ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್ ಪಿ ಜಿ ( ವಿಶೇಷ ಭದ್ರತೆ)ಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಲೋಕಸಭೆಯಲ್ಲಿ ಇಂದು ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್.ಪಿ.ಜಿ ಭದ್ರತೆಯನ್ನು ವಾಪಸ್ ಪಡೆದಿರುವುದನ್ನು ವಿರೋಧಿಸಿ, ಕಾಂಗ್ರೆಸ್ ನಾಯಕರು ಗದ್ದಲ ಎಬ್ಬಿಸಿದರು. ಬಿಜೆಪಿ ನಾಯಕರು ಮತ್ತು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.
ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್.ಪಿ.ಜಿ ಭದ್ರತೆ ವಾಪಸ್ ತೆಗೆದುಕೊಂಡಿದ್ದು ಏಕೆ..? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇದಕ್ಕೆ ಉತ್ತರ ನೀಡಬೇಕು ಎಂದು ಪಟ್ಟು ಹಿಡಿಯಿತು. ಕಾಂಗ್ರೆಸ್ ನಾಯಕರು ಗಲಾಟೆ ಮಾಡುತ್ತಿದ್ದಂತೆಯೇ, ಏನೊಂದು ಪ್ರತಿಕ್ರಿಯಿಸದೇ ಗೃಹ ಸಚಿವ ಅಮಿತ್ ಶಾ ಹೊರ ನಡೆದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಿದ್ದ ಎಸ್.ಪಿ.ಜಿ ಭದ್ರತೆಯನ್ನು ಹಿಂಪಡೆದಿದ್ದೇಕೆ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದರು. ಝಡ್ ಪ್ಲಸ್ ವಿಭಾಗದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ 100 ಸಿಬ್ಬಂದಿಯಿಂದ ಭದ್ರತಾ ರಕ್ಷಣೆಯನ್ನು ಖಾತ್ರಿ ಮಾಡಿದೆ.
ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಗಾಂಧಿ ಕುಟುಂಬಕ್ಕೆ ಎಸ್ಪಿಜಿ ಭದ್ರತೆ ಹಿಂಪಡೆಯುವ ನಿರ್ಧಾರವನ್ನು ವಿರೋಧಿಸಿ, ನೋಟಿಸ್ ನೀಡಿದ್ದಾರೆ. ಇದನ್ನು ಪರಿಶೀಲಿಸುವಂತೆ ಮಾಡಿದ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸಾಮಾನ್ಯ ವ್ಯಕ್ತಿಗಳಲ್ಲ. 1991ರಲ್ಲಿ ಎನ್.ಡಿ.ಎ ಸರ್ಕಾರ ಜಾರಿಯಾದಾಗ ಮತ್ತು 2019ರವರೆಗೆ ಗಾಂಧಿ ಕುಟುಂಬಕ್ಕೆ ನೀಡಿದ ಎಸ್.ಪಿ.ಜಿ ಭದ್ರತೆಯನ್ನು ಹಿಂಪಡೆದಿರಲಿಲ್ಲ. ಆದರೆ ಈಗ ಯಾಕೆ ಭದ್ರತೆ ಹಿಂಪಡೆದಿದ್ದೀರಿ ಎಂದು ಪ್ರಶ್ನಿಸಿ 20ಕ್ಕೂ ಹೆಚ್ಚು ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಆಗ ಸ್ಪೀಕರ್ ಓಂ ಬಿರ್ಲಾ ತಮ್ಮ ಸ್ಥಾನಗಳಿಗೆ ಮರಳುವಂತೆ ನಾಯಕರಲ್ಲಿ ಮನವಿ ಮಾಡಿದರು. ಆದರೆ ನಾಯಕರು ಪ್ರತಿಭಟನೆ ಮುಂದುವರೆಸಿದರು.
ಪ್ರಧಾನಿ ಉತ್ತರ ನೀಡಲೇಬೇಕು. ದಯವಿಟ್ಟು ಪ್ರತೀಕಾರದ ರಾಜಕೀಯ ನಿಲ್ಲಿಸಿ. ಸರ್ವಾಧಿಕಾರತ್ವವನ್ನು ಕೊನೆಗೊಳಿಸಿ, ನಮಗೆ ನ್ಯಾಯ ಬೇಕು ಎಂದು ಕಾಂಗ್ರೆಸ್ ನಾಯಕರು ಘೋಷಣೆ ಕೂಗಿದರು ಎಂದು ಮೂಲಗಳು ತಿಳಿಸಿವೆ.
ಇನ್ನು 1991 ರ ಮೇ ತಿಂಗಳಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದ ನಂತರ ಗಾಂಧಿ ಕುಟುಂಬಕ್ಕೆ ಎಸ್ಪಿಜಿ ವ್ಯಾಪ್ತಿಗೆ ಒಳಪಡಿಸಿ, ಭದ್ರತೆ ನೀಡಲಾಗಿತ್ತು. 2019ರ ನವೆಂಬರ್ 8 ರಂದು ಗಾಂಧಿ ಕುಟುಂಬಕ್ಕೆ ಎಸ್ಪಿಜಿ ರಕ್ಷಣೆಯನ್ನು ತೆಗೆದುಹಾಕಲಾಯಿತು.