ನಿರ್ಭಿತ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ನಮ್ಮನ್ನಗಲಿ ಇಂದಿಗೆ (ಸೆಪ್ಟಂಬರ್ 5) ನಾಲ್ಕು ವರ್ಷ. ಅವರ ನೆನಪಿನಲ್ಲಿ ಇಂದು ಹಲವು ಕಾರ್ಯಕ್ರಮಗಳ ಜೊತೆಗೆ ಚರ್ಚೆಗಳು ಆಯೋಜನೆಗೊಂಡಿವೆ. ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಚರ್ಚಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ.
ನಾನುಗೌರಿ.ಕಾಂ ಮತ್ತು ನ್ಯಾಯಪಥ ಪತ್ರಿಕೆಯ ಸಹಯೋಗದಲ್ಲಿ “ಗೌರಿ ಹತ್ಯೆ ಪ್ರಕರಣ ಮತ್ತು ಹಿಂಸೆಯನ್ನು ಎದುರುಗೊಳ್ಳುವ ಅಗತ್ಯ” ಎಂಬ ವಿಷಯದಲ್ಲಿ ಕ್ಲಬ್ ಹೌಸ್ ಸಂವಾದ ಆಯೋಜಿಸಿದೆ.
ಸಂವಾದವನ್ನು ಚಿಂತಕರಾದ ಶಿವಸುಂದರ್ ಮತ್ತು ಪತ್ರಕರ್ತರಾದ ಆದಿತ್ಯ ಭಾರದ್ವಾಜ್ ಪ್ರಾರಂಭಿಸಲಿದ್ದಾರೆ. ಇಂದು ಸಂಜೆ (ಭಾನುವಾರ) ಸಂಜೆ 7 ಗಂಟೆಯಿಂದ ಸಂವಾದ ಪ್ರಾರಂಭವಾಗಲಿದೆ.
ಗೌರಿ ಮೆಮೋರಿಯಲ್ ಟ್ರಸ್ಟ್ ಮತ್ತು ಸಿಟಿಜನ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸಹಯೋಗದಲ್ಲಿ ಸೆ.5 ರಂದು zoom ವೇದಿಕೆಯಲ್ಲಿ ಮೃತ ಫಾದರ್ ಸ್ಟಾನ್ ಸ್ವಾಮಿ ಪ್ರಕರಣದಲ್ಲಿ ಪ್ರಮುಖರಾಗಿದ್ದ ಹಿರಿಯ ವಕೀಲ ಮಿಹೀರ್ ದೇಸಾಯಿ ಅವರಿಂದ “ಟೆರರ್ ಲಾ ಅಂಡರ್ ಪ್ರೋಟೋ ಫ್ಯಾಸಿಸ್ಟ್ ರೆಜಿಮ್” (ಫ್ಯಾಸಿಸ್ಟ್ ಆಡಳಿತದ ಅಡಿಯಲ್ಲಿ ಭಯೋತ್ಪಾದನಾ ಕಾನೂನುಗಳು) ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ.
ಈ ವೇದಿಕೆಯಲ್ಲಿ ಯುವ ಹೋರಾಟಗಾರರಾದ ನತಾಶಾ ನರ್ವಾಲ್, ದೇವಂಗಾನಾ ಕಾಲಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಮಾತನಾಡಲಿದ್ದಾರೆ. ಗೌರಿ ಲಂಕೇಶ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ
ಎನ್ಆರ್ಸಿ, ಸಿಎಎ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದ ಇವರ ವಿರುದ್ಧ, ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿ, ಮೂವರು ವಿದ್ಯಾರ್ಥಿ ಹೋರಾಟಗಾರರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ(UAPA)ಯಡಿ ಪ್ರಕರಣ ದಾಳಲಿಸಿದ್ದರು. ಒಂದು ವರ್ಷದಿಂದ ಜೈಲಿನಲ್ಲಿದ್ದ ಮೂವರು, ಕಳೆದ ಜೂನ್ನಲ್ಲಿ ಜಾಮೀನು ಪಡೆದಿದ್ದಾರೆ.
ಜೈಲಿನಿಂದ ಬಿಡುಗಡೆಗೊಂಡಿದ್ದ ಯುವ ಹೋರಾಟಗಾರರು, ‘‘ಜೈಲನ್ನು ತೋರಿಸಿ ನಮ್ಮನ್ನು ಹೆದರಿಸಬೇಡಿ. ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆ ನಿರಂತರ. ಇದು ಸರ್ಕಾರದ ಹತಾಶೆಯನ್ನು ತೋರಿಸುತ್ತದೆ. ನಾವು ಅವರಿಗೆ ಹೆದರದವರು. ನಮ್ಮನ್ನು ಜೈಲಿನಲ್ಲಿರಿಸುವುದಾಗಿ ಬೆದರಿಕೆ ಹಾಕಿದರೆ, ಅದು ನಮ್ಮ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ಬಲಪಡಿಸುತ್ತದೆ’’ ಎಂದು ಹೇಳಿ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದ್ದರು.
ಕ್ಲಬ್ ಹೌಸ್ನಲ್ಲಿಯೂ ಗೌರಿ ದಿನದ ಅಂಗವಾಗಿ ’ಸಹಮತ’ ತಂಡ “ಗಾಂಧಿ ಕೊಂದವರೇ ಕಲ್ಬುರ್ಗಿ ಕೊಂದರು; ಗೌರಿಯನ್ನೂ ಕೊಂದರು” ಎಂಬ ಚರ್ಚೆ ಆಯೋಜಿಸಿದೆ.
ಚರ್ಚೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಹೋರಾಟಗಾರ್ತಿ ಕೆ.ನೀಲಾ ಮತ್ತು ಪತ್ರಕರ್ತ ನವೀನ್ ಸೂರಿಂಜೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಸೆ.5 ರ ಸಂಜೆ 4 ಗಂಟೆಗೆ ಚರ್ಚೆ ನಡೆಯಲಿದೆ.
ವಾರ್ತಾಭಾರತಿ ಯುಟ್ಯೂಬ್ ಚಾನೆಲ್ನಲ್ಲಿಯೂ ಬೆಳಗ್ಗೆಯಿಂದಲೇ ಹಲವು ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 11 ಗಂಟೆಗೆ “ಗೌರಿ ಹತ್ಯೆ ಪ್ರಕರಣ ಇನ್ನೂ ವಿಚಾರಣೆ ಆರಂಭವೇ ಆಗಿಲ್ಲವೇಕೆ..?” ಎಂಬುದರ ಬಗ್ಗೆ ಹಿರಿಯ ನ್ಯಾಯವಾದಿ ಎಸ್.ಬಾಲನ್ ಅವರ ವಿಶೇಷ ಸಂದರ್ಶನವಿದೆ. ಸಂಜೆ 5:30ಕ್ಕೆ ಗಂಟೆಗೆ ಗೌರಿ ಲಂಕೇಶ್ ಅವರ ಬಗ್ಗೆ ಕವಿತಾ ಲಂಕೇಶ್, ಶಿವಸುಂದರ್, ಬಿ.ಎಂ ಬಶೀರ್ ಮತ್ತು ಶಂಕರ್ ಎನ್.ಕೆಂಚನೂರು ಅವರು ಬರೆದಿರುವ ಕವನ ವಾಚನ ನಡೆಯಲಿದೆ. ಕವನಗಳನ್ನು ಮುಆದ್ ಜಿ.ಎಂ ವಾಚಿಸಲಿದ್ದಾರೆ. ಸಂಜೆ 7:30ಕ್ಕೆ “ನಾನುಗೌರಿ” ಕಿರುಚಿತ್ರ ಪ್ರಸಾರವಾಗಲಿದೆ.
ಇದನ್ನೂ ಓದಿ: ವಿದ್ಯಾರ್ಥಿ ಹೋರಾಟಗಾರರ ಪ್ರಕರಣ: ಜಾಮೀನು ತಡೆಗೆ ನಿರಾಕರಿಸಿದ ಸುಪ್ರೀಂಕೋರ್ಟ್