರೆ. ರಾಜ್ಯದ ಅತಿದೊಡ್ಡ ಪಂಗಡವಾದ ಮಿಜೋರಾಂ ಪ್ರೆಸ್ಬಿಟೇರಿಯನ್ ಚರ್ಚ್ ಕೂಡ ಪ್ರತ್ಯೇಕವಾಗಿ ಚುನಾವಣಾ ಆಯೋಗ ಮತ ಎಣಿಕೆಯ ದಿನಾಂಕವನ್ನು ಬದಲಿಸಲಿ ಎಂದು ದೇವರ ಮೊರೆ ಹೋಗಿದ್ದಾರೆ.
ಎನ್ಜಿಒ ಸಮನ್ವಯ ಸಮಿತಿಯ (ಎನ್ಜಿಒಸಿಸಿ) ಐದು ಸದಸ್ಯರ ನಿಯೋಗವು ಮುಖ್ಯ ಚುನಾವಣಾ ಆಯುಕ್ತರೊಂದಿಗೆ (ಸಿಇಸಿ) ಅಪಾಯಿಂಟ್ಮೆಂಟ್ ಪಡೆಯಲು ಕಳೆದ ವಾರದಿಂದ ನವದೆಹಲಿಯಲ್ಲಿ ತಂಗಿದ್ದಾರೆ. ಸಿಇಸಿ ಕಚೇರಿಯು ನ.28 ರಂದು ನಿಯೋಗಕ್ಕೆ ಸಮಯ ನೀಡಿದೆ ಎಂದು ಸುದ್ದಿ ವರದಿಗಳು ತಿಳಿಸಿವೆ.
ನಿಗದಿಯಂತೆ ಡಿ.3ರಂದು ಮತ ಎಣಿಕೆ ನಡೆಸಲು ರಾಜ್ಯ ಚುನಾವಣಾ ಆಯೋಗ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾಗಲಿರುವ ಮತ ಎಣಿಕೆ ಕಾರ್ಯದಲ್ಲಿ 4,000ಕ್ಕೂ ಹೆಚ್ಚು ಎಣಿಕೆ ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಎಚ್. ಲಿಯಾಂಜೆಲಾ ಅವರನ್ನು ಉಲ್ಲೇಖಿಸಿ ಮಿಜೋರಾಂ ಪೋಸ್ಟ್ ವರದಿ ತಿಳಿಸಿದೆ. ಮತ ಎಣಿಕೆಗೆ ಒಟ್ಟು 13 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನ.29ರಂದು ಮತ ಎಣಿಕೆಗೆ ಮಾಡಿಕೊಂಡ ಸಿದ್ದತೆ ಕುರಿತು ಪರಿಶೀಲನೆ ಕೈಗೊಳ್ಳಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮಧುಪ್ ವ್ಯಾಸ್ ಹೇಳಿದ್ದಾರೆ.
ಇದನ್ನು ಓದಿ: ಕೊಚ್ಚಿ; ವಿವಿ ಕ್ಯಾಂಪಸ್ನಲ್ಲಿ ಕಾಲ್ತುಳಿತ ಸಂಭವಿಸಿದ್ದೇಗೆ? ಪ್ರತ್ಯಕ್ಷದರ್ಶಿಗಳಿಂದ ದುರಂತದ ವಿವರಣೆ..