ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್ಐಆರ್ ಜಾರಿಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮತ್ತು ಮತದಾರರ ಹಕ್ಕುಗಳ ರಕ್ಷಣೆಗಾಗಿ ರಾಜ್ಯಾದ್ಯಂತ ಅತ್ಯಂತ ವಿಸ್ತಾರವಾದ ಚಳವಳಿ ರೂಪಿಸಲು ತೀರ್ಮಾನಿಸಲಾಗಿದೆ ಎಂದು ‘ಎಸ್ಐಆರ್ ವಿರೋಧಿ ಕರ್ನಾಟಕ’ ವೇದಿಕೆಯ ನಾಯಕರಾದ ನೂರ್ ಶ್ರೀಧರ್ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಆಯೋಗವು ಸಾರ್ವಜನಿಕರ ಯಾವುದೇ ಮನವಿಗಳಿಗೆ ಬೆಲೆ ಕೊಡದೆ ಸರ್ವಾಧಿಕಾರಿಯಂತೆ ‘ಎಸ್ಐಆರ್’ (SIR) ವ್ಯವಸ್ಥೆಯನ್ನು ಜಾರಿ ಮಾಡುತ್ತಿದೆ ಎಂದು ನೂರ್ ಶ್ರೀಧರ್ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಯಿಂದಾಗಿ ಈಗಾಗಲೇ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಅರ್ಹ ಮತದಾರರು ತಮ್ಮ ವೋಟಿಂಗ್ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಈ ವ್ಯವಸ್ಥೆ ಅತ್ಯಂತ ಅವೈಜ್ಞಾನಿಕ ಹಾಗೂ ದೋಷಪೂರಿತವಾಗಿದ್ದು, ಇದರ ವಿರುದ್ಧ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಆಯೋಗ ಮಾತ್ರ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹೊಸ ಸಾಫ್ಟ್ವೇರ್ ನಿಯಮಗಳಿಂದಾಗಿ ರಾಜ್ಯದ ಒಂದು ಕೋಟಿಗೂ ಅಧಿಕ ಮಂದಿ ವೋಟಿಂಗ್ ಹಕ್ಕಿನಿಂದ ವಂಚಿತರಾಗುವ ಸ್ಪಷ್ಟ ಮುನ್ಸೂಚನೆಗಳು ಕಾಣಿಸುತ್ತಿವೆ. ವಿಶೇಷವಾಗಿ ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿಗಳು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಅನಕ್ಷರಸ್ಥರಿಗೆ ಇದರಿಂದ ದೊಡ್ಡ ಹೊಡೆತ ಬೀಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ‘ತಾರ್ಕಿಕ ವ್ಯತ್ಯಾಸ’ (Logical Discrepancy) ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುತ್ತಿದ್ದು, ಅಲ್ಲಿಗಿಂತಲೂ ಕಠಿಣ ನಿಯಮಗಳನ್ನು ಇಲ್ಲಿ ಹೇರಲಾಗುತ್ತಿದೆ. ಇದರ ಪರಿಣಾಮವಾಗಿ ಮುಂದಿನ ತಿಂಗಳೇ ಕೋಟ್ಯಂತರ ಜನರಿಗೆ ನೋಟಿಸ್ ಬರಲಿದ್ದು, ದಾಖಲೆಗಳನ್ನು ಒದಗಿಸಲಾಗದೆ ಬಡವರು ತತ್ತರಿಸುವ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಮತ ಕಾವಲು ಸಮಿತಿಯ 5 ಪ್ರಮುಖ ಕಾರ್ಯಸೂಚಿಗಳು:
ಈ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ರಚನೆಯಾಗಿರುವ ‘ನಾಗರಿಕ ಮತ ಕಾವಲು ಸಮಿತಿ’ಯು ಐದು ಪ್ರಮುಖ ಕಾರ್ಯಸೂಚಿಗಳೊಂದಿಗೆ ಕೆಲಸ ಮಾಡಲಿದೆ:
- SIR ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ದಿನನಿತ್ಯದ ಗ್ರೌಂಡ್ ರಿಪೋರ್ಟ್ ಸಂಗ್ರಹಿಸಿ ಅಧಿಕಾರಿಗಳು ಹಾಗೂ ಮಾಧ್ಯಮಗಳ ಗಮನಕ್ಕೆ ತರುವುದು.
- ಜನರ ಗೊಂದಲಗಳನ್ನು ಪರಿಹರಿಸಿ ಸೂಕ್ತ ರೀತಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ನೆರವಾಗುವುದು.
- ಸರ್ಕಾರ ಘೋಷಿಸಿರುವ ಸಹಾಯವಾಣಿ ಮತ್ತು ಶಾಶ್ವತ ವಾಸಸ್ಥಳ ದೃಢೀಕರಣ ಪತ್ರ ವಿತರಿಸುವ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯುವಂತೆ ನಿಗಾವಹಿಸುವುದು.
- ಪ್ರತಿ ಬೂತ್ ಮಟ್ಟದಲ್ಲೂ ಅರ್ಹ ಮತದಾರರ ಪಟ್ಟಿ ಸಿದ್ಧಪಡಿಸಿ, ನೋಟಿಸ್ ಪಡೆದವರಿಗೆ ನೆರವಾಗುವುದು ಹಾಗೂ ಪಟ್ಟಿಯಿಂದ ಕೈಬಿಡಲಾದ ಮತದಾರರನ್ನು ಸಂಘಟಿಸಿ ಮರು-ಸೇರ್ಪಡೆಗಾಗಿ ಕಾನೂನಾತ್ಮಕ ಹೋರಾಟ ರೂಪಿಸುವುದು.
- ಅರ್ಹ ಮತದಾರರ ರಕ್ಷಣೆಗಾಗಿ ತಕ್ಷಣವೇ ‘ವಿಶೇಷ ಗ್ರಾಮ ಅಥವಾ ವಾರ್ಡ್ ಸಭೆ’ಗಳನ್ನು ಕರೆಯುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವುದು.
ಈ ಎಲ್ಲ ಅಂಶಗಳ ಯಶಸ್ವಿ ಅನುಷ್ಠಾನಕ್ಕಾಗಿ ಜುಲೈ 8 ರಿಂದ 15 ರವರೆಗೆ ರಾಜ್ಯಾದ್ಯಂತ ಬೂತ್ ಮಟ್ಟದವರೆಗೂ ಸರಣಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರಪಡಿಸುವ ಈ ಮಹತ್ವದ ‘ಮತ ಕಾವಲು ಅಭಿಯಾನ’ದಲ್ಲಿ ರಾಜ್ಯದ ಎಲ್ಲ ಜವಾಬ್ದಾರಿಯುತ ನಾಗರಿಕರು, ವಿಶೇಷವಾಗಿ ಯುವಕ-ಯುವತಿಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಭಿಯಾನದಲ್ಲಿ ಕೈಜೋಡಿಸಲು ಇಚ್ಛಿಸುವರು 96060 87560 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಭಾಗಿಯಾಗಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ರೈತ ಹೋರಾಟಗಾರ ವೀರಸಂಗಯ್ಯ, ತಾರಾ ರಾವ್, ಸೀತಾರಾಮ್ ಗುಂಡಪ್ಪ, ತಾಹೀರ್ ಹುಸೇನ್, ಬಸವರಾಜ್ ಕೌತಾಳ್, ಬಾಲಕೃಷ್ಣಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.


