ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ರಾಜ್ಯದಲ್ಲಿ ಸೃಷ್ಟಿಸಿರುವ ಅವಾಂತರಗಳ ವಿರುದ್ಧ ಗುರುವಾರ (ಆ.20) ಬೆಂಗಳೂರಿನ ಗಾಂಧಿ ಭವನದಲ್ಲಿ ‘ಸಾಂಸ್ಕೃತಿಕ ಪ್ರತಿರೋಧ’ ಹಮ್ಮಿಕೊಳ್ಳಲಾಗಿದೆ.
ನಾಗರಿಕ ಮತ ಕಾವಲು ಸಮಿತಿ ಆಯೋಜಿಸಿರುವ ಕಾರ್ಯಕ್ರಮವನ್ನು ನಟ ಕಿಶೋರ್ ಉದ್ಘಾಟಿಸಿ ಮಾತನಾಡಲಿದ್ದು, ನಾಡಿನ ಅನೇಕ ಸಾಂಸ್ಕೃತಿಕ ಗಣ್ಯರು ಜತೆಯಾಗಲಿದ್ದಾರೆ. ಸಂಜೆ 4.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
ತಮಟೆ, ಜಂಬೆ, ನಗಾರಿ ತಂಡಗಳು, ಹಾಡುಗಾರರು, ಕಿರುತೆರೆಯ ಕಲಾವಿದರು, ಜನಪದ ಕಲಾವಿದರು, ನೃತ್ಯ ಕಲಾವಿದರು, ಚಿತ್ರ ಕಲಾವಿದರು, ಕವಿ, ಬರಹಗಾರರು, ಚಿಂತಕರು, ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಹಲವಾರು ಸಾಂಸ್ಕೃತಿಕ ತಂಡಗಳು ಈ ಪ್ರತಿರೋಧ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿವೆ.
ಭಾರತದ ಸಂವಿಧಾನವನ್ನು ಒಪ್ಪದವರು ಯಾವಾಗಲು ದೇಶ ಒಡೆಯುವ ಕುತಂತ್ರವನ್ನು ಹೆಣೆಯುತ್ತಾರೆ. ಅಂತಹ ಅನೇಕ ಪ್ರಯತ್ನಗಳನ್ನು, ಸಂವಿಧಾನ ವಿರೋಧಿ ನಡೆಗಳನ್ನು ಪ್ರಶ್ನಿಸಿಕೊಂಡು ಬಂದ ಈ ದೇಶದ ಬಹುಸಂಖ್ಯಾತ ಶೋಷಿತ ಸಮುದಾಯಗಳನ್ನು ಗುರಿಯಾಗಿಸಿ ಎಸ್ಐಆರ್ ನೆಪದಲ್ಲಿ ಮತದಾರರ ಪಟ್ಟಿಯಿಂದ ಹೊರದಬ್ಬುವ ಎಲ್ಲಾ ವ್ಯವಸ್ಥಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮತ ಕಾವಲು ಸಮಿತಿ ಹೇಳಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಎಸ್ಐಆರ್ ಸಂವಿಧಾನದ ಆಶಯಕ್ಕೆ ವಿರುದ್ದವಾಗಿದೆ. ಕೋಟಿ ಕೋಟಿ ಅರ್ಹ ಜನರ ವೋಟಿನ ಹಕ್ಕನ್ನು ಕಸಿಯಲಾಗುತ್ತಿದೆ. ಇದನ್ನು ತಡೆಯಲು ಕರ್ನಾಟಕದ ಜೀವಪರ ಕಲಾವಿದರು ದನಿಮಾಡುತ್ತಿದ್ದಾರೆ ಎಂದು ಕಾರ್ಯಕ್ರಮದ ಕುರಿತು ಸಮಿತಿ ವಿವರಿಸಿದೆ.


