ವಂದೇ ಮಾತರಂ ವಿವಾದ ತೀವ್ರಗೊಳ್ಳುತ್ತಿರುವಂತೆಯೇ, ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ತೀವ್ರ ಟೀಕೆಗಳ ನಡುವೆಯೂ ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯ ಮೊದಲ ಎರಡು ಚರಣಗಳನ್ನು ಹಾಡುವ ತನ್ನ ದೀರ್ಘಕಾಲದ ಪದ್ಧತಿಯನ್ನು ಗುರುವಾರ ಸಮರ್ಥಿಸಿಕೊಂಡಿದೆ. ತನ್ನ ಐತಿಹಾಸಿಕ ರಾಷ್ಟ್ರೀಯತಾವಾದಿ ಹಿನ್ನೆಲೆಯನ್ನು ಪ್ರತಿಪಾದಿಸಲು ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಹಲವು ನಾಯಕರ ಪರಂಪರೆ ಮತ್ತು ಅನುಮೋದನೆಯನ್ನು ಕಾಂಗ್ರೆಸ್ ಈ ಸಂದರ್ಭದಲ್ಲಿ ಸ್ಮರಿಸಿದೆ.
‘ವಂದೇ ಮಾತರಂ’ ಗಾಯನದ ಕುರಿತು ಪಕ್ಷದ ನಿಲುವು ಸ್ವಾತಂತ್ರ್ಯ ಸಂಗ್ರಾಮದ ಅವಧಿಯ ದೀರ್ಘಕಾಲದ ಸಾಂಸ್ಥಿಕ ನಿರ್ಧಾರದಲ್ಲಿ ಬೇರೂರಿದೆ. ಇದು ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲ ಎಂದು ಕೆಲವು ಕಾಂಗ್ರೆಸ್ ನಾಯಕರು ವಾದಿಸಿದ್ದಾರೆ.
ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಬ್ರಿಟಿಷರ ಕಿರುಕುಳ ಮತ್ತು ಕ್ರಮಗಳನ್ನು ಎದುರಿಸಿದ ಹೊರತಾಗಿಯೂ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಗೀತೆಯನ್ನು ಹಾಡುವುದನ್ನು ಮುಂದುವರಿಸಿದ್ದರು ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಜನ್ ಸಂಘ ಮತ್ತು ಆರ್ಎಸ್ಎಸ್ಗೆ ಸೇರಿದ ಸದಸ್ಯರು ಈ ಗೀತೆಯನ್ನು ಹಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬ್ರಿಟಿಷರಿಗೆ ಮಾಹಿತಿ ನೀಡುತ್ತಿದ್ದರು ಎಂದೂ ಅವರು ಆರೋಪಿಸಿದ್ದಾರೆ.
1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ನಿರ್ಧಾರದ ಮೂಲಕ ಸ್ಥಾಪಿಸಲಾದ ಸಂಪ್ರದಾಯವನ್ನು ಮುಂದುವರಿಸಲು ಸಿಡಬ್ಲ್ಯೂಸಿ ನಿರ್ಧರಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಈ ಸಂಪ್ರದಾಯದಂತೆ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಪಠಿಸಲಾಗುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಗೀತೆಯ ಸಂಪೂರ್ಣ ಗಾಯನವನ್ನು ಅಧಿಕೃತ ಪ್ರೋಟೋಕಾಲ್ನ ಭಾಗವಾಗಿ ಮಾಡಿದ್ದರಿಂದ ಈ ನಿರ್ಧಾರವು ಪ್ರಾಮುಖ್ಯತೆ ಪಡೆದುಕೊಂಡಿದೆ.
ಕಾಂಗ್ರೆಸ್ ಸಂಸದೆ ಜೆಬಿ ಮಾಥರ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಹಲವು ಪ್ರಮುಖ ನಾಯಕರ ನಡುವಿನ ಚರ್ಚೆಯ ನಂತರ ಪಕ್ಷದ ನಿಲುವನ್ನು ಎಚ್ಚರಿಕೆಯಿಂದ ರೂಪಿಸಲಾಗಿತ್ತು. ಈ ಪದ್ಧತಿಯು ಮುಂದುವರಿಯುತ್ತದೆ ಎಂದು ಹೇಳಿದರು.
