ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್ ಯೋಜನೆಯನ್ನು ವಾಪಾಸ್ಸು ತರಲಾಗುವುದು ಎಂಬ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಹೇಳಿಕೆಗೆ ಕಾಂಗ್ರೆಸ್ ಶನಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, 4 ಲಕ್ಷ ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ನಂತರ ಅವರು ಮತ್ತೆ ಲೂಟಿ ಮಾಡಲು ಮುಂದಾಗುತ್ತಾರೆ ಎಂದು ಹೇಳಿದೆ.
2024ರ ಸಾರ್ವತ್ರಿಕ ಚುನಾವಣೆಯ ನಂತರ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿ ಚುನಾವಣಾ ಬಾಂಡ್ಗಳನ್ನು ಮರಳಿ ತರಲು ಉದ್ದೇಶಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದರು.
ಈ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಘೋಷಿಸಿದ ಎಲೆಕ್ಟೋರಲ್ ಬಾಂಡ್ಗಳನ್ನು ಮರಳಿ ತರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. #PayPM ಹಗರಣದಲ್ಲಿ ಬಿಜೆಪಿ 4 ಲಕ್ಷ ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವುದು ನಮಗೆ ತಿಳಿದಿದೆ. ಈಗ ಅವರು ಲೂಟಿಯನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಹೇಳಿದ್ದಾರೆ.
ಜೈರಾಮ್ ರಮೇಶ್ ಅವರು “ಪೇಪಿಎಂನ ನಾಲ್ಕು ವಿಧಾನಗಳು” ಎಂದು ಉಲ್ಲೇಖಿಸಿದ್ದಾರೆ.
ಪ್ರಿಪೇಯ್ಡ್ ಲಂಚ – ಚಂದಾ ದೋ, ಧಂಧಾ ಲೋ. ಪೋಸ್ಟ್ ಪೇಯ್ಡ್ ಲಂಚ – ಥೇಕಾ ಡೋ, ರಿಶ್ವತ್ ಲೋ(Theka Do, Rishvat Lo). ಪ್ರಿ-ಪೇಯ್ಡ್ ಮತ್ತು ಪೋಸ್ಟ್-ಪೇಯ್ಡ್ ಲಂಚಗಳ ಸಂಯೋಜಿತ ವೆಚ್ಚ: ರೂ 3.8 ಲಕ್ಷ ಕೋಟಿ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ದಾಳಿ ನಂತರದ ಲಂಚ – ಹಫ್ತಾ ವಸೂಲಿ, ರೈಡ್ ನಂತರದ ಲಂಚದ ವೆಚ್ಚ: 1,853 ಕೋಟಿ ರೂ.ಎಂದು ಅವರು ಹೇಳಿದ್ದಾರೆ. ಇದು ನಮ್ಮ ಜೀವಮಾನದ ಅತ್ಯಂತ ಪ್ರಮುಖ ಚುನಾವಣೆ. ತಳಮಟ್ಟದ ವರದಿಗಳು ಸ್ಪಷ್ಟಪಡಿಸುವಂತೆ, ಈ ಭ್ರಷ್ಟ ಬ್ರಿಗೇಡ್ ತೊಲಗುವ ಹಾದಿಯಲ್ಲಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ನ ನಿರ್ದೇಶನದ ನಂತರ, ಚುನಾವಣಾ ಬಾಂಡ್ಗಳ ಅಧಿಕೃತ ಮಾರಾಟಗಾರರಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚುನಾವಣಾ ಬಾಂಡ್ಗಳ ಡೇಟಾವನ್ನು ಸಾರ್ವಜನಿಕಗೊಳಿಸಿದೆ. ಚುನಾವಣಾ ಬಾಂಡ್ಗಳ ದತ್ತಾಂಶವು ಬಿಜೆಪಿಯ ಕೊಡುಕೊಳ್ಳುವಿಕೆ ಮತ್ತು ದೇಣಿಗೆ ವಿರುದ್ಧ ಕಂಪನಿಗಳಿಗೆ ರಕ್ಷಣೆ ನೀಡುವಂತಹ ಭ್ರಷ್ಟ ತಂತ್ರಗಳನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನು ಓದಿ: ಕೇಜ್ರಿವಾಲ್ ‘ಅಂಗಾಂಗ ವೈಫಲ್ಯಗೊಳಿಸಿ ನಿಧಾನವಾಗಿ ಸಾವಿಗೆ ತಳ್ಳಲು ಸಂಚು ರೂಪಿಸಲಾಗುತ್ತಿದೆ’: ಎಎಪಿ