ಮಹಾರಾಷ್ಟ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸರ್ಕಸ್ ನಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಮುನ್ನೆಲೆಗೆ ಬಂದಿವೆ. ಶಿವಸೇನೆ ಎರಡೂ ಪಕ್ಷಗಳ ನಾಯಕರ ಮುಂದೆ ಮೈತ್ರಿ ಮನವಿಯನ್ನು ಮುಂದಿಟ್ಟಿದೆ. ಈಗ ರಾಜ್ಯ ರಾಜಕೀಯದ ಚೆಂಡು ಕಾಂಗ್ರೆಸ್ ಮತ್ತು ಎನ್ಸಿಪಿ ಕೋಟ್ನಲ್ಲಿದೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸಿಡಬ್ಲ್ಯುಸಿ ( ಕಾಂಗ್ರೆಸ್ ವರ್ಕಿಂಗ್ ಕಮಿಟಿ) ಸಭೆ ಕರೆದಿದ್ದು, ದೆಹಲಿಯ ಸೋನಿಯಾ ನಿವಾಸದಲ್ಲಿ ಸಭೆ ಆರಂಭಗೊಂಡಿದೆ. ಮಹಾರಾಷ್ಟ್ರ ಕಾಂಗ್ರೆಸ್ನ ಕೆಲ ಶಾಸಕರು ಎನ್ಸಿಪಿಗೆ ಕಾಂಗ್ರೆಸ್ ಬೆಂಬಲ ನೀಡಬೇಕು. ಎನ್ಸಿಪಿ ಅಧಿಕಾರಕ್ಕೆ ಬರುತ್ತದೆಯಾದರೆ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ಸೂಚಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಆದರೆ ಬಲಪಂಥೀಯ ಸಿದ್ಧಾಂತ ಹೊಂದಿರುವ ಶಿವಸೇನೆಗೆ ಬೆಂಬಲ ಸೂಚಿಸುವುದು ಎಷ್ಟು ಸರಿ ಎಂದು ಸೋನಿಯಾ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಹುಮತದ ಕೊರತೆಯಿಂದಾಗಿ ಸರ್ಕಾರ ರಚಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ. ಶಿವಸೇನೆ ಕೂಡ ಬಿಜೆಪಿಯನ್ನು ಬಿಟ್ಟು ಸರ್ಕಾರ ರಚಿಸುವುದಾಗಿ ಹೇಳಿದೆ. ಈಗ ಕಾಂಗ್ರೆಸ್ ಸಭೆಯಲ್ಲಿ ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಬೇಕೋ, ಬೇಡವೋ ಎಂನ ಬಗ್ಗೆ ನಿರ್ಧಾರವಾಗಲಿದೆ. ಬಿಜೆಪಿ ಮತ್ತು ಶಿವಸೇನೆ ನಡುವಿನ ಒಡಕಿನಿಂದಾಗಿ, ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅರವಿಂದ್ ಸಾವಂತ್ ಅವರನ್ನು ಕಿತ್ತು ಹಾಕಲಾಗಿದೆ. ಇನ್ನು ಕಾಂಗ್ರೆಸ್ ಜತೆ ಚರ್ಚಿಸಿದ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಇನ್ನು ಹಿಂದುತ್ವ ರಾಜಕಾರಣ, ಕಾಂಗ್ರೆಸ್ ವಿರೋಧಿ ಚಟುವಟಿಕೆಯನ್ನು ಬಲಗೊಳಿಸಿರುವ ಬಲಪಂಥೀಯ ಸಿದ್ಧಾಂತ ಹೊಂದಿರುವ ಶಿವಸೇನೆಯನ್ನು ಬೆಂಬಲಿಸುವುದು ಕಾಂಗ್ರೆಸ್ಗೆ ಕಷ್ಟಕರವಾಗಲಿದೆ. ಒಂದು ವೇಳೆ ಬೆಂಬಲ ಸೂಚಿಸುವುದಾದರೆ ಕಾಂಗ್ರೆಸ್ ಕೆಲವು ಕಾರ್ಯಕ್ರಮ ಮತ್ತು ನೀತಿಗಳನ್ನು ರಚಿಸಿ, ಒತ್ತಾಯಿಸುವ ಸಾಧ್ಯತೆಯಿದೆ.
ಇನ್ನು ಕಾಂಗ್ರೆಸ್ ನಾಯಕ ಅಶೋಕ್ ಚವ್ಹಾಣ್ ಮಾತನಾಡಿ, ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ರಚನೆಯಾಗಲೆಂದು ಪಕ್ಷ ಬಯಸುತ್ತದೆ. ಯಾವುದೇ ಕಾರಣಕ್ಕೂ ರಾಷ್ಟ್ರಪತಿ ಆಡಳಿತ ಜಾರಿಯಾಗದೇ ಇರಲಿ ಎಂದು ಹೇಳಿದರು.