“ವಂದೇ ಮಾತರಂ ಕುರಿತು ಕಾಂಗ್ರೆಸ್ನ ನಿಲುವು ಇಂದು, ನಿನ್ನೆ ಅಥವಾ ಮೊನ್ನೆ ಹೊರಹೊಮ್ಮಿದ್ದಲ್ಲ. ಇದು 1937ರ ಕೋಲ್ಕತ್ತಾ ಅಧಿವೇಶನದಷ್ಟು ಹಳೆಯದು. ಆಗ ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ ಮತ್ತು ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಮಹಾನ್ ನಾಯಕರು ಒಂದೆಡೆ ಸೇರಿ ಈ ವಿಷಯದ ಬಗ್ಗೆ ಚರ್ಚಿಸಿದರು. ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಹಾಡಲಾಗುವುದು ಎಂಬ ನಿರ್ಣಯವನ್ನು ಅಂಗೀಕರಿಸಿತು” ಎಂದು ಮಾಥರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಆ ನಿರ್ಧಾರ ಇಂದು ಮುಂದುವರಿದಿದೆ, ಎಂದೆಂದಿಗೂ ಮುಂದುವರಿಯುತ್ತದೆ” ಎಂದು ಅವರು ಹೇಳಿದರು.
ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್ ಕೂಡ ‘ವಂದೇ ಮಾತರಂ’ ಜೊತೆಗಿನ ಪಕ್ಷದ ಒಡನಾಟವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಈ ಗೀತೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಆರಂಭದಿಂದಲೂ ಹಾಡುತ್ತಿದ್ದಾರೆ, ಇದು ಸ್ವಾತಂತ್ರ್ಯ ಚಳವಳಿಯ ಪ್ರಮುಖ ಭಾಗವಾಗಿ ಉಳಿದಿದೆ ಎಂದು ಹೇಳಿದರು.
“ನಾವು ಆರಂಭದಿಂದಲೂ ‘ವಂದೇ ಮಾತರಂ’ ಹಾಡುತ್ತಿದ್ದೇವೆ. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಾವು ‘ವಂದೇ ಮಾತರಂ’ ಹಾಡುತ್ತಿದ್ದಾಗ, ಬ್ರಿಟಿಷರ ಈ ಚಾಡಿಕೋರರು ಸ್ವಾತಂತ್ರ್ಯ ಹೋರಾಟಗಾರರು ‘ವಂದೇ ಮಾತರಂ’ ಹಾಡುತ್ತಿದ್ದಾರೆ ಎಂದು ಬ್ರಿಟಿಷರಿಗೆ ಮಾಹಿತಿ ನೀಡುತ್ತಿದ್ದರು. ಬ್ರಿಟಿಷರು ನಮ್ಮ ಬೆನ್ನಿಗೆ ಚಾವಟಿಯಿಂದ ಹೊಡೆಯುತ್ತಿದ್ದರು” ಎಂದು ರಜಪೂತ್ ಹೇಳಿದ್ದಾರೆ.
“ನಾವು ಆಗಲೂ ‘ವಂದೇ ಮಾತರಂ’ ಹಾಡುವುದನ್ನು ನಿಲ್ಲಿಸಲಿಲ್ಲ. ಆ ಸಮಯದಲ್ಲಿ ನಾವು ಹಾಡುತ್ತಿದ್ದ ಅದೇ ‘ವಂದೇ ಮಾತರಂ’ ಅನ್ನು ನಾವು ಇಂದೂ ಹಾಡುತ್ತಿದ್ದೇವೆ. ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಡಿದ ಮತ್ತು ಗುರುದೇವ ರವೀಂದ್ರನಾಥ ಟ್ಯಾಗೋರ್ ಅನುಮೋದಿಸಿದ ‘ವಂದೇ ಮಾತರಂ’ ಅನ್ನು ನಾವು ಹಾಡಿದ್ದೇವೆ, ಹಾಡುತ್ತಿದ್ದೇವೆ ಮತ್ತು ಮುಂಬರುವ ದಿನಗಳಲ್ಲೂ ಹಾಡುವುದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.
“ಈ ಸಂಘದವರು ತಮ್ಮ ಶಾಖೆಗಳಲ್ಲಿ ವಂದೇ ಮಾತರಂ ಅನ್ನು ಏಕೆ ಹಾಡಲಿಲ್ಲ? ನಾವು ಬಿಜೆಪಿಯಿಂದ ಚಾಟಿ ಏಟು ತಿನ್ನಲು ಸಿದ್ಧರಿದ್ದೇವೆ, ಆದರೆ ಇದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತೇವೆ” ಎಂದು ರಜಪೂತ್ ಹೇಳಿದ್ದಾರೆ.


