ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಮಾಡಾಳ್ ಪ್ರಶಾಂತ್ ಕಮಿಷನ್ ಲಂಚ ಮತ್ತು ಬಹುಕೋಟಿ ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ನಂತರ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ತೀವ್ರಗೊಳಿಸಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಮಾರ್ಚ್ 9 ರಂದು ಕರ್ನಾಟಕ ಬಂದ್ ಹೋರಾಟಕ್ಕೆ ಕರೆ ನೀಡಿದೆ.
ಪ್ರಕರಣ ಹೊರಬಿದ್ದು 5 ದಿನಗಳಾದರೂ ಪ್ರಮುಖ ಆರೋಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಬಂಧಿಸಿಲ್ಲ ಹಾಗೂ ಸಾಲು ಸಾಲು ಭ್ರಷ್ಟಾಚಾರ ಹಗರಣಗಳ ನೈತಿಕ ಹೊಣೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿಯವರು ರಾಜೀನಾಮೆ ನೀಡಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
“ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರದ ದುರ್ವಾಸನೆ ವಾಕರಿಕೆ ತರಿಸಿದೆ. ಶೇ.40 ಕಮಿಷನ್ ಸರ್ಕಾರದಿಂದ ಜನರ ಬದುಕು ನಾಶವಾಗಿದೆ. ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ ಮತ್ತು ಭ್ರಷ್ಟಾಚಾರಕ್ಕೋಸ್ಕರ ಇರುವ ಸರ್ಕಾರವಾಗಿದೆ. ಇದನ್ನು ವಿರೋಧಿಸಿ ಮಾರ್ಚ್ 9 ರಂದು ಬೆಳಿಗ್ತೆ 9 ಗಂಟೆಯಿಂದ 11 ಗಂಟೆಯವರೆಗೆ ವ್ಯಾಪಾರ ವಹಿವಾಟು ಬಂದ್ ಮಾಡಿ ಹೋರಾಟ ನಡೆಸುತ್ತೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
40% ಕಮಿಷನ್ ಭ್ರಷ್ಟಾಚಾರಕ್ಕೆ ದಾಖಲೆ ಕೊಡಿ ಎಂದು ಸಿಎಂ ಬೊಮ್ಮಾಯಿಯವರು ಹೇಳುತ್ತಿದ್ದರು. ಈಗ ಲೋಕಾಯುಕ್ತ ಅಧಿಕಾರಗಳು ಸಂಪೂರ್ಣ ಸಾಕ್ಷಿ ನೀಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗಲಾದರೂ ಬೊಮ್ಮಾಯಿಯವರು ರಾಜೀನಾಮೆ ನೀಡುವರೆ? ಎಂದು ಅವರು ಪ್ರಶ್ನಿಸಿದ್ದಾರೆ.
ಕೊರಟಗೆರೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿ, “ರಾಜ್ಯದ 40% ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮೋದಿ, ಅಮಿಶ್ ಶಾ ಅವರು ಯಾಕೆ ಏನನ್ನೂ ಮಾತನಾಡುತ್ತಿಲ್ಲ? ಮೋದಿಯವರು ದೇಶದಲ್ಲಿ ಬಹಳ ಭ್ರಷ್ಟಾಚಾರ ಇದೆ ಎನ್ನುತ್ತಾರೆ ಆದರೆ ತಮ್ಮ ಕಣ್ಣ ಕೆಳಗೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಅದನ್ಯಾಕೆ ನೋಡುತ್ತಿಲ್ಲ? ನೀವೂ ತಿನ್ನಿ, ನಮ್ಮ ಪಾಲು ನಮಗೆ ಕಳುಹಿಸಿ ಎಂಬಂತಿದೆ ಅವರ ವರ್ತನೆ” ಎಂದು ಕಿಡಿಕಾರಿದರು.
ಇದನ್ನೂ ಓದಿ: ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹೆಚ್ಚಾದ ಹಿಂಸಾಚಾರ: ಸಿಪಿಐ(ಎಂ) ಆರೋಪ