ಬಿಜೆಪಿ ಶಾಸಕರ ಕಮಿಷನ್ ಕಿರುಕುಳಕ್ಕೆ ಬೇಸತ್ತು ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯ್ತಿ ಸದಸ್ಯರು ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿ ಶಾಸಕ ಡಿ.ಎಂ ಐಹೊಳೆ ಅವರು ಪ್ರತಿನಿಧಿಸುವ ರಾಯಭಾಗ ವಿಧಾನಸಭಾ ಕ್ಷೇತ್ರದಲ್ಲಿ ಕಮಿಷನ್ ಕಿರುಕುಳ ಮಿತಿ ಮೀರಿದೆ. ಹಾಗಾಗಿ ಮೇಖಳಿ ಗ್ರಾಮ ಪಂಚಾಯ್ತಿ ಸದಸ್ಯೆ ಸುಧಾ ಸಿದ್ದಪ್ಪ ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಚುನಾವಣೆಗೆ ಬಂಡವಾಳ ಕ್ರೋಡೀಕರಣಕ್ಕಾಗಿ 40% ಕಮಿಷನ್ ದಂಧೆಯನ್ನು ಗ್ರಾ. ಪಂಗೂ ತಲುಪಿಸಿದ ಕೀರ್ತಿ ಬಸವರಾಜ ಬೊಮ್ಮಾಯಿವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದೆ.
ಚುನಾವಣೆಗೆ ಬಂಡವಾಳ ಕ್ರೋಡೀಕರಣಕ್ಕಾಗಿ 40% ಕಮಿಷನ್ ದಂಧೆಯನ್ನು ಗ್ರಾ. ಪಂಗೂ ತಲುಪಿಸಿದ ಕೀರ್ತಿ @BSBommai ಅವರಿಗೆ ಸಲ್ಲುತ್ತದೆ!
ಬಿಜೆಪಿ ಶಾಸಕ ಡಿ.ಎಂ ಐಹೊಳೆ ಅವರ ಕ್ಷೇತ್ರದಲ್ಲಿ ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ರಾಜೀನಾಮೆ ನೀಡಿದ್ದಾರೆ.
"ಸರ್ವಕ್ಷೇತ್ರಂ ಕಮಿಷನ್ಮಯಂ"!!#40PercentSarkara pic.twitter.com/0Re4abdZBI
— Karnataka Congress (@INCKarnataka) February 23, 2023
‘ಗ್ರಾಮದ ಅಭಿವೃದ್ಧಿ ಕಾಮಗಾರಿಯ ಅನುಮೋದನೆಗಾಗಿ ಪಂಚಾಯಿತಿ ಅಧಿಕಾರಿಗಳು ಪ್ರತಿ ಸದಸ್ಯರಿಗೆ ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ, ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾವು ಆರಿಸಿಬಂದು ಎರಡೂವರೆ ವರ್ಷ ಆಗಿದೆ. ಮಂದಿಯ ಕೆಲಸ ಮಾಡಿಸಲು ಆಗುತ್ತಿಲ್ಲ. ಪ್ರತಿ ಕೆಲಸಕ್ಕೂ ಲಂಚ ಕೇಳುತ್ತಾರೆ. ಹಾಗಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಸಿದ್ದಪ್ಪ ರಾಜಂಗಳೆ ತಿಳಿಸಿದ್ದಾರೆ.
‘14 ಮತ್ತು 15ನೇ ಹಣಕಾಸು ಯೋಜನೆ, ಉದ್ಯೋಗ ಖಾತ್ರಿ ಯೋಜನೆ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ದಳವಾಯಿ ಶೇ 30ರಷ್ಟು ಕಮೀಷನ್ ಕೊಡಬೇಕೆಂದು ಹೇಳುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಕಾಮಗಾರಿ ನಂತರ ಬಿಲ್ ಪಡೆಯಲು ಪಿಡಿಒ ಶೇ 10, ಎಂಜಿನಿಯರಿಂಗ್ ಶೇ 10, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೇರಿ ಶೇ 10 ಅಂತಾ ಒಟ್ಟು ಶೇ 30ರಷ್ಟು ಕಮಿಷನ್ ಬೇಡಿಕೆ ಇಟ್ಟಿದ್ದಾರೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ದೂರಿದ್ದಾರೆ.
ಇನ್ನು 10 ಸದಸ್ಯರು ರಾಜೀನಾಮೆ ನೀಡುತ್ತೇವೆ
‘ಕಮಿಷನ್ ಕೇಳುತ್ತಿರುವ ಅಭಿವೃದ್ಧಿ ಅಧಿಕಾರಿಯನ್ನು ವಜಾಗೊಳಿಸದಿದ್ದರೆ ಇನ್ನೂ 10 ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ’ ಎಂದು ಮತ್ತೊಬ್ಬ ಗ್ರಾ.ಪಂ ಸದಸ್ಯ ಸುನೀಲ ಖಿಚಡೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯ್ತಿ ಸದಸ್ಯರಾಗಲು ಬಹಳಷ್ಟು ಜನರ ಕಷ್ಟಪಡುತ್ತಿರುವಾಗ ಇಲ್ಲಿ ಕಮಿಷನ್ ಕಿರುಕುಳಕ್ಕೆ ಬೇಸೆತ್ತು ಗ್ರಾಮ ಪಂಚಾಯ್ತಿ ಸದಸ್ಯರೇ ರಾಜೀನಾಮೆ ನೀಡುತ್ತಿರುವುದು ಆಶ್ಚರ್ಯಕರವಾಗಿದೆ.
ಈ ಹಿಂದೆ ಗುತ್ತಿಗೆದಾರರು ಬಿಜೆಪಿ ಸರ್ಕಾರದ ಮಂತ್ರಿಗಳು, ಶಾಸಕರು 40% ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಆದರೆ ಪ್ರಧಾನಿಗಳು ಈ ಬಗ್ಗೆ ಗಮನ ನೀಡಲಿಲ್ಲ. ಆನಂತರ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಮಾಜಿ ಸಚಿವ ಈಶ್ವರಪ್ಪನವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆನಂತರ ಪಿಎಸ್ಐ ಹಗರಣ ಹೊರಬಂದಿತ್ತು. ಈಗ ಗ್ರಾಮ ಪಂಚಾಯ್ತಿ ಸದಸ್ಯರು ಸಹ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನೆನೂ ಚುನಾವಣೆ ಎದುರಾಗಲಿದ್ದು ಇವೆಲ್ಲವೂ ಚುನಾವಣೆಯಲ್ಲಿ ಪ್ರಭಾವ ಬೀರುವ ವಿಷಯಗಳಾಗಿವೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶ್ರೀನಿವಾಸಪುರ: ರಮೇಶ್ ಕುಮಾರ್ರವರಿಗೆ ಒಲಿಯುವುದೇ ಹ್ಯಾಟ್ರಿಕ್ ಗೆಲುವು?