ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
ಐಟಿ, ಇಡಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಉದ್ಯಮಿಗಳನ್ನು ಬೆದರಿಸಿ ಚುನಾವಣಾ ಬಾಂಡ್ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ಡಾ ಅಂಬೇಡ್ಕರ್ ದಂಡು, ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಜಂಟಿಯಾಗಿ ದೂರು ನೀಡಿವೆ.
“ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂಲಕವೇ ಈ ಪಿತೂರಿ ನಡೆದಿದೆ. ಒಟ್ಟು 477 ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ 20 ಪ್ರಕರಣಗಳಲ್ಲಿ ಐಟಿ, ಇಡಿ ದಾಳಿಯಾದ ನಂತರ ಚುನಾವಣಾ ಬಾಂಡ್ ಖರೀದಿಸಲಾಗಿದೆ. ಆ ಹಣ ಬಿಜೆಪಿಯ ಖಾತೆಗೆ ಸಂದಾಯವಾಗಿದೆ. ಇದು ಐಪಿಸಿ ಸೆಕ್ಷನ್ 384/ 120ಬಿ ಅಡಿ ಕ್ರಿಮಿನಲ್ ಅಪರಾಧವಾಗಿದೆ” ಎಂದು ಜನಾಧಿಕಾರ ಸಂಘರ್ಷ ಪರಿಷತ್ನ ಆದರ್ಶ್ ಐಯ್ಯರ್ ಹೇಳಿರುವುದಾಗಿ ಈದಿನ.ಕಾಂ ವರದಿ ಮಾಡಿದೆ.
ನಾನುಗೌರಿ.ಕಾಂಗೆ ಮಾಹಿತಿ ನೀಡಿರುವ ಆದರ್ಶ್ ಅಯ್ಯರ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಜಾರಿ ನಿರ್ದೇಶನಾಲಯ (ಇಡಿ), ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಸಮಿತಿಯ ಕಾರ್ಯಕಾರಿಣಿ ಸದಸ್ಯರು, ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಾಲಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಕರ್ನಾಟಕ ಬಿಜೆಪಿಯ ರಾಜ್ಯ ಘಟಕದ ಸದಸ್ಯರ ವಿರುದ್ದ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ, “ಇದೊಂದು ಹೈ ಪ್ರೊಫೈಲ್ ಪ್ರಕರಣ ಎಂದ ತಿಲಕನಗರ ಪೊಲೀಸರು ದೂರು ಪಡೆಯಲು ಹಿಂದೇಟು ಹಾಕಿದ್ದಾರೆ. ನಂತರ ದೂರು ಸ್ವೀಕರಿಸಿದ್ದಾರೆ. ಚುನಾವಣೆಯ ಸಮಯ ಆಗಿರುವ ಕಾರಣ ಎಆರ್ಒ (Assistant Review Officer)ಗೆ ವರ್ಗಾಯಿಸುತ್ತೇವೆ ಎಂದಿದ್ದಾರೆ.
“ಸೋಮವಾರ ನಾವು ಡಿಸಿಪಿಯವರಿಗೆ ಮತ್ತೊಂದು ದೂರು ಕೊಡುತ್ತೇವೆ. ಎಫ್ಐಆರ್ ದಾಖಲಿಸದಿದ್ದರೆ ಕೋರ್ಟ್ ಮೊರೆ ಹೋಗುತ್ತೇವೆ” ಎಂದು ಆದರ್ಶ್ ಅಯ್ಯರ್ ತಿಳಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ರಾಘವೇಂದ್ರ ಸೋಲ್ತಾರೆ: ಕೆ.ಎಸ್ ಈಶ್ವರಪ್ಪ