ಮುಂಬೈ: ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಆರ್ಎಸ್ಎಸ್ನ ಸಕ್ರಿಯ ಸದಸ್ಯರಾಗಿದ್ದರು ಎಂದು ವಿನಾಯಕ್ ದಾಮೋದರ್ ಸಾವರ್ಕರ್ ಅವರ ಸೋದರಳಿಯ ಸತ್ಯಕಿ ಸಾವರ್ಕರ್ ನ್ಯಾಯಾಲಯದ ವಿಚಾರಣೆ ವೇಳೆ ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಭಾರೀ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತಕ್ಷಣವೇ ದೇಶದ ಜನತೆಗೆ ಸ್ಪಷ್ಟೀಕರಣ ನೀಡಬೇಕು ಎಂದು ಕಾಂಗ್ರೆಸ್ ಮಂಗಳವಾರ ತೀವ್ರವಾಗಿ ಒತ್ತಾಯಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸತ್ಯಕಿ ಸಾವರ್ಕರ್ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಸೋಮವಾರ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಪ್ರತಿವಾದಿಯ ವಕೀಲರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತ್ಯಕಿ ಸಾವರ್ಕರ್, “ತಮ್ಮ ತಾಯಿಯ ಅಜ್ಜ ನಾಥೂರಾಮ್ ಗೋಡ್ಸೆ ಮತ್ತು ಅವರ ಸಹೋದರ ಗೋಪಾಲ್ ಗೋಡ್ಸೆ ಇಬ್ಬರೂ ಆರ್ಎಸ್ಎಸ್ನ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂಬುದು ನಿಜ” ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ನಾಥೂರಾಮ್ ಗೋಡ್ಸೆ ಅವರು ಹಿಂದೂ ಮಹಾಸಭಾದ ಕಾರ್ಯಕರ್ತರಾಗಿಯೂ ಸಕ್ರಿಯರಾಗಿದ್ದರು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಆದರೆ, ಗೋಪಾಲ್ ಗೋಡ್ಸೆ ಅವರು ಜನವರಿ 28, 1994 ರಂದು ‘ಫ್ರಂಟ್ಲೈನ್’ ನಿಯತಕಾಲಿಕೆಗೆ ನೀಡಿದ್ದ ಸಂದರ್ಶನದ ಕುರಿತು ಅಥವಾ ನಾಥೂರಾಮ್ ಗೋಡ್ಸೆ 1944 ರಲ್ಲಿ ಆರೆಸ್ಸೆಸ್ನ “ಬೌದ್ಧಿಕ್ ಕಾರ್ಯವಾಹ” ಆಗಿ ಕಾರ್ಯನಿರ್ವಹಿಸುತ್ತಿದ್ದರೆ ಎಂಬ ಪ್ರಶ್ನೆಗಳಿಗೆ ತಮಗೆ ಮಾಹಿತಿ ಇಲ್ಲ ಎಂದು ಸತ್ಯಕಿ ಸ್ಪಷ್ಟಪಡಿಸಿದರು. ವಿಚಾರಣೆಯ ಸಂದರ್ಭದಲ್ಲಿ ಆರ್ಎಸ್ಎಸ್ ಮತ್ತು ಗಾಂಧೀಜಿ ಹತ್ಯೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿದಾಗ, ಸತ್ಯಕಿ ಪರ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ಆಕ್ಷೇಪ ವ್ಯಕ್ತಪಡಿಸಿ, ಈ ಪ್ರಶ್ನೆಗಳು ಪ್ರಸ್ತುತ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ವಾದಿಸಿದರು.
ಈ ಬೆಳವಣಿಗೆಯ ಬೆನ್ನಲ್ಲೇ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರು ‘X’ (ಟ್ವಿಟರ್) ತಾಣದಲ್ಲಿ ಪೋಸ್ಟ್ ಮಾಡಿ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “1948 ರ ಜನವರಿಯಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಾದಾಗಿನಿಂದಲೂ, ಗೋಡ್ಸೆ ಸಹೋದರರಿಗೂ ತಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದೇ ಆರ್ಎಸ್ಎಸ್ ಪ್ರತಿಪಾದಿಸುತ್ತಾ ಬಂದಿದೆ. ಆದರೆ ಈಗ ಸಾವರ್ಕರ್ ಕುಟುಂಬದ ಸದಸ್ಯರೇ ನ್ಯಾಯಾಲಯದಲ್ಲಿ ಈ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಆರ್ಎಸ್ಎಸ್ ಇಷ್ಟು ದಿನ ಜನರಿಗೆ ಸುಳ್ಳು ಹೇಳುತ್ತಿತ್ತೇ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಬೇಕು” ಎಂದು ಸಾವಂತ್ ಆಗ್ರಹಿಸಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಅವರು ಸೆಪ್ಟೆಂಬರ್ 11, 1948 ರಂದು ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಆರ್ಎಸ್ಎಸ್ ಮುಖ್ಯಸ್ಥ ಎಂ.ಎಸ್. ಗೋಲ್ವಾಲ್ಕರ್ ಅವರಿಗೆ ಬರೆದಿದ್ದ ಐತಿಹಾಸಿಕ ಪತ್ರವನ್ನು ಉಲ್ಲೇಖಿಸಿದ್ದಾರೆ. ಗಾಂಧೀಜಿಯವರ ನಿಧನದ ನಂತರ ಆರ್ಎಸ್ಎಸ್ನ ಕೆಲ ಸದಸ್ಯರು ಸಂತೋಷ ವ್ಯಕ್ತಪಡಿಸಿ ಸಿಹಿತಿಂಡಿಗಳನ್ನು ಹಂಚಿದ್ದರು, ಈ ಕಾರಣಕ್ಕಾಗಿಯೇ ಸಂಘದ ವಿರುದ್ಧ ಸಾರ್ವಜನಿಕ ವಿರೋಧ ತೀವ್ರಗೊಂಡಿತ್ತು ಎಂದು ಪಟೇಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು ಎಂಬುದನ್ನು ಸಾವಂತ್ ನೆನಪಿಸಿದ್ದಾರೆ.
ಲಂಡನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಿ.ಡಿ. ಸಾವರ್ಕರ್ ಅವರು ಒಮ್ಮೆ ಮುಸ್ಲಿಂ ವ್ಯಕ್ತಿಯೊಬ್ಬನನ್ನು ತಮ್ಮ ಸ್ನೇಹಿತರು ಹೊಡೆಯುತ್ತಿದ್ದಾಗ ಅದನ್ನು ನೋಡಿ ಸಂತೋಷಪಟ್ಟಿದ್ದರು ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಸಾವರ್ಕರ್ ಅವರು ತಮ್ಮ ಯಾವುದೇ ಪುಸ್ತಕದಲ್ಲೂ ಅಂತಹ ಬರಹವನ್ನು ಬರೆದಿಲ್ಲ, ರಾಹುಲ್ ಗಾಂಧಿ ಅವರು ಸಾವರ್ಕರ್ ಅವರಿಗೆ ಅವಹೇಳನ ಉಂಟುಮಾಡುವ ಉದ್ದೇಶದಿಂದ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸತ್ಯಕಿ ಸಾವರ್ಕರ್ 2023 ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಮಾನನಷ್ಟ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಪ್ರಸ್ತುತ ನ್ಯಾಯಾಲಯದಲ್ಲಿ ನಡೆಯುತ್ತಿದೆ.


