ಸಣ್ಣಪುಟ್ಟ ಅಸಮಾಧಾನ ಅಥವಾ ಭಿನ್ನಾಪ್ರಾಯಗಳು ಎದುರಾದಾಗಲೆಲ್ಲ ‘ನಾವು Gen Z’ (ಜೆನ್ ಝೀ) ಎಂದು ಹೇಳಿಕೊಳ್ಳುವುದು, ‘ನನ್ನಪ್ಪ ಯಾರು ಗೊತ್ತಾ?’ (ಜಾಂತೇ ನಹೀನ್ ಹೋ, ಮೇರಾ ಬಾಪ್ ಕೌನ್ ಹೈ) ಎಂಬ ಹಳೆಯ ಕಾಲದ ಅಧಿಕಾರದ ಧೋರಣೆಯಂತಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಗಿಲ್ನ ಭದ್ರತಾ ಚೆಕ್ಪೋಸ್ಟ್ವೊಂದರಲ್ಲಿ ಮಹಿಳಾ ಪ್ರವಾಸಿಯೊಬ್ಬರು ಸೇನಾ ಭದ್ರತಾ ಸಿಬ್ಬಂದಿಯೊಂದಿಗೆ ಉದ್ಧಟತನದಿಂದ ವಾಗ್ವಾದ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆದ ಬೆನ್ನಲ್ಲೇ, ಒಮರ್ ಅಬ್ದುಲ್ಲಾ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಇಂತಹ ನಡವಳಿಕೆಯನ್ನು ಬೆದರಿಕೆಯಾಗಿ ಅಥವಾ ಹಕ್ಕಾಗಿ ಬಳಸಲು ಆರಂಭಿಸಿದರೆ, ಯುವ ಪೀಳಿಗೆಯಾದ ‘Gen Z’ ಕುರಿತು ಸಮಾಜದಲ್ಲಿರುವ ಸೌಹಾರ್ದ ಹಾಗೂ ಗೌರವ ಭಾವನೆ ತೀವ್ರವಾಗಿ ಕುಸಿಯುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ವೈರಲ್ ವಿಡಿಯೋದಲ್ಲೇನಿದೆ?
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಕಾರ್ಗಿಲ್ನ ‘ಮಿನಿಮಾರ್ಗ್ ಚೆಕ್ಪೋಸ್ಟ್’ನಲ್ಲಿ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ಸಂಚಾರ ನಿರ್ಬಂಧದ ಕುರಿತು ಏರುಧ್ವನಿಯಲ್ಲಿ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. “ನಾವು Gen Z, ಇಂತಹ ಅಸಂಬದ್ಧತೆಯನ್ನು ಸಹಿಸುವುದಿಲ್ಲ” ಎಂದು ಆಕೆ ಸಿಬ್ಬಂದಿಯ ಮೇಲೆ ಅಸಮಾಧಾನ ವ್ಯಕ್ತಪಡಿಸುವುದು ವಿಡಿಯೋದಲ್ಲಿದೆ.
ಅಷ್ಟೇ ಅಲ್ಲದೆ, “ಪ್ರವಾಸಿಗರ ಸಂಚಾರಕ್ಕೂ ಏಕೆ ನಿರ್ಬಂಧ ವಿಧಿಸುತ್ತಿದ್ದೀರಿ? ಕಾಶ್ಮೀರಿಗಳ ಮೇಲೆ ನಿರಂತರವಾಗಿ ಇಂತಹ ನಿರ್ಬಂಧಗಳನ್ನು ಹೇರುತ್ತಿದ್ದಿರಿ, ಈಗ ಪ್ರವಾಸಿಗರ ಮೇಲೆಯೂ ಹೇರಲು ಆರಂಭಿಸಿದ್ದೀರಾ?” ಎಂದು ಆಕೆ ಸೇನಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
ಈ ವಿಡಿಯೋ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಚರ್ಚೆಗಳು ವ್ಯಕ್ತವಾಗಿವೆ. ಕೆಲವರು ಮಹಿಳೆಯ ಆಕ್ರೋಶವನ್ನು ಸಮರ್ಥಿಸಿಕೊಂಡರೆ, ಇನ್ನು ಬಹುತೇಕರು ಕಾಶ್ಮೀರದಂತಹ ಗಡಿ ಹಾಗೂ ತೀವ್ರ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಆಕೆಯ ಉದ್ಧಟತನವನ್ನು ಖಂಡಿಸಿದ್ದಾರೆ.
ಘಟನೆಯ ನಿಜವಾದ ಹಿನ್ನೆಲೆಯೇನು?
ಪೊಲೀಸ್ ಮತ್ತು ಸೇನಾ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಘಟನೆ ನಡೆದಿದ್ದು ಜುಲೈ 25 ರಂದು. ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಹಿರಿಯ ಸೇನಾಧಿಕಾರಿಗಳು ಜೋಜಿಲಾ-ಗುಮ್ರಿ ಮಾರ್ಗವಾಗಿ ಸಂಚರಿಸಬೇಕಿತ್ತು.
ಆರಂಭದಲ್ಲಿ ಅವರು ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲು ಯೋಜಿಸಿದ್ದರಾದರೂ, ಪ್ರತಿಕೂಲ ಹವಾಮಾನದ ಕಾರಣದಿಂದ ಗುಮ್ರಿಯವರೆಗೆ ತಲುಪಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರ್ಗಿಲ್ಗೆ ಪ್ರಯಾಣಿಸಿದ್ದರು. ವಿಐಪಿ (VIP) ಹಾಗೂ ವಿವಿಐಪಿಗಳ ಸುರಕ್ಷತೆ ಮತ್ತು ಗಡಿ ಪ್ರದೇಶದ ಭದ್ರತೆಯ ಹಿತದೃಷ್ಟಿಯಿಂದ ಆ ಮಾರ್ಗದಲ್ಲಿ ವಾಹನ ಸಂಚಾರವನ್ನು ಕೆಲಕಾಲ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.
1999ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯವನ್ನು ಸ್ಮರಿಸುವ ‘ಕಾರ್ಗಿಲ್ ವಿಜಯ ದಿವಸ್’ (ಜುಲೈ 26) ಆಚರಣೆಯ ಹಿಂದಿನ ದಿನವೇ ಈ ಘಟನೆ ನಡೆದಿದ್ದು, ದೇಶದ ಭದ್ರತಾ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪ್ರವಾಸಿಗರು ಈ ರೀತಿ ವರ್ತಿಸಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.


