ಇಸ್ರೇಲ್ ಗಾಝಾದ ಮೇಲೆ ಬಾಂಬ್ ದಾಳಿಯನ್ನು ನಿಲ್ಲಿಸಿದರೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗಳಿಸುವುದಾಗಿ ಹಮಾಸ್ ಹೇಳಿದ್ದು, ಅಪಾರ ಸಾವು-ನೋವಿನ ಬಳಿಕ ಹಮಾಸ್ ಸಶಸ್ತ್ರ ಗುಂಪು ಯದ್ಧ ನಿಲ್ಲಿಸುವಂತೆ ಇಸ್ರೇಲ್ಗೆ ಆಗ್ರಹಿಸುತ್ತಿದೆ ಎಂದು ವರದಿ ತಿಳಿಸಿದೆ.
ಹಮಾಸ್ ಎಲ್ಲಾ ಒತ್ತೆಯಾಳುಗಳನ್ನು ಷರತ್ತಿನ ಮೇಲೆ ಬಿಡುಗಡೆ ಮಾಡಲು ಬದ್ಧವಾಗಿದೆ. ಇಸ್ರೇಲ್ ಗಾಝಾದ ಮೇಲೆ ತನ್ನ ವೈಮಾನಿಕ ದಾಳಿಯನ್ನು ನಿಲ್ಲಿಸಿದರೆ ಸಶಸ್ತ್ರ ಗುಂಪು ಎಲ್ಲಾ ಒತ್ತೆಯಾಳು ನಾಗರಿಕರನ್ನು ತಕ್ಷಣವೇ ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಹಮಾಸ್ ಹಿರಿಯ ಅಧಿಕಾರಿಯೊಬ್ಬರು ಎನ್ಬಿಸಿ ನ್ಯೂಸ್ಗೆ ಹೇಳಿದ್ದಾರೆ.
ಇಸ್ರೇಲಿ ಪಡೆಗಳು ಗಾಝಾ ಪಟ್ಟಿ ಮೇಲಿನ ಸೇನಾ ದಾಳಿಯನ್ನು ಸ್ಥಗಿತಗೊಳಿಸಿದರೆ ಒಂದು ಗಂಟೆಯೊಳಗೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಸಿದ್ಧವಾಗಿದೆ ಎಂದು ವರದಿ ಹೇಳಿದೆ.
ಹಮಾಸ್ನ ಪ್ರಬಲ ನಾಯಕ ಖಾಲಿದ್ ಮೆಶಾಲ್ ಈ ಕುರಿತು ಸ್ಕೈ ನ್ಯೂಸ್ಗೆ ಪ್ರತಿಕ್ರಿಯಿಸಿದ್ದು, ಇಸ್ರೇಲ್ ಸೇನೆ ಗಾಝಾ ಪ್ರದೇಶದ ಮೇಲೆ ನಡೆಸುತ್ತಿರುವ ನಿರಂತರ ಬಾಂಬ್ ದಾಳಿಯನ್ನು ನಿಲ್ಲಿಸಿದರೆ ಹಮಾಸ್ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಸಿದ್ಧ ಎಂದು ಹೇಳಿದ್ದಾರೆ.
ಅವರು ಆಕ್ರಮಣವನ್ನು ಅಂತ್ಯಗೊಳಿಸಲಿ ಮತ್ತೆ ಖತರ್, ಈಜಿಪ್ಟ್ , ಅರಬ್ ದೇಶಗಳು ಹಾಗೂ ಇತರರ ಮಧ್ಯಸ್ಥಿಕೆಯಿಂದ ಒತ್ತೆಯಾಳುಗಳ ಬಿಡುಗಡೆಗೆ ದಾರಿ ಹುಡುಕಬಹುದಾಗಿದೆ ಎಂದು ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥರಾಗಿರುವ ಮೆಶಾಲ್ ಹೇಳಿದ್ದಾರೆ.
ಇಸ್ರೇಲ್ನ ವಾಯುದಾಳಿಯು ತೀವ್ರವಾಗಿದ್ದಾಗ ಒತ್ತೆಯಾಳುಗಳ ಬಿಡುಗಡೆ ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಾವು ಯಾದೃಚ್ಛಿಕ ಬಾಂಬ್ ಸ್ಫೋಟಗಳು, ನರಮೇಧವನ್ನು ನಿಲ್ಲಿಸಲು ಬಯಸುತ್ತೇವೆ. ಬಳಿಕ ಸೈನಿಕರು ಅವರನ್ನು ಒತ್ತ ಇಟ್ಟ ಸ್ಥಳಗಳಿಂದ ಕರೆದೊಯ್ದು ರೆಡ್ ಕ್ರಾಸ್ ಅಥವಾ ಇನ್ನಿತರ ಯಾರಿಗಾದರೂ ಹಸ್ತಾಂತರಿಸಬಹುದು ಎಂದು ಹೇಳಿದ್ದಾರೆ.
ಇಸ್ರೇಲ್ನ ಮಿಲಿಟರಿ ಇತ್ತೀಚೆಗೆ ಗಾಝಾ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಕೃತ್ಯದಲ್ಲಿ 500ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಅ.7ರಂದು ಆರಂಭವಾದ ಯುದ್ಧದ ಬಳಿಕ ಇಸ್ರೇಲ್ ದಾಳಿಯಿಂದ ಗಾಝಾದಲ್ಲಿ 5000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಇದನ್ನು ಓದಿ: ಅಮೆರಿಕಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 8,076 ಭಾರತೀಯರ ಬಂಧನ