ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟು ಗ್ರಾಮದಲ್ಲಿ ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ ಬನ್ನಿ ಹಬ್ಬದ ಅಂಗವಾಗಿ ನಡೆದ ಕೋಲು ಕಾಳಗದಲ್ಲಿ ಮೂವರು ಮೃತಪಟ್ಟಿದ್ದು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತರನ್ನು ಕರ್ನೂಲ್ ಜಿಲ್ಲೆಯ ಗಣೇಶ್(19), ರಾಮಾಂಜೆಯಲು (59) ಮತ್ತು ಬಳ್ಳಾರಿ ಮೂಲದ ಪ್ರಕಾಶ್ (30) ಎಂದು ಗುರುತಿಸಲಾಗಿದೆ.
ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿಯಲ್ಲಿರುವ ಹೊಳಗುಂದವು ಹೆಚ್ಚಿನ ಸಂಖ್ಯೆಯ ಕನ್ನಡ ಭಾಷಿಕರ ನೆಲೆಯಾಗಿದೆ. ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ ಬನ್ನಿ ಹಬ್ಬದ ಅಂಗವಾಗಿ ನಡೆದ ಕೋಲು ಕಾಳಗ ವೀಕ್ಷಣೆಗಾಗಿ ಹಲವರು ಮರಗಳನ್ನು ಹತ್ತಿ ಕುಳಿತಿದ್ದರು. ಈ ವೇಳೆ ಮರದ ಕಡೆಗೆ ಎಸೆದ ಬೆಂಕಿ ಉಂಡೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಮರದ ಕೊಂಬೆಯಿಂದ ಬಿದ್ದು ಮೂವರು ಸಾವಿಗೀಡಾಗಿದ್ದಾರೆ.
ಸಾಂಪ್ರದಾಯಿಕ ಕೋಲು ಕಾಳಗದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾಳಮ್ಮ-ಮಲ್ಲೇಶ್ವರ ಕಲ್ಯಾಣೋತ್ಸವದ ಅಂಗವಾಗಿ ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಮಂಡಲದ ವಿವಿಧ ಗ್ರಾಮಗಳ ಜನರು ಸ್ಥಳೀಯ ದೇವತೆಗಳ ವಿಗ್ರಹಗಳನ್ನು ಪಡೆಯಲು ಕೋಲುಗಳನ್ನು ಹಿಡಿದು ಕಾಳಗದಲ್ಲಿ ತೊಡಗುವುದು ಸಂಪ್ರದಾಯವಾಗಿದೆ.
ಇದನ್ನು ಓದಿ: ಇಸ್ರೇಲ್ ಬಾಂಬ್ ದಾಳಿಯನ್ನು ನಿಲ್ಲಿಸಿದರೆ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುತ್ತೇವೆ: ಹಮಾಸ